ಸಂವಿಧಾನ ರಥಕ್ಕೆ ಅವಮಾನ: ಕಣಿಯೂರು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷೆ ಸಹಿತ 19 ಸದಸ್ಯರು ಗೈರು

ಬೆಳ್ತಂಗಡಿ : ರಾಜ್ಯ ಸರಕಾರದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ತಲುಪಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ , ಉಪಾಧ್ಯಕ್ಷೆ ಸೇರಿ 20 ಸದಸ್ಯರ ಪೈಕಿ 19 ಮಂದಿ ಗೈರಾದ ಪ್ರಸಂಗ ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಸೋಮವಾರ ನಡೆದಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮಪಂಚಾಯತ್ ಗೆ ಸರಕಾರದ ಸಂವಿಧಾನ ಜಾಗೃತಿ ಜಾಥಾ ರಥವು ಸೋಮವಾರ ತಲುಪಿದ್ದು ಗ್ರಾ.ಪಂ. ಅಧ್ಯಕ್ಷ ಯಶವಂತ ಹಾಗೂ ಉಪಾಧ್ಯಕ್ಷೆ ಜಾನಕಿ ಸೇರಿದಂತೆ 20 ಸದಸ್ಯರ ಪೈಕಿ 19 ಸದಸ್ಯರು ಗೈರು ಹಾಜರಾಗುವ ಮೂಲಕ ಸಂವಿಧಾನದ ಬಗ್ಗೆ ತಾತ್ಸಾರ ಭಾವನೆ ತೋರಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡ ಅಣ್ಣು ಸಾಧನ, ತಾಲೂಕು ಬಿ.ಎಸ್.ಪಿ. ಅಧ್ಯಕ್ಷ ಪಿ.ಎಸ್. ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ತಾಲೂಕು ಮುಖಂಡ ಶೇಖರ್ ಬಿಕೆ , ಲೋಕೇಶ್ ನೀರಾಡಿ ಮಾತನಾಡಿ ಅಧ್ಯಕ್ಷ, ಉಪಾಧ್ಯಕ್ಷೆ ಸೇರಿದಂತೆ 19 ಸದಸ್ಯರ ಗೈರಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
20 ಸದಸ್ಯ ಬಲದ ಬಿಜೆಪಿ ಆಡಳಿತ ಕಣಿಯೂರು ಗ್ರಾಮಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ರಥ ಸ್ವಾಗತ ಕಾರ್ಯಕ್ರಮಕ್ಕೆ ಗೈರು ಹಾಜರಾದ 19 ಸದಸ್ಯರ ಪೈಕಿ ಓರ್ವ ಕಾಂಗ್ರೆಸ್ ಬೆಂಬಲಿತ ಸದಸ್ಯೆಯೂ ಸೇರಿದ್ದು ಅಧ್ಯಕ್ಷ, ಉಪಾಧ್ಯಕ್ಷೆ ಸೇರಿದಂತೆ 17 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯೆಯರು ಸೇರಿದ್ದಾರೆ.
ಈ ವಿಚಾರದಲ್ಲಿ ಪಕ್ಷ ಬೇಧ ಮರೆತು ಪರಸ್ಪರ ಹೊಂದಾಣಿಕೆ ಮಾಡಿಕೊಂಡರೇ ಅಥವಾ ಸಂವಿಧಾನದ ಬಗ್ಗೆ ಅಭಿಮಾನವಿಲ್ಲದೆ ಗೈರು ಹಾಜರಾದರೇ ಎಲ್ಲರೂ ಗೈರಾಗಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಊರವರಿಂದ ಕೇಳಿ ಬರುತ್ತಿದೆ.
ಘಟನೆ ಬಗ್ಗೆ ದಲಿತ ಮುಖಂಡರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆ ವಿಚಾರಿಸಿದಾಗ ನಾವು ಎಲ್ಲಾ ಜನಪ್ರತಿನಿಧಿಗಳಿಗೂ ತಿಳಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿ.ವಿ.ಎಫ್. ಪದಾಧಿಕಾರಿಗಳಾದ ಪ್ರಕಾಶ್ , ಸುರೇಂದ್ರ ಕಾರ್ಯಕ್ರಮದಲ್ಲಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಶಿಕ್ಷಕಿಯರು ಹಾಗೂ ಬೆರಳೆಣಿಕೆಯ ವಿದ್ಯಾರ್ಥಿಗಳು , ಬಿವಿಎಫ್ ಕಾರ್ಯಕರ್ತರು ಭಾಗವಹಿಸಿದ್ದು ಮಹತ್ವದ ಕಾರ್ಯಕ್ರಮದಲ್ಲಿ ಏಕೈಕ ಸದಸ್ಯ ಮಾತ್ರ ಭಾಗವಹಿಸಿ 19 ಸದಸ್ಯರು ಗೈರು ಹಾಜರಾಗಿರುವ ಬಗ್ಗೆ ದಲಿತ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದ್ದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.