ತಂದೆಯ ಅಂತ್ಯಸಂಸ್ಕಾರದ ವೇಳೆ ಪುತ್ರ ಹೃದಯಾಘಾತದಿಂದ ಸಾವು - Mahanayaka

ತಂದೆಯ ಅಂತ್ಯಸಂಸ್ಕಾರದ ವೇಳೆ ಪುತ್ರ ಹೃದಯಾಘಾತದಿಂದ ಸಾವು

shailesh shetty
02/06/2021


Provided by

ಪುತ್ತೂರು: ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಪುತ್ರ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳದಲ್ಲಿ ನಡೆದಿದೆ.

ಪುಣಚ ಬೈಲುಗುತ್ತು ಕೊಪ್ಪಳ ನಿವಾಸಿ, ಕೆಪಿಟಿ ನಿವೃತ್ತ ಪ್ರೊಫೆಸರ್ 85 ವರ್ಷ ವಯಸ್ಸಿನ ಭುಜಂಗ ಶೆಟ್ಟಿ ಅವರು ಜೂನ್ 1ರಂದು ರಾತ್ರಿ ಕೊವಿಡ್ ಗೆ ಬಲಿಯಾಗಿದ್ದರು. ಇವರ ಅಂತಿಮ ಸಂಸ್ಕಾರ ಜೂ.2ರಂದು ಬೈಲುಗುತ್ತು ಕೊಪ್ಪಳ ಅವರ ನಿವಾಸದಲ್ಲಿ ನಡೆಸಲಾಗಿತ್ತು.

ಇದೇ ಸಂದರ್ಭದಲ್ಲಿ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಭುಜಂಗ ಶೆಟ್ಟಿ ಅವರ ಕಿರಿಯ ಮಗ 44 ವರ್ಷ ವಯಸ್ಸಿನ  ಶೈಲೇಶ್ ಶೆಟ್ಟಿ ಏಕಾಏಕಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ.

ಮೃತ ಶೈಲೇಶ್ ಅವರು  ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿದ್ದರು.  ಡಿಪ್ಲೊಮಾ ಇನ್ ಮೆಕಾನಿಕಲ್ ವಿದ್ಯಾಭ್ಯಾಸ ಮಾಡಿದ್ದ ಅವರು,  ಆಸ್ಟ್ರೇಲಿಯಾದಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಅವರು ಊರಿಗೆ ಬಂದಿದ್ದರು. ಇವರು ಪತ್ನಿ, ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ