ದಕ್ಷಿಣ ಕನ್ನಡ: ಮನೆ ನಿರ್ಮಿಸಲು ಸಹಾಯ ಮಾಡ್ತೀನಿ ಎಂದು ಮಹಿಳೆಯ ಚಿನ್ನಾಭರಣ ದೋಚಿದ! - Mahanayaka
11:28 AM Wednesday 11 - March 2026

ದಕ್ಷಿಣ ಕನ್ನಡ: ಮನೆ ನಿರ್ಮಿಸಲು ಸಹಾಯ ಮಾಡ್ತೀನಿ ಎಂದು ಮಹಿಳೆಯ ಚಿನ್ನಾಭರಣ ದೋಚಿದ!

fraud
09/04/2023

ಮನೆ ನಿರ್ಮಿಸಲು ಸಹಾಯ ಮಾಡ್ತೀನಿ ಅಂತಾ ಹೇಳಿ ವ್ಯಕ್ತಿಯೋರ್ವ ಮಹಿಳೆಯ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಆತಿಕಾ ಎಂಬುವವರನ್ನು ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಭೇಟಿಯಾದ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸು ತನ್ನ ಹೆಸರು ರಶೀದ್ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದ.

ಬಳಿಕ ಅದೇ ದಿನ ಆತೀಕಾ ವಾಸವಿರುವ ಬಾಡಿಗೆ ಮನೆಗೆ ಬಂದಿದ್ದ ರಶೀದ್ ‘ನೀವು ಇಷ್ಟು ಬಾಡಿಗೆ ಕೊಟ್ಟು ಈ ಮನೆಯಲ್ಲಿ ಇರುತ್ತೀರಾ. ನೀವು ಬೇರೆ ಮನೆ ಮಾಡಲು ನಾನು ವ್ಯವಸ್ಥೆ ಮಾಡುತ್ತೇನೆ. ನಾಳೆ ಬಂದರ್ ಮಸೀದಿಯಲ್ಲಿ ನನಗೆ ಸಿಗಬೇಕು’ ಎನ್ನುತ್ತಾ ಎರಡು ಮೊಬೈಲ್ ಸಂಖ್ಯೆಗಳನ್ನು ನೀಡಿ ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅದರಂತೆ ಆತಿಕಾ ಈ ಮಾತನ್ನು ನಂಬಿ ಮಂಗಳೂರು ನಗರದ ಬಂದರ್ ಮಸೀದಿಗೆ ಬಂದಾಗ ಅವರನ್ನು ರಶೀದ್ ಮಧ್ಯಾಹ್ನ ಫಳ್ನೀರ್ ರಸ್ತೆಯ ಹೊಟೇಲ್‌ ವೊಂದರ ರೂಮಿಗೆ ಕರೆದುಕೊಂಡು ಹೋಗಿ ‘ಈಗ ಶೇಖ್‌ ಮತ್ತು ಶೇಖ್ ನ ಹೆಂಡತಿ ಬರುತ್ತಾರೆ. ನಿನ್ನ ಮೈಮೇಲಿರುವ ಚಿನ್ನಾಭರಣ ನೋಡಿದರೆ ಅವರು ಸಹಾಯ ಮಾಡುವುದಿಲ್ಲ. ಅದನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ’ ಎಂದಿದ್ದ ಎನ್ನಲಾಗಿದೆ.

ಅದರಂತೆ ಆತಿಕಾ ತನ್ನ ಮೈಮೇಲಿದ್ದ ಚಿನ್ನದ ಕಿವಿಯೋಲೆ, ಉಂಗುರ, ಬಳೆ ಇತ್ಯಾದಿಗಳನ್ನು ನೀಡಿದ ಬಳಿಕ ಅಲ್ಲಿಂದ ಮತ್ತೊಂದು ಹೊಟೇಲ್‌ ಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಶೇಖ್‌ ಮತ್ತು ಶೇಖ್ ನ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದ ರಶೀದ್ ಎಂಬ ಹೆಸರಿನ ವ್ಯಕ್ತಿ ವಾಪಸ್ ಬಂದಿಲ್ಲ. ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪಡೆದು ವಂಚಿಸಿರುವುದಾಗಿ ಆತಿಕಾ ಬಂದರ್ ಠಾಣೆಗೆ ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ