ಭಗವಂತ ಮತ್ತು ಭಕ್ತರ ನಡುವಿನ ಸಂಪರ್ಕ ಸೇತು ಭಜನೆ: ಪೇಜಾವರಶ್ರೀ - Mahanayaka
7:58 AM Wednesday 17 - September 2025

ಭಗವಂತ ಮತ್ತು ಭಕ್ತರ ನಡುವಿನ ಸಂಪರ್ಕ ಸೇತು ಭಜನೆ: ಪೇಜಾವರಶ್ರೀ

dharmasthala
26/09/2022

ಬೆಳ್ತಂಗಡಿ: ಸರ್ವ ಶಾಸ್ತ್ರಗಳ ಸಾರ ಭಜನೆಯಲ್ಲಿದ್ದು, ಅರ್ಥವನ್ನು ಅರಿತು ಪರಿಶುದ್ಧ ಮನಸ್ಸಿನಿಂದ ದೃಢ ಭಕ್ತಿಯೊಂದಿಗೆ ಪ್ರತಿ ದಿನ ಭಜನೆ ಹಾಡಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ತನ್ಮೂಲಕ  ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.


Provided by

ಧರ್ಮಸ್ಥಳದಲ್ಲಿ 24ನೆ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಭಗವಂತ ಮತ್ತು ಭಕ್ತರ ನಡುವಿನ ಸಂಪರ್ಕ ಸೇತು ಭಜನೆ. ಭಗವಂತನ ಅನುಗ್ರಹ ಪ್ರಾಪ್ತಿಗೆ ಭಜನೆ ಅತ್ಯಂತ ಸರಳ ಮಾಧ್ಯಮವಾಗಿದೆ. ದೇವರು ಭಕ್ತಿಯ ಭಾವವನ್ನು ಗಮನಿಸುತ್ತಾರೆ. ಭಕ್ತಿಯಿಂದ ಮಾಡಿದ  ಸಾರ್ಥಕ ಸೇವೆ ಮೂಲಕ ಸಕಲ ದೋಷಗಳಿಂದ  ಮುಕ್ತಿ ಪಡೆಯಬಹುದು ಎಂದರು.

ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಪ್ರತಿ ಮನೆಯಲ್ಲಿಯೂ ನಿತ್ಯವೂ ಸಂಜೆ ಒಂದು ಗಂಟೆಯಾದರೂ ಭಜನೆ ಮಾಡಬೇಕು. ಭಜನಾ ಸಂಸ್ಕೃತಿಯನ್ನು ಮಕ್ಕಳಿಗೂ ಕಲಿಸಿ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದರು. ಇದೇ ವೇಳೆ ತುಳು ಭಜನೆಯೊಂದನ್ನು ಸ್ವಾಮೀಜಿ ಸುಶ್ರಾವ್ಯವಾಗಿ ಹಾಡಿದರು.

ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಗೀತೆಯೊಂದನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ಸಾಂಸ್ಕೃತಿಕ ಹಿನ್ನೆಲೆಯ ಸಂಗೀತ ನಮ್ಮ ಬದುಕಿನಲ್ಲಿ ಧನಾತ್ಮಕ ಪರಿವರ್ತನೆ ಮಾಡಿ ಮಾನಸಿಕ ಶಾಂತಿ, ನೆಮ್ಮದಿ ನೀಡುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನ ವಾಸುದೇವ ರೆಡ್ಡಿ ಮತ್ತು ಮನೆಯವರು ಡಿ. ವೀರೇಂದ್ರ ಹೆಗ್ಗಡೆಯವರಿಗೆ ರಜತ ಕಿರೀಟ ಮತ್ತು ರಜತ ಗದೆ ಅರ್ಪಿಸಿ ಗೌರವಿಸಿದರು. ಗೌರವ ಡಾಕ್ಟರೇಟ್ ಪಡೆದ ಹೇಮಾವತಿ ಹೆಗ್ಗಡೆಯವರನ್ನೂ ಅವರು ಗೌರವಿಸಿದರು.

dharmasthala

ಅಧ್ಯಕ್ಷತೆ ವಹಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ. ಧರ್ಮೋ ರಕ್ಷತಿ ರಕ್ಷಿತ: ಅಂದರೆ ಧರ್ಮವನ್ನು ಸದಾ ನಾವು ಧರಿಸಿ ಆಚರಿಸಿ, ಜೀವನದಲ್ಲಿ ಅಳವಡಿಸಿಕೊಳ್ಖುವುದಾಗಿದೆ, ನಾವು ಧರ್ಮವನ್ನು ಪಾಲಿಸಿದಾಗ ಧರ್ಮ ನಮ್ಮನ್ನು ಕಾಪಾಡುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಉಳಿಸುವುದು ಕೂಡಾ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ ಎಂದರು.

ಹೇಮಾವತಿ ವೀ. ಹೆಗ್ಗಡೆ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ್ ಮೊಯಿಲಿ ವರದಿ ವಾಚಿಸಿದರು,ನಿವೃತ್ತ ಶಿಕ್ಷಕ ಧರ್ಣಪ್ಪ ಧನ್ಯವಾದವಿತ್ತರು. ಶ್ರೀನಿವಾಸರಾವ್ ಧರ್ಮಸ್ಥಳ ಮತ್ತು ದಿನರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ