19ರ ಯುವತಿಯೊಂದಿಗೆ ಪ್ರೇಮ: 40 ವರ್ಷದ ವ್ಯಕ್ತಿಯ ಭೀಕರ ಹತ್ಯೆ
ರಾಮನಗರ: 19 ವರ್ಷದ ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ 40 ವರ್ಷದ ವ್ಯಕ್ತಿಯೊಬ್ಬನನ್ನು ಯುವತಿಯ ತಂದೆ ಹಾಗೂ ಸಂಬಂಧಿಕರು ಸೇರಿ ಭೀಕರವಾಗಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ನಡೆದಿದೆ. ಮೃತನನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ನಿವಾಸಿ ಚಲುವ (40) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಕೂಲಿ ಕೆಲಸ ಮಾಡುತ್ತಿದ್ದ ಚಲುವ, ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ತನ್ನ ದೂರದ ಸಂಬಂಧಿ ಕೆಂಪಣ್ಣ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದನು. ಕಳೆದ 15 ದಿನಗಳ ಹಿಂದೆ ಈ ಜೋಡಿ ಓಡಿಹೋಗಿ ಮಂಡ್ಯದಲ್ಲಿ ಆಶ್ರಯ ಪಡೆದಿತ್ತು. ನಂತರ ಹಿರಿಯರ ಸಮ್ಮುಖದಲ್ಲಿ ಸಂಧಾನ ನಡೆಸಿ ಯುವತಿಯನ್ನು ವಾಪಸ್ ಮನೆಗೆ ಕರೆತರಲಾಗಿತ್ತು. ಆದರೆ, “ತನ್ನ ಪ್ರೇಯಸಿಯನ್ನು ಯುವತಿಯ ತಂದೆಯ ಮನೆಯಲ್ಲಿ ಕೂಡಿ ಹಾಕಿದ್ದಾರೆ” ಎಂದು ಚಲುವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಯುವತಿಯ ತಂದೆಯನ್ನು ಕೆರಳಿಸಿತ್ತು.
ಇದರಿಂದ ಆಕ್ರೋಶಗೊಂಡ ಕೆಂಪಣ್ಣ ಹಾಗೂ ಆತನ ಬಾಮೈದರು ಸೇರಿ ಕುಣಿಗಲ್ ನಲ್ಲಿ ಚಲುವನನ್ನು ಅಪಹರಿಸಿ, ಚಲಿಸುವ ಕಾರಿನಲ್ಲೇ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳವೊಂದರಲ್ಲಿ ಎಸೆದು ಪರಾರಿಯಾಗಿದ್ದರು. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಆರೋಪದಡಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























