ತೋಟಗಾರಿಕೆ ಇಲಾಖೆಯ ಗುತ್ತಿಗೆ ನೌಕರ ಅಪಘಾತದಲ್ಲಿ ಮೃತಪಟ್ಟ ಘಟನೆಗೆ ಹೊಸ ತಿರುವು: ಕೊಲೆ ಶಂಕೆ ಹಿನ್ನೆಲೆ ಪೊಲೀಸರು ಅಲರ್ಟ್ - Mahanayaka
12:12 AM Monday 15 - December 2025

ತೋಟಗಾರಿಕೆ ಇಲಾಖೆಯ ಗುತ್ತಿಗೆ ನೌಕರ ಅಪಘಾತದಲ್ಲಿ ಮೃತಪಟ್ಟ ಘಟನೆಗೆ ಹೊಸ ತಿರುವು: ಕೊಲೆ ಶಂಕೆ ಹಿನ್ನೆಲೆ ಪೊಲೀಸರು ಅಲರ್ಟ್

08/09/2023

ಚಾಮರಾಜನಗರ: ಕಳೆದ 30ರಂದು ಚಾಮರಾಜನಗರದಲ್ಲಿ  ನಡೆದಿದ್ದ ಅಪಘಾತ ಪ್ರಕರಣದ ಮೇಲೆ ಕೊಲೆ ಗುಮಾನಿ ಉಂಟಾದ ಹಿನ್ನೆಲೆ ತನಿಖಾಧಿಕಾರಿಯನ್ನು ಬದಲಿಸಿ,  ವಿವಿಧ ಆಯಾಮದ ತನಿಖೆ‌ ನಡೆಸಲು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು ಆದೇಶ ನೀಡಿದ್ದಾರೆ.

ಹೌದು…, ಕಳೆದ 30 ರಂದು ತೋಟಗಾರಿಕೆ ಇಲಾಖೆಯ ಗುತ್ತಿಗೆ ನೌಕರ ರಮೇಶ್(44) ಲಾರಿ ಗುದ್ದಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ನಡೆದಿತ್ತು. ಆದರೆ, ಈ ಸಂಬಂಧ ಕೊಲೆ ಗುಮಾನಿ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದರಿಂದ ಟ್ರಾಫಿಕ್ ಠಾಣೆಯಿಂದ ಚಾಮರಾಜನಗರ ಪೂರ್ವ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ವಿವಿಧ ಆಯಾಮದಲ್ಲಿ ತನಿಖೆ ನಡೆಸಲು ಎಸ್ಪಿ ಸೂಚನೆ ಕೊಟ್ಟಿದ್ದಾರೆ.

ಘಟನೆ ನಡೆದ ದಿನ ರಮೇಶ್ ಪತ್ನಿ ಪವಿತ್ರಾ ಲಾರಿ ಗುದ್ದಿ ತನ್ನ ಪತಿ ಅಸುನೀಗಿದ್ದು ಲಾರಿ ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಕೊಟ್ಟಿದ್ದರು. ಅದರಂತೆ, ಲಾರಿ ಚಾಲಕನ ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

ಕೊಲೆ ಗುಮಾನಿ ಏಕೆ…?

ರಮೇಶ್ ಮೇಲೆ ಲಾರಿ ಹರಿದ ಗುರುತು ಇರಲಿಲ್ಲ. ಆದರೆ, ಮರ್ಮಾಂಗಕ್ಕೆ ತೀವ್ರತರವಾದ ಗಾಯವಾಗಿತ್ತು. ಯಾರೋ ಬಲವಾಗಿ ಹೊಡೆದಿದ್ದಾರೆ ಎಂಬ ಗುಮಾನಿ ವ್ಯಕ್ತವಾದ ಹಿನ್ನೆಲೆ ಹಾಗೂ  ರಮೇಶ್ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದರಿಂದ ಎಚ್ಚೆತ್ತ ಪೊಲೀಸರು ವಿವಿಧ ಆಯಾಮದ ತನಿಖೆಗೆ ಮುಂದಾಗಿದ್ದಾರೆ.

ಚಾಮರಾಜನಗರ ಪೂರ್ವ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್  ತನಿಖೆ ಹೊಣೆ ಹೊತ್ತಿದ್ದು ಇಂದಿನಿಂದ ತನಿಖೆ ಆರಂಭಿಸಿದ್ದಾರೆ. ಮೈಸೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ  ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಅಪಘಾತ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ.

ಇತ್ತೀಚಿನ ಸುದ್ದಿ