ಸಂವಿಧಾನ ದಿನದಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ವಿಶೇಷ ಮದುವೆ!!

ಚಾಮರಾಜನಗರ: ಮದುವೆ ಎಂದರೆ ಅಬ್ಬರ, ಆಡಂಬರ. ಇನ್ನು, ರಾಜಕಾರಣಿಗಳು, ಅಧಿಕಾರಿಗಳ ಮದುವೆ ಎಂದರೇ ಸ್ವರ್ಗವೇ ಧರೆಗೆ ಇಳಿದುಬಂದಂತೆ ಆದ್ಧೂರಿತನ ಪ್ರದರ್ಶನ. ಆದರೆ, ಇದಕ್ಕೆಲ್ಲಾ ಹೊರತಾಗಿದ್ದಾರೆ ಈ ಮಹಿಳಾ ಅಧಿಕಾರಿ.
ಹೌದು… ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ಗೀತಾ ಹುಡೇದಾ ಸಂವಿಧಾನ ದಿನವೇ ಮಂತ್ರ ಮಾಂಗಲ್ಯದ ಮೂಲಕ ನವ ಜೀವನಕ್ಕೆ ಕಾಲಿಡುತ್ತಿದ್ದು ಉನ್ನತ ಅಧಿಕಾರಿಯಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಅವರು ಹರೀಶ್ ಕುಮಾರ್ ಎಂಬವರೊಟ್ಟಿಗೆ ಮೈಸೂರಿನಲ್ಲಿ ಮಂತ್ರ ಮಾಂಗಲ್ಯದ ಮೂಲದ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ವಿವಾಹ ಆಮಂತ್ರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಚಿತ್ರಗಳನ್ನು ಹಾಕಿಸಿ ವೈಚಾರಿಕತೆ ಮೆರೆದಿದ್ದಾರೆ.
ಬುದ್ಧಿಜೀವಿ ಕುಂವೀ ಬೋಧನೆ:
ಕನ್ನಡದ ಖ್ಯಾತ ಸಾಹಿತಿ, ಬುದ್ಧಿಜೀವಿ ಹಾಗೂ ವೈಜಾರಿಕ ಪ್ರಜ್ಞೆ ಲೇಖಕ ಕುಂ.ವೀರಭದ್ರಪ್ಪ ಇವರ ವಿವಾಹದಲ್ಲಿ ಮಂತ್ರ ಮಾಂಗಲ್ಯವನ್ನು ಬೋಧನೆ ಮಾಡಲಿದ್ದು ಗೀತಾ ಹಾಗೂ ಹರೀಶ್ ಅವರು ಸರಳವಾಗಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.
ಈ ಸಂಬಂಧ ಗೀತಾ ಹುಡೇದಾ ಪ್ರತಿಕ್ರಿಯೆ ನೀಡಿ, ಅದ್ದೂರಿ ಮದುವೆಯ ಮೂಲಕ ಕೆಲ ಪೋಷಕರು ಮನೆಮಠ ಅಸ್ತಿ ಕಳೆದುಕೊಳ್ಳುತ್ತಾರೆ. ನಾವು ಸರಳವಾಗಿ ಸಂವಿಧಾನದ ದಿನದಂದು ಮಂತ್ರಮಾಂಗಲ್ಯ ಮೂಲಕ ವಿವಾಹವಾಗುತ್ತಿದ್ದೇವೆ ಎಂದಿದ್ದಾರೆ.