ಬೀದಿನಾಯಿಯ ಪ್ರಾಣ ಉಳಿಸಲು ಪತ್ನಿಯ ಪ್ರಾಣ ಬಲಿಕೊಟ್ಟ ಶಿಕ್ಷಕ: ಶಿಕ್ಷಕ ನೀಡಿದ ದೂರು ನೋಡಿ ಪೊಲೀಸರಿಗೇ ಶಾಕ್!

ಅಹ್ಮದಾಬಾದ್: ಬೀದಿ ನಾಯಿಯ ಪ್ರಾಣ ಉಳಿಸಲು ಹೋದ ಪತಿಯೋರ್ವ ಅಪಘಾತದಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ಘಟನೆ ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿ ನಡೆದಿದ್ದು, ಪತ್ನಿಯ ಸಾವಿನ ಬಳಿಕ ಪತಿ ಪೊಲೀಸರಿಗೆ ವಿಚಿತ್ರವಾದ ದೂರೊಂದನ್ನು ನೀಡಿದ್ದಾನೆ.
ಪರೇಶ್ ದೋಸಿ ಎಂಬ ಶಿಕ್ಷಕ ಹಾಗೂ ಅವರ ಪತ್ನಿ ಅಮಿತಾ ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಹಿಂದಿರುಗುತ್ತಿದ್ದರು. ಕಾರು ಸವರಕಾಂತ ಹೆದ್ದಾರಿ ತಲುಪಿದ ವೇಳೆ ನಾಯಿಯೊಂದು ಏಕಾಏಕಿ ರಸ್ತೆಗೆ ಅಡ್ಡವಾಗಿ ಬಂದಿದೆ.
ಈ ವೇಳೆ ಪರೇಶ್ ಕಾರನ್ನು ರಸ್ತೆಯ ಬದಿಗೆ ಇಳಿಸಿ ನಾಯಿಯನ್ನು ಪಾರು ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಾರು ರಸ್ತೆ ಬದಿಯ ಬ್ಯಾರಿಕೇಡ್ ಗೆ ಬಡಿದಿದ್ದು, ಬ್ಯಾರಿಕೇಡ್ ನ ತುಂಡಾದ ಭಾಗಗಳು ಹಾಗೂ ಕಾರಿನ ಗಾಜುಗಳು ತಾಗಿ ಅಮಿತಾ ಗಂಭೀರವಾಗಿ ಗಾಯಗೊಂಡಿದ್ದು, ಅವರು ಸಾವನ್ನಪ್ಪಿದ್ದಾರೆ.
ಪತ್ನಿಯ ಸಾವಿಗೆ ತಾನೇ ಕಾರಣವಾದೆನಲ್ಲ, ನಾಯಿಯ ಪ್ರಾಣ ಉಳಿಸಲು ಪತ್ನಿಯನ್ನೇ ಬಲಿ ಕೊಟ್ಟೆನಲ್ಲ ಎಂಬ ಪಶ್ಚಾತಾಪದಿಂದ ಕೊರಗಿದ ಪರೇಶ್ ದೋಸಿ ಪೊಲೀಸ್ ಠಾಣೆಗೆ ತೆರಳಿ ತನ್ನ ಅಜಾಗರೋಕತೆಯ ಚಾಲನೆಯಿಂದ ಪತ್ನಿ ಸಾವನ್ನಪ್ಪಿರುವುದಾಗಿ ತನ್ನ ವಿರುದ್ಧವೇ ಎಫ್ ಐಆರ್ ದಾಖಲಿಸಿದ್ದಾರೆ.