ಮತ್ತೊಂದು ದೊಡ್ಡ ಸಂಕಷ್ಟದಲ್ಲಿ ಸಿಲುಕಿದ ಸಿಎಂ ಯಡಿಯೂರಪ್ಪ! - Mahanayaka
1:01 PM Thursday 16 - October 2025

ಮತ್ತೊಂದು ದೊಡ್ಡ ಸಂಕಷ್ಟದಲ್ಲಿ ಸಿಲುಕಿದ ಸಿಎಂ ಯಡಿಯೂರಪ್ಪ!

yediyurappa
15/06/2021

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅಕ್ರಮ ಹಣ ವರ್ಗಾವಣೆ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿಸಿಎಂ ಯಡಿಯೂರಪ್ಪ ಹಾಗೂ ಕುಟುಂಬದ 6 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.


Provided by

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಎಂಬವರು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಇಡಿಗೆ ದೂರು ನೀಡಿದ್ದು,  2020ರ ನವೆಂಬರ್  27ರಂದು ಈ ಬಗ್ಗೆ ಇಡಿ ದೂರು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.

ಮೊದಲ ಆರೋಪಿಯಾಗಿ ಸಿಎಂ ಯಡಿಯೂರಪ್ಪ, ಎರಡನೆ ಆರೋಪಿಯಾಗಿ ಬಿ.ವೈ.ವಿಜಯೇಂದ್ರ, ಮೂರನೇ ಆರೋಪಿಯಾಗಿ ಮೊಮ್ಮಗ ಶಶಿಧರ್ ಮರಡಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ದೂರು ನೀಡಿರುವ ಅಬ್ರಾಹಂ, ಹಣ ವರ್ಗಾವಣೆ ಬಗ್ಗೆ ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಜೊತೆ ಶಶಿಧರ್ ಮರಡಿ ನಡೆಸಿರುವ ವಾಟ್ಸಾಪ್ ಸಂಭಾಷಣೆ ಸಮೇತ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಿಎಂಎಲ್ ಎ ಅಡಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಇದೀಗ ಸಿಎಂ ಬಿಎಸ್ ವೈ ಹಾಗೂ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲೂ ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ರಾಜ್ಯ ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಏರಲು ಹಲವರು ಹೊಂಚು ಹಾಕುತ್ತಿದ್ದಾರೆ. ಸಿಎಂ ಯಡಿಯೂರಪ್ಪರನ್ನು ಕೆಳಗಿಳಿಸಲು ಈಗಾಗಲೇ ಭಾರೀ ಕಸರತ್ತುಗಳು ನಡೆಯುತ್ತಿವೆ. ಇದೀಗ ಇಡಿ ಸಂಕಷ್ಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕು ಎನ್ನುವಂತಹ ಪರಿಸ್ಥಿತಿ ಉಂಟಾಗುತ್ತದೆಯೇ? ಎನ್ನುವ  ಅನುಮಾನಗಳು ಸೃಷ್ಟಿಯಾಗಿವೆ.

ಇತ್ತೀಚಿನ ಸುದ್ದಿ