ಜನಾಂಗೀಯ ಹಿಂಸಾಚಾರ ನಡೆದು 2 ವರ್ಷಗಳ ನಂತರ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ

ನವದೆಹಲಿ: ಮಣಿಪುರದಲ್ಲಿ ಮೇ 2023 ರಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆದಿತ್ತು. ಈ ಘಟನೆಯಲ್ಲಿ 260ಕ್ಕೂ ಹೆಚ್ಚು ಜನರ ಹತ್ಯೆ ನಡೆದಿತ್ತು. ಈ ಘಟನೆ ನಡೆದು 2 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಕುಕಿ ಸಮುದಾಯ ಹೆಚ್ಚಿರುವ ಮಣಿಪುರದ ಚುರಚಂದ್ಪುರಕ್ಕೆ ಮೊದಲು ಭೇಟಿ ನೀಡಲಿರುವ ಮೋದಿ ನಿರಾಶ್ರಿತರನ್ನು ಭೇಟಿಯಾಗಲಿದ್ದಾರೆ. ಬಳಿಕ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಇದಾದ ನಂತರ ಮೈತೀಸ್ ಬಹುಸಂಖ್ಯಾತರಾಗಿರುವ ಇಂಫಾಲಕ್ಕೂ ತೆರಳಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲೂ ಒಟ್ಟು 8,500 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ರಾಹುಲ್ ಗಾಂಧಿ ವ್ಯಂಗ್ಯ:
ಇನ್ನು ಮೋದಿಯವರು ಮಣಿಪುರ ಭೇಟಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮಣಿಪುರದಲ್ಲಿ ಬಹಳ ದಿನಗಳಿಂದ ಸಮಸ್ಯೆ ಇದೆ. ಅವರು ಈಗ ಅಲ್ಲಿಗೆ ಹೋಗುತ್ತಿರುವುದು ಒಳ್ಳೆಯದು. ಆದರೆ ದೇಶದ ಪ್ರಮುಖ ಸಮಸ್ಯೆ ‘ವೋಟ್ ಚೋರಿ’. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ನಾವು ಕರ್ನಾಟಕದ ಬಗ್ಗೆ ಸಾಕ್ಷ್ಯ ನೀಡಿದ್ದೇವೆ. ಎಲ್ಲ ಕಡೆ ಜನ ‘ವೋಟ್ ಚೋರ್’ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ಕಣ್ಣಲ್ಲಿ ನೀರುತುಂಬಿ ಹಾಡಲು ಸಾಧ್ಯವೇ?
ಮೋದಿ ಸ್ವಾಗತಕ್ಕೆ ಮಣಿಪುರದಲ್ಲಿ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಇದಕ್ಕೆ ಕುಕಿ-ಝೋ ಸಮುದಾಯದ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಣ್ಣಲ್ಲಿ ನೀರು ತುಂಬಿಕೊಂಡು ನೃತ್ಯ ಮಾಡಲು ಸಾಧ್ಯವಿಲ್ಲ ಎಂದಿವೆ. ಮೋದಿ ಭೇಟಿ ಹಿನ್ನೆಲೆ ಮಣಿಪುರದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD