ರಸ್ತೆ ತಿರುವು ಕಾಣದೇ ಕಾರು ಪಲ್ಟಿ: ಎಂಬಿಬಿಎಸ್ ವಿದ್ಯಾರ್ಥಿ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

27/01/2024
ಧಾರವಾಡ: ರಸ್ತೆ ದುರಸ್ತಿ ಹಿನ್ನೆಲೆ ತಿರುವು ಹಾಕಿರುವುದು ಕಾಣದೇ ವಿದ್ಯಾರ್ಥಿ ಕಾರು ಚಲಾಯಿಸಿದ್ದು, ಪರಿಣಾಮವಾಗಿ ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮುಮ್ಮಿಗಟ್ಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು. ಹೀಗಾಗಿ ತಿರುವು ಕೊಡಲಾಗಿತ್ತು. ತಿರುವು ಕೊಟ್ಟಿರುವುದು ಸರಿಯಾಗಿ ಕಾಣದ ಹಿನ್ನೆಲೆ ಕಾರು ಪಲ್ಟಿಯಾಗಿದ್ದು ಪರಿಣಾಮವಾಗಿ ಕಾರಿನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿ ದೀಪಕ್(30) ಸಾವನ್ನಪ್ಪಿದ್ದು, ಜೊತೆಗಿದ್ದ ವಿನಯ್ ಎಂಬಾತ ಗಂಭಿರವಾಗಿ ಗಾಯಗೊಂಡಿದ್ದಾನೆ.
ಮೃತ ದೀಪಕ್ ಮೂಲತಃ ಯಾದಗಿರಿ ಜಿಲ್ಲೆ ಮೂಲದವನಾಗಿದ್ದು, ಧಾರವಾಡ ಎಸ್ ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಸದ್ಯ ಗಾಯಗೊಂಡಿರುವ ವಿನಯ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡದ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.