ಅಸಹಜ ಲೈಂಗಿಕ ದೌರ್ಜನ್ಯ : ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ವಿರುದ್ಧವೂ ದೂರು ದಾಖಲು

ಹಾಸನ: ಡಾ.ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ವಿರುದ್ಧವೂ ಸಂತ್ರಸ್ತ ಯುವಕ ದೂರು ದಾಖಲಿಸಿದ್ದಾರೆ.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೂರಜ್ ಆಪ್ತ ಶಿವಕುಮಾರ್ ಹೆಸರು ಸೇರ್ಪಡೆ ಮಾಡಲಾಗಿದೆ. ಶಿವಕುಮಾರ್ ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಗ್ರಾಮದವನು. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ದೂರು ನೀಡಿದ ಬಳಿಕ, ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಶಿವಕುಮಾರ್ ನಾಪತ್ತೆಯಾಗಿದ್ದಾನೆ.
ಸೂರಜ್ ಗೆ 5 ಕೋಟಿ ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಸಂತ್ರಸ್ತನ ವಿರುದ್ಧ ಶಿವಕುಮಾರ್ ದೂರು ನೀಡಿದ್ದ. ಬಳಿಕ ಶಿವಕುಮಾರ್ ಹಾಗೂ ಸಂತ್ರಸ್ತ ಇಬ್ಬರೂ ಸೇರಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಇದಾದ ನಂತರ ಶಿವಕುಮಾರ್ ನಾಪತ್ತೆಯಾಗಿದ್ದಾನೆ.
ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ. ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ. ಅವರ ಫೋನ್ನಿಂದ ಸೂರಜ್ ರೇವಣ್ಣ ಜತೆ ಮಾತನಾಡಿಸಿದರು. ಎರಡು ಕೋಟಿ ಹಣ, ಕೆಲಸ ಕೊಡಿಸುವುದಾಗಿ ಹೇಳಿದ್ದರು. ನಾನು ಒಪ್ಪದಿದ್ದಾಗ ನೀನು ಯಾರ ಬಳಿಯಾದರೂ ಬಾಯಿ ಬಿಟ್ಟರೆ ನಿನ್ನನ್ನು ಮುಗಿಸುತ್ತಾರೆ ಎಂದು ಶಿವಕುಮಾರ್ ಕೊಲೆ ಬೆದರಿಕೆ ಹಾಕಿದ್ದ. ಶಿವಕುಮಾರ್ ನನ್ನನ್ನು ಮನೆಗೆ ಹೋಗಲು ಬಿಡದೆ ಲಾಡ್ಜ್ ನಲ್ಲಿ ಕೂಡಿ ಹಾಕಿದ್ದ. ನನ್ನಿಂದಲೇ 1000 ರೂ. ಪಡೆದು ಊಟದ ವ್ಯವಸ್ಥೆ ಮಾಡಿದ್ದ. ನಂತರ ಅಲ್ಲಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಗೆ ಹೋದೆ. ಹೀಗಾಗಿ ಶಿವಕುಮಾರ್ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97