ಧರ್ಮ ದ್ವೇಷದಿಂದ ಅಮಾಯಕನ ಹತ್ಯೆ: ಥಳಿಸಿ ಕೊಂದ ಗುಂಪು - Mahanayaka

ಧರ್ಮ ದ್ವೇಷದಿಂದ ಅಮಾಯಕನ ಹತ್ಯೆ: ಥಳಿಸಿ ಕೊಂದ ಗುಂಪು

19/12/2024


Provided by

ಶೇಕ್ ತಾಜುದ್ದೀನ್ ಎಂಬ 48 ವರ್ಷದ ವ್ಯಕ್ತಿಯನ್ನು ಜಾರ್ಖಂಡ್ ನಲ್ಲಿ ಡಿಸೆಂಬರ್ 8ರಂದು ಥಳಿಸಲಾಗಿತ್ತು. ಗುಂಪೊಂದು ಕಬ್ಬಿಣದ ರಾಡ್ ಮತ್ತು ದೊಣ್ಣೆಯಿಂದ ಥಳಿಸಿದ ಪರಿಣಾಮ ಅವರು ತೀವ್ರ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಮೃತಪಟ್ಟಿದ್ದು ಧರ್ಮ ದ್ವೇಷದಿಂದಲೇ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಆತನ ಗಡ್ಡ ಮತ್ತು ಟೋಪಿಯನ್ನು ನೋಡಿ ಗುಂಪು ಹಲ್ಲೆ ನಡೆಸಿದೆ ಎಂದು ಕುಟುಂಬಿಕರು ಹೇಳಿದ್ದಾರೆ.

ತಾಜುದ್ದೀನ್ ಕುಟುಂಬದವರ ದೂರಿನಂತೆ ಎಫ್ ಐ ಆರ್ ದಾಖಲಿಸಲಾಗಿದ್ದು ಮನ್ನು ಯಾದವ್, ಚೇಲ ಯಾದವ್, ಸಂಜಯ್ ಯಾದವ್ ಮತ್ತು ಗೌತಮ್ ಮಂಡಲ್ ಎಂಬವರನ್ನು ಬಂಧಿಸಲಾಗಿದೆ.

ನನ್ನ ತಂದೆ ತರಕಾರಿ ಮಾರಾಟಗಾರರಾಗಿದ್ದು ಎಂದಿನಂತೆ ಬೆಳಗಿನ ನಮಾಜಿನ ಬಳಿಕ ಕೆಲಸಕ್ಕೆ ಹೋಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆಗೆ ಆದಿತ್ಯ ಪುರ್ ಪೊಲೀಸರು ನನಗೆ ಕರೆ ಮಾಡಿದರು ಮತ್ತು ನಿಮ್ಮ ತಂದೆಗೆ ಅಪಘಾತವಾಗಿದೆ ಹಾಗೂ ಅವರು ಟಿಎಂಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಆ ಬಳಿಕ ನನ್ನ ತಂದೆಯನ್ನು ರಾಂಚಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಡಿಸೆಂಬರ್ 13ರಂದು ನಿಧನರಾದರು ಎಂದು ತಾಜುದ್ದೀನ್ ಅವರ ಮಗ ಹೇಳಿದ್ದಾರೆ.

ನನ್ನ ಚಿಕ್ಕಪ್ಪ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಆಗಾಗ ಮಸೀದಿಯಲ್ಲಿ ಅಝಾನ್ ಕೂಡ ಕೊಡುತ್ತಿದ್ದರು. ಅವರನ್ನು ಅವರ ಧರ್ಮದ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬದ ಯುವಕ ಹೇಳಿದ್ದಾನೆ.

ಈ ನಡುವೆ ಗೋ ಕಳ್ಳತನ ಮಾಡಲು ಯತ್ನಿಸಿದ್ದಕ್ಕಾಗಿ ಅವರ ಹತ್ಯೆ ನಡೆದಿದೆ ಎಂದು ಆರೋಪಿಗಳು ಹೇಳಿದ್ದಾರೆ.
2024 ಜುಲೈಯಲ್ಲಿ ಇದೇ ಜಾರ್ಖಂಡಿನ ಬರಕಾಥದಲ್ಲಿರುವ ಮಸೀದಿಯ ಇಮಾಮರಾಗಿದ್ದ ಮೌಲಾನಾ ಶಹಾಬುದ್ದೀನ್ ಅವರನ್ನು ಕೂಡ ಥಳಿಸಿ ಹತ್ಯೆ ಮಾಡಲಾಗಿತ್ತು. ಅವರು ಸಂಚರಿಸುತ್ತಿದ್ದ ಬೈಕು ಮಹಿಳೆಗೆ ಡಿಕ್ಕಿ ಹೊಡೆದಿದೆ ಎಂಬ ಕಾರಣವನ್ನು ಮುಂದಿಟ್ಟು ಹಲ್ಲೆ ನಡೆಸಲಾಗಿತ್ತು. ಬಳಿಕ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ