ಅಂಬೇಡ್ಕರ್ ಆಶಯ ಕಾಂಗ್ರೆಸ್ ನಿಂದ ಬುಡಮೇಲು: ಬಿಜೆಪಿ ಆರೋಪ

ಚಿಕ್ಕಮಗಳೂರು: ದೇಶವನ್ನೆ ಒಡೆಯಲು ಹೊರಟಿರುವ ಕಾಂಗ್ರೇಸ್, ನನ್ನ ತೆರಿಗೆ ನನ್ನ ಹಕ್ಕು ಎಂದು ಪ್ರತಿಭಟನೆ ಹೆಸರಲ್ಲಿ ರಾಜ್ಯದ ತೆರಿಗೆ ಹಣದಲ್ಲಿ ದೊಡ್ಡ ಜಾಹೀರಾತುಗಳನ್ನು ನೀಡಿ ದೆಹಲಿಗೆ ಪಿಕ್ನಿಕ್ ಹೋಗುತ್ತಿರುವುದು ಅಂಬೇಡ್ಕರ್ ರವರ ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ಬಿಜೆಪಿ ವಕ್ತಾರ ನಯನ ತಳವಾರ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿರು ಅವರು, ದೇಶ ಗಣರಾಜ್ಯವಾಗುವ ಸಂದರ್ಭದಲ್ಲಿ ಭಾರತರತ್ನ ಅಂಬೇಡ್ಕರ್ ಸಮಾಜದಲ್ಲಿ ತುಳಿತ ಕೊಳಗಾಗಿರುವ ದೀನ, ದಲಿತರು, ಬಡವರಿಗೆ ಈ ದೇಶದ ಆದಾಯದಲ್ಲಿ ಸಿಂಹ ಪಾಲು ಇರಬೇಕು ಎಂದು ಮೀಸಲಾತಿ ಸೇರಿದಂತೆ ದೇಶದ ಅನುದಾನವನ್ನು ಬಡವರಿಗೆ ಹಂಚುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದು, ದೇಶವನ್ನು ಸದೃಡಗೊಳಿಸುವ ಕಾಯಕವನ್ನು ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷವು ತಾನು ಮಾಡಿದ ಭ್ರಷ್ಟಾಚಾರ ಹಾಗೂ ಆರ್ಥಿಕ ಅಶಿಸ್ತಿನ ಫಲವಾಗಿ ದಿವಾಳಿ ಅಂಚಿಗೆ ತಲುಪಿರುವ ಕರ್ನಾಟಕದ ಜನರ ಭಾವನೆಗಳನ್ನು ಕೇಂದ್ರ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂಬ ಸುಳ್ಳಿನ ಮೂಲಕ ದಾರಿ ತಪ್ಪಿಸಲು ಹೊರಟಿದೆ. ಸಂವಿಧಾನದ ಮೂಲ ಆಶಯ ಹಸಿವು ನೀಗಿಸುವುದೆ ಆಗಿದ್ದು, ನಿಮ್ಮ ಆಶಯದಂತೆ ಅಂಬಾನಿ, ಅದಾನಿ ಕಟ್ಟಿದ ತೆರಿಗೆಯನ್ನು ಅವರಿಗೆ ವಾಪಾಸು ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಸಲ್ಲಿಸುವ ಬೆಂಗಳೂರು ಹಾಗೂ ಹಳೆಮೈಸೂರು ಭಾಗ ನೀಡುವ ಅನುದಾನವನ್ನು ಕಡಿಮೆ ಆದಾಯ ಇರುವ ಉತ್ತರ ಕರ್ನಾಟಕಕ್ಕೆ ಬಳಸುವುದು ವಾಡಿಕೆಯಾಗಿದ್ದು, ನಮ್ಮ ತೆರಿಗೆ ನಮಗೆ ಕೊಡಿ ಎನ್ನಲಾಗುವುದಿಲ್ಲ. ಅದರಂತೆ ಅತಿ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಒಡಿಸ್ಸಾ ಮುಂತಾದ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ತಲಾವಾರು ಆದಾಯ ಹಂಚಿಕೆಯಲ್ಲಿ ಹೆಚ್ಚು ಹೋಗುತ್ತಿರಬಹುದು.
ಕರ್ನಾಟಕದ ಆರ್ಥಿಕ ಸ್ಥಿತಿ ಗಮನಿಸಿ ಕೇಂದ್ರವು ಅನೇಕ ವರ್ಷಗಳಿಂದ ಅತಿ ಹೆಚ್ಚು ಅನುದಾನವನ್ನು ನೀಡಿದ್ದರೂ ಕೂಡ, ಸುಳ್ಳನ್ನೇ ದೇವರನ್ನಾಗಿಸಿ ಕೊಂಡಿರುವ ಕಾಂಗ್ರೆಸ್ ತನ್ನ ಸಂಸದ ಸುರೇಶ್ ನೇತೃತ್ವದ ದೇಶ ಒಡೆಯುವ ಕುತಂತ್ರವನ್ನು ಮರೆಮಾಚಲು ಹೊರಟಿರುವುದು ದುರಂತವಾಗಿದ್ದು, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಲೋಕಸಭೆಗೆ ಬರದಂತೆ ತಡೆದ ಕಾಂಗ್ರೆಸ್ ಸಂವಿಧಾನವನ್ನು ಬುಡಮೇಲು ಮಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ ಎಂದು ಆರೋಪಿಸಿದರು.