ಬ್ಯಾಂಕ್ ಅಧಿಕಾರಿಗಳ ಹಠಮಾರಿತನ: ಹೂತಿದ್ದ ಸಹೋದರಿಯ ಶವ ಹೊತ್ತು ಬ್ಯಾಂಕಿಗೆ ಬಂದ ವ್ಯಕ್ತಿ! - Mahanayaka

ಬ್ಯಾಂಕ್ ಅಧಿಕಾರಿಗಳ ಹಠಮಾರಿತನ: ಹೂತಿದ್ದ ಸಹೋದರಿಯ ಶವ ಹೊತ್ತು ಬ್ಯಾಂಕಿಗೆ ಬಂದ ವ್ಯಕ್ತಿ!

odisha
29/04/2026

ಭುವನೇಶ್ವರ: ಬ್ಯಾಂಕ್ ಅಧಿಕಾರಿಗಳ ಹಠಮಾರಿ ಧೋರಣೆ ಮತ್ತು ಕಾನೂನಿನ ಅರಿವಿಲ್ಲದ ಅಮಾಯಕ ಬುಡಕಟ್ಟು ವ್ಯಕ್ತಿಯೊಬ್ಬರು ತಮ್ಮ ಮೃತ ಸಹೋದರಿಯ ಅಸ್ಥಿಪಂಜರವನ್ನೇ ಚೀಲದಲ್ಲಿ ತುಂಬಿಕೊಂಡು ಬ್ಯಾಂಕಿಗೆ ಬಂದಿರುವ ಘಟನೆ ಒಡಿಶಾದ ಕಿಯೋಂಜಹರ್ ಜಿಲ್ಲೆಯಲ್ಲಿ ನಡೆದಿದೆ.

ಜೀತು ಮುಂಡಾ ಎಂಬ ವ್ಯಕ್ತಿಯ ಸಹೋದರಿ ಕಳೆದ ಜನವರಿ 26 ರಂದು ನಿಧನರಾಗಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 20,000 ರೂಪಾಯಿ ಹಣವನ್ನು ಹಿಂಪಡೆಯಲು ಜೀತು ಹಲವು ಬಾರಿ ಬ್ಯಾಂಕಿಗೆ ಅಲೆದಾಡಿದ್ದರು. ಆದರೆ, ಬ್ಯಾಂಕ್ ಸಿಬ್ಬಂದಿ “ಹಣ ಪಡೆಯಲು ಖಾತೆದಾರರನ್ನೇ ಕರೆತರಬೇಕು” ಎಂದು ಸೂಚಿಸಿದ್ದರು ಎನ್ನಲಾಗಿದೆ. ಸಹೋದರಿ ಮೃತಪಟ್ಟಿದ್ದಾರೆ ಎಂದು ಜೀತು ತಿಳಿಸಿದರೂ, ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಕೇಳಿದ್ದರು.

ಬ್ಯಾಂಕ್ ವ್ಯವಹಾರಗಳ ಬಗ್ಗೆ ಅರಿವಿಲ್ಲದ ಮತ್ತು ದಾಖಲೆಗಳ ಕೊರತೆಯಿಂದ ಹತಾಶರಾದ ಜೀತು, ತನ್ನ ಸಹೋದರಿ ಮೃತಪಟ್ಟಿದ್ದಾಳೆ ಎಂದು ಸಾಬೀತುಪಡಿಸಲು ಆಕೆಯ ಸಮಾಧಿಯನ್ನು ಅಗೆದು, ಅಸ್ಥಿಪಂಜರವನ್ನು ಚೀಲದಲ್ಲಿ ತುಂಬಿಕೊಂಡು ಸುಮಾರು 3 ಕಿಲೋಮೀಟರ್ ನಡೆದು ಬ್ಯಾಂಕಿಗೆ ಬಂದಿದ್ದಾರೆ.

ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಜೀತು ಅವರಿಗೆ ಸಾಂತ್ವನ ಹೇಳಿ, ಅಸ್ಥಿಪಂಜರವನ್ನು ಮರಳಿ ಹೂಳಲು ವ್ಯವಸ್ಥೆ ಮಾಡಿದರು. ಬ್ಯಾಂಕ್ ಮ್ಯಾನೇಜರ್ ಪ್ರಕಾರ, “ಖಾತೆಗೆ ಯಾವುದೇ ನಾಮಿನಿ (Nominee) ಇರಲಿಲ್ಲ, ಹಾಗಾಗಿ ಮೃತರ ವಾರಸುದಾರರ ಪ್ರಮಾಣಪತ್ರ (Legal Heir Certificate) ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಜೀತು ಅವರಿಗೆ ಇದರ ತಿಳುವಳಿಕೆ ಇರಲಿಲ್ಲ” ಎಂದು ಹೇಳಿದ್ದಾರೆ.

ಈ ಕರುಣಾಜನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾಡಳಿತವು ತಕ್ಷಣವೇ ಜೀತು ಅವರಿಗೆ 30,000 ರೂಪಾಯಿಗಳ ಆರ್ಥಿಕ ಸಹಾಯ ನೀಡಿದೆ. ಅಲ್ಲದೆ, ಮಂಗಳವಾರ ಬ್ಯಾಂಕ್ ಅಧಿಕಾರಿಗಳು ಜೀತು ಅವರ ಸಹೋದರಿಯ ಖಾತೆಯಲ್ಲಿದ್ದ 19,402 ರೂಪಾಯಿಗಳನ್ನು (ಬಡ್ಡಿ ಸಮೇತ) ಅವರಿಗೆ ಹಸ್ತಾಂತರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ