ಪೌರಕಾರ್ಮಿಕರಿಗೆ ಅವಮಾನ ಮಾಡಲು ಹೋಗಿ ಮೊದಲ ಮಹಡಿಯಿಂದ ಕಸದ ರಾಶಿಗೆ ಬಿದ್ದ ದುರಾಂಹಕಾರಿ! - Mahanayaka
5:23 PM Saturday 17 - January 2026

ಪೌರಕಾರ್ಮಿಕರಿಗೆ ಅವಮಾನ ಮಾಡಲು ಹೋಗಿ ಮೊದಲ ಮಹಡಿಯಿಂದ ಕಸದ ರಾಶಿಗೆ ಬಿದ್ದ ದುರಾಂಹಕಾರಿ!

29/12/2020

ಬೆಂಗಳೂರು: ಇಂದು ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಆರಾಮವಾಗಿ ಓಡಾಡುತ್ತಿದ್ದಾರೆ ಎಂದರೆ ಅದಕ್ಕೆ ಪೌರ ಕಾರ್ಮಿಕರೇ ಕಾರಣ. ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡುವುದಿಲ್ಲ ಎಂದು ಕುಳಿತರೇ ಇಡೀ ನಗರವೇ ಗಬ್ಬೆದ್ದು, ಜನರು ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಬಹುದು. ಆದರೆ, ಸ್ವಲ್ಪವೂ ವಿರಮಿಸದೇ ಇಡೀ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಬಳಿಯಲ್ಲಿ ಜನರು ಯಾವುದೇ ಗೌರವವಿಲ್ಲದೆಯೇ ನಡೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲೊಬ್ಬ ಇದೇ ರೀತಿಯ ವರ್ತನೆ ತೋರಿ ತಾನು ತೋಡಿದ್ದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ.

ಕಸ ತೆಗೆದುಕೊಂಡು ಹೋಗಲು ಬಂದ ಪೌರಕಾರ್ಮಿಕರ ಜೊತೆಗೆ ಬೆಂಗಳೂರಿನ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ, ಕಸದ ಬ್ಯಾಗ್ ನ್ನು ಕೆಳಗಡೆಗೆ ತಾರದೇ ಮೇಲಿನಿಂದಲೇ ವ್ಯಾನ್ ಗೆ ಎಸೆದಿದ್ದಾನೆ. ಮನೆಯಿಂದ ಎರಡು ಹೆಜ್ಜೆ ಕೆಳಗಿಳಿಯದೇ ಮೊದಲನೆಯ ಮಹಡಿಯಿಂದ ಕಸದ ಬ್ಯಾಗ್ ಎಸೆದಿದ್ದ ವ್ಯಕ್ತಿ, ದುರಾಂಹಾರದಿಂದ ಕಸ ಎಸೆಯುವ ವೇಳೆ ನಿಯಂತ್ರಣ ಕಳೆದುಕೊಂಡು ಮೊದಲನೆಯ ಮಹಡಿಯಿಂದ ನೇರವಾಗಿ ಕಸ ತುಂಬಿದ ವಾಹನದೊಳಗೆ ಬಿದ್ದಿದ್ದಾನೆ.

ವ್ಯಕ್ತಿ ಅಸಭ್ಯವಾಗಿ ವರ್ತಿಸಿದರೂ, ಹಗೆ ಸಾಧಿಸದ ಪೌರಕಾರ್ಮಿಕರು, ಆ ವ್ಯಕ್ತಿಯನ್ನು ಕಸ ತುಂಬಿದ ವಾಹನದಿಂದ ಹೊರಗೆ ತೆಗೆದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೌರಕಾರ್ಮಿಕರ ಒಳ್ಳೆಯ ಮನಸ್ಸಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪೌರಕಾರ್ಮಿಕರು ಸ್ವಚ್ಛತೆಯ ಸೈನಿಕರಾಗಿದ್ದಾರೆ. ಅವರಿಗೆ ಅವಮಾನ ಮಾಡುವವರು ಒಂದು ದಿನ ಕಸದಲ್ಲಿಯೇ ಬಿದ್ದುಕೊಳ್ಳಬೇಕಾಗುತ್ತದೆ ಎನ್ನುವ ಸಂದೇಶವನ್ನು ಪ್ರಕೃತಿಯೇ ಸಾರಿದಂತಾಗಿದೆ.

ಇತ್ತೀಚಿನ ಸುದ್ದಿ