2:00 AM Thursday 16 - October 2025

ಲಾಕ್ ಡೌನ್… ಬದುಕು ಇನ್ನು ಕಷ್ಟ | ಬೆಂಗಳೂರು ತೊರೆದು ಊರಿಗೆ ತೆರಳುತ್ತಿರುವ ಲಕ್ಷಾಂತರ ಜನರು

lockdown karnataka
27/04/2021

ಬೆಂಗಳೂರು: ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಬದುಕು ಸಾಗಿಸುವುದು ಕಷ್ಟ. ನಾವು ನಮ್ಮ ಊರುಗಳಿಗೆ ತೆರಳುತ್ತಿದ್ದೇವೆ ಎಂದು ಸಾವಿರಾರು ಜನರು ಇಂದು ಬೆಂಗಳೂರನ್ನು ಖಾಲಿ ಮಾಡಿ ತಮ್ಮ ಊರಿಗೆ ತೆರಳುತ್ತಿದ್ದಾರೆ.

ಇಂದು ರಾತ್ರಿಯಿಂದಲೇ ರಾಜ್ಯದಲ್ಲಿ ಲಾಕ್ ಡೌನ್ ಹೆಸರು ಹೇಳದೆಯೇ ಸರ್ಕಾರ ಕಠಿಣ ಕ್ರಮ ಘೋಷಿಸಿದ್ದರಿಂದಾಗಿ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಬೆಂಗಳೂರಿನಿಂದ ಹೊರಗೆ ತೆರಳುತ್ತಿದ್ದಾರೆ.

ಬೆಂಗಳೂರು ರಾಜ್ಯ ಹೆದ್ದಾರಿ ವಾಹನಗಳಿಂದ ತುಂಬಿ ತುಳುಕುತ್ತಿದೆ. ಲಾಕ್ ಡೌನ್ ಜಾರಿಗೂ ಮೊದಲು ಮನೆ ಸೇರಿಕೊಳ್ಳಲು ಜನರು ಆತುರಾತುವಾಗಿ ಬೆಂಗಳೂರಿನಿಂದ ಹೊರಟಿದ್ದಾರೆ. ತಮ್ಮ ಸರಕುಗಳನ್ನು ತುಂಬಿಸಿಕೊಂಡು ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಇನ್ನೂ ಊರಿಗೆ ತೆರಳುತ್ತಿರುವ ಕೂಲಿ ಕಾರ್ಮಿಕನೋರ್ವ  ಈ ಬಗ್ಗೆ ಪ್ರತಿಕ್ರಿಯಿಸಿ, ಕೂಲಿ ಕೆಲಸಕ್ಕೆಂದು ಊರಿನಿಂದ ಬಂದಿದ್ದೆವು. ಆದರೆ, ಈಗ ಲಾಕ್ ಡೌನ್ ಆಗಿದೆ. ಕೆಲಸ ಇನ್ನು ಸಿಗುವುದಿಲ್ಲ. ಹಾಗಾಗಿ ಊರಿಗೆ ತೆರಳಿದ್ದೇವೆ ಎಂದು ಹೇಳಿದ್ದಾರೆ.

ಇನ್ನೋರ್ವ ಪ್ರಯಾಣಿಕ ಮಾತನಾಡಿ, ಸರ್, ನಾನು  ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರೈವೇಟ್ ಕಂಪೆನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದೆ. ಆದರೆ, ಲಾಕ್ ಡೌನ್ ಆಗಿದ್ದರಿಂದ ಇಲ್ಲಿ ಬದುಕುವುದು ಕಷ್ಟವಾಗಿದೆ. ಕೆಲಸಕ್ಕೆ ಹೋಗಲು ಕೂಡ ಪರ್ಯಾಯ ವ್ಯವಸ್ಥೆಗಳಿಲ್ಲ. ರೂಮ್ ಬಾಡಿಗೆಗಳನ್ನು ಭರಿಸಿಕೊಂಡು ಇಲ್ಲಿ ನಿಲ್ಲಲು ಸಾಧ್ಯವಿಲ್ಲ ಹಾಗಾಗಿ ಊರಿಗೆ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನೂ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನ ಸಾಗರವೇ ತುಂಬಿದ್ದು, ಲಾಕ್ ಡೌನ್ ಆಗುವುದಕ್ಕೂ ಮೊದಲು ಊರು ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಬಸ್ ಗಳಲ್ಲಿ ಜನರು  ತುಂಬುತ್ತಿದ್ದು, ಸಾರಿಗೆ ಸಂಸ್ಥೆ  ಸಿಬ್ಬಂದಿ  ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version