ವೀರಪ್ಪನ್ ಹಾರಿಸಿದ್ದ 3 ಬುಲೆಟ್ ತಲೆಯಲ್ಲಿಟ್ಟುಕೊಂಡೇ ಕರ್ತವ್ಯ ಸಲ್ಲಿಸುತ್ತಿದ್ದ ಪಿಎಸ್ ಐ ಸಿದ್ದರಾಜನಾಯಕ್ ನಿಧನ - Mahanayaka
6:16 AM Wednesday 27 - August 2025

ವೀರಪ್ಪನ್ ಹಾರಿಸಿದ್ದ 3 ಬುಲೆಟ್ ತಲೆಯಲ್ಲಿಟ್ಟುಕೊಂಡೇ ಕರ್ತವ್ಯ ಸಲ್ಲಿಸುತ್ತಿದ್ದ ಪಿಎಸ್ ಐ ಸಿದ್ದರಾಜನಾಯಕ್ ನಿಧನ

siddarajanayak
25/05/2021


Provided by

ಚಾಮರಾಜನಗರ: ವೀರಪ್ಪನ್ ಜೊತೆಗಿನ ಕಾಳಗದಲ್ಲಿ  ಏಳು ಬುಲೆಟ್ ದೇಹಕ್ಕೆ ನುಗ್ಗಿದ್ದರೂ, ಸಾವನ್ನೇ ಗೆದ್ದು, ಮತ್ತೆ ಕರ್ತವ್ಯದಲ್ಲಿ ತೊಡಗಿಕೊಂಡಿದ್ದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದ ಸಿದ್ದರಾಜನಾಯಕ್ ಅವರು ಇಂದು  ಮೃತಪಟ್ಟಿದ್ದಾರೆ.

1992ರಲ್ಲಿ ಸಿದ್ದರಾಜನಾಯಕ್,  ಎಸ್ಪಿ ಹರಿಕೃಷ್ಣ, ಎಸ್ ಐ ಶಕೀಲ್ ಅಹ್ಮದ್ ಅವರಿದ್ದ ಪೊಲೀಸ್ ತಂಡ ಹಾಗೂ ವೀರಪ್ಪನ್  ನ ಗ್ಯಾಂಗ್ ನಡುವೆ  ಮೀನ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದ ಸಂದರ್ಭದಲ್ಲಿ ಸಿದ್ದರಾಜನಾಯಕ್ ಅವರಿಗೆ 7 ಬುಲೆಟ್ ಗಳು ದೇಹಕ್ಕೆ ತಾಗಿದ್ದವು.

ಘಟನೆಯ ಬಳಿಕ ನಾಲ್ಕು ಗುಂಡುಗಳನ್ನು ಅವರ ದೇಹದಿಂದ ಹೊರ ತೆಗೆಯಲಾಗಿತ್ತು. ಆದರೆ ಮೂರು ಗುಂಡುಗಳು ಅವರ ತಲೆಯಲ್ಲಿಯೇ ಉಳಿದುಕೊಂಡಿತ್ತು.  ಇಷ್ಟಾದರೂ ಅವರು ಮತ್ತೆ ಕರ್ತವ್ಯಕ್ಕೆ ಮರಳಿ ಬಂದಿದ್ದರು.

ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ 75 ದಿನಗಳ ಕಾಲ ರಜೆ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದರು.

ಸಿದ್ದರಾಜನಾಯಕ್ ಅವರು, ಕರ್ತವ್ಯದಿಂದ ನಿವೃತ್ತರಾಗಲು ಇನ್ನು ಕೇವಲ 5 ದಿನಗಳ ಬಾಕಿ ಇರುವಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದರಾಜನಾಯಕ್ ಅವರ  ನಿಧನಕ್ಕೆ ಚಾಮರಾಜನಗರ ಪೊಲೀಸರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ