ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಟಾರ್ಗೆಟ್

chamarajanagar
02/02/2026

ಚಾಮರಾಜನಗರ: ಕೇರಳ–ಕರ್ನಾಟಕ ಗಡಿಭಾಗದ ಗುಂಡ್ಲುಪೇಟೆಯಲ್ಲಿ ದರೋಡೆಕೋರರ ಹಾವಳಿ ಮಿತಿಮೀರಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಚಿನ್ನದ ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿರುವ ‘ಕೇರಳದ ಮಲ್ಲು ಗ್ಯಾಂಗ್’ ಮಟ್ಟಹಾಕಲು ಕರ್ನಾಟಕ ಪೊಲೀಸರು ಈಗ ಹೊಸ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಹದ್ದಿನ ಕಣ್ಣಿಟ್ಟಿದ್ದಾರೆ.

ಏನಿದು ಪ್ರಕರಣ? ಕೇರಳದ ಚಿನ್ನದ ಉದ್ಯಮಿಗಳಾದ ಜಮ್ಸಿದ್ ಮತ್ತು ಫೈಸಲ್ ಎಂಬುವವರು ಕರ್ನಾಟಕದಲ್ಲಿ ಚಿನ್ನ ಮಾರಾಟ ಮಾಡಿ 10 ಲಕ್ಷ ರೂಪಾಯಿ ನಗದಿನೊಂದಿಗೆ ಕೇರಳಕ್ಕೆ ಮರಳುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಗಡಿ ಸಮೀಪದ ಕಾಡಿನ ಹಾದಿಯಲ್ಲಿ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ತಂಡ, ಉದ್ಯಮಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ 10 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದೆ.

ದರೋಡೆ ನಡೆದ ಸ್ಥಳದಲ್ಲಿ ಮೊಬೈಲ್ ನೆಟ್‌ ವರ್ಕ್ ಸಿಗದಿರುವುದನ್ನೇ ಬಂಡವಾಳ ಮಾಡಿಕೊಂಡ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಇನ್ನು ಈ ಘಟನೆ ಜನವರಿ 10ರಂದು ನಡೆದಿದ್ದರೂ, ಸಂತ್ರಸ್ತರು ಜನವರಿ 27ರಂದು ತಡವಾಗಿ ದೂರು ನೀಡಿದ್ದಾರೆ. ಈ ವಿಳಂಬವು ಪೊಲೀಸರಲ್ಲಿ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು, ದರೋಡೆಕೋರರು ಉದ್ಯಮಿಗಳಿಗೆ ಪರಿಚಿತರೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.

  • ಪೊಲೀಸರ ಬಿಗಿ ಕ್ರಮ: ಈ ದರೋಡೆ ಗ್ಯಾಂಗ್‌ ಗಳ ಉಪಟಳಕ್ಕೆ ಬ್ರೇಕ್ ಹಾಕಲು ಪೊಲೀಸರು ಈಗ ಕಾರ್ಯಪ್ರವೃತ್ತರಾಗಿದ್ದಾರೆ:
  • ಹೊಸ ಚೆಕ್ ಪೋಸ್ಟ್: ಮದ್ದೂರು ಚೆಕ್ ಪೋಸ್ಟ್ ಜೊತೆಗೆ ಮತ್ತೊಂದು ಹೊಸ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡಲಾಗುತ್ತಿದೆ.
  • ಹದ್ದಿನ ಕಣ್ಣು: ಕೇರಳದಿಂದ ಕರ್ನಾಟಕಕ್ಕೆ ಮತ್ತು ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುವ ಅನುಮಾನಾಸ್ಪದ ವಾಹನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
  • ಹಳೆಯ ಕೇಸ್‌ ಗಳ ತನಿಖೆ: ಕಳೆದ ಎರಡು ತಿಂಗಳ ಹಿಂದೆ ನಡೆದ 1.25 ಕೆಜಿ ಚಿನ್ನದ ದರೋಡೆ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಕಿಂಗ್‌ ಪಿನ್ ಪತ್ತೆಗೆ ಶೋಧ ಮುಂದುವರಿದಿದೆ.

ಗಡಿ ಭಾಗದಲ್ಲಿ ಉದ್ಯಮಿಗಳ ಸುರಕ್ಷತೆಗಾಗಿ ಪೊಲೀಸರು ಅಲರ್ಟ್ ಆಗಿದ್ದು, ಮಲ್ಲು ಗ್ಯಾಂಗ್‌ನ ಬಾಲ ಕತ್ತರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version