ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಕೃಷಿ ಸಚಿವರ ಭೇಟಿ: ಹವಾಮಾನ ಪರಿಸ್ಥಿತಿ ಅಧ್ಯಯನ

ಬೆಂಗಳೂರು ಸೆ 2 ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ಇಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಭೇಟಿ ನೀಡಿ ರಾಜ್ಯದ ಹಾವಾಮಾನ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ನಿಖರ ಮಾಹಿತಿ ಪಡೆದರು.
ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ವಿಜ್ಞಾನಿಗಳು ,ತಜ್ಞರೊಂದಿಗೆ ಚರ್ಚಿಸಿದ ಸಚಿವರು
ಮುಂದಿನ ದಿನಗಳಲ್ಲಿ ರಾಜ್ಯದ ಹವಾಮಾನ ಪರಿಸ್ಥಿತಿ ಹಾಗೂ ರಾಜ್ಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ವರದಿ ಪಡೆದರು.
ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಕಳೆದ ಸಚಿವರು ಮುಂದಿನ ದಿನಗಳಲ್ಲಿ ಹಾಗೂ ಈ ವರ್ಷದಲ್ಲಿ ಜಿಲ್ಲೆ ಮತ್ತು ವಲಯವಾರು ಆಗಬಹುದಾದ ಮಳೆ,ಜಲಾಶಕ್ಕೆ ಹರಿದು ಬರಬಹುದಾದ ನೀರು, ಹಾವಾಮಾನ ,ರೈತರಿಗೆ ನೀಡಬಹುದಾದ ಮಾಹಿತಿ ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ರೂಪಿಸಬೇಕಾದ ಯೋಜನೆಗಳ ಕುರಿತು ತಜ್ಞರಿಂದ ಮಾಹಿತಿ ಪಡೆದರು.
ಹಾಲಿ ಬರಲಿರುವ ಮಳೆ ಮಾರುತ, ಕಾವೇರಿ ಕೊಳ್ಳ ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಸುರಿಯಬಹುದಾದ ಮಳೆ , ಹಾಲಿ ಇರುವ ಬೆಳೆಗಳು ಉಳಿಯುವ ಸಾಧ್ಯತೆ ಹಾಗೂ ಮುಂದಿನ ದಿನಗಳಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.ಇದೇ ವೇಳೆ ಸಚಿವರು ಹವಾಮಾನ ಮುನ್ಸೂಚನೆ ನೀಡುವ ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ಸ್ವತಃ ಕರೆ ಸ್ವೀಕರಿಸಿ ಮಾತನಾಡಿದರು.ಅಲ್ಲದೆ ಮಳೆ ಮಾಪನ, ಹಾವಮಾನ ,ಗಾಳಿ ಮಾಪನ,ಭೂ ಕಂಪ ಮಾಪನ ಸಾಧನಳು ಹಾಗೂ ಅವುಗಳ ಕಾರ್ಯ ಸ್ವರೂಪದ ಬಗ್ಗೆ ಮಾಹತಿ ಪಡೆದರು. ಇದೇ ವೇಳೆ ಮಾತನಾಡಿದ ಸಚಿವರು ಅನ್ನದಾತ ರಾಜ್ಯದ ಜೀವಾಳ. ಸರ್ಕಾರ,ಇಲಾಖೆಗಳು , ಸಂಸ್ಥೆ ಗಳು ಒಗ್ಗೂಡಿ ರೈತರ ಹಿತ ಕಾಯುವ ಮಾರ್ಗ ಹುಡುಕಿ ಕ್ರಮವಹಿಸಬೇಕಿದೆ ಎಂದರು.
ಕೃಷಿಕರಿಗೆ ಯೋಜನೆ ಗಳ ಸೌಲಭ್ಯದ ಜೊತೆಗೆ ತಾಂತ್ರಿಕ ನೆರವು,ಮಾಹಿತಿ,ಮಾರ್ಗದರ್ಶನ ನೀಡಬೇಕಿದೆ ಎಂದು ಹೇಳಿದರು.ರಾಜ್ಯದಲ್ಲಿ ಈ ವಾರ ಮಳೆಯಾಗುವ ಬಗ್ಗೆ ವಿವರ ಪಡೆದ ಸಚಿವರು ಇದರಿಂದ ರೈತರ ಸಂಕಷ್ಟ ದೂರಾಗಲಿ ಎಂದು ಹಾರೈಸುವುದಗಿ ತಿಳಿಸಿದರು .ಇದೇ ವೇಳೆ ಸಚಿವರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಾಮರ್ಥ್ಯ, ಪರಿಶ್ರಮ, ದೂರದೃಷ್ಟಿ ಕ್ರಮಗಳು, ಹಿರಿಮೆ,ತಾಂತ್ರಿಕ ಶ್ರೇಷ್ಠತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ಸಮಾಲೋಚಕರಾದ ಶ್ರೀನಿವಾಸ್ ರೆಡ್ಡಿ ಹಾಗೂ ಕಿರಿಯ ವೈಜ್ಞಾನಿಕ ಅಧಿಕಾರಿ ಸುನೀಲ್ ಗವಾಸ್ಕರ್ ಅವರು ಪ್ರಸ್ತುತ ಹಾವಾಮಾನ ಪರಿಸ್ಥಿತಿ, ಮುಂದಿನ ಮುನ್ಸೂಚನೆ, ವಿಪತ್ತು ನಿರ್ವಹಣಾ ಕೇಂದ್ರ ಕಾರ್ಯ ಸ್ವರೂಪ, ನಿಖರತೆ ಬಗ್ಗೆ ಮಾಹಿತಿ ನೀಡಿದರು.ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರಾದ ಗಿರೀಶ್, ಕೃಷಿ ನಿರ್ದೇಶಕರಾದಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ , ಕೃಷಿ ಸಚಿವರ ಅಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಹಾಜರಿದ್ದರು