ಸಾವಿಗೂ ಮುನ್ನಾದಿನ ಸಿ.ಜೆ.ರಾಯ್ ಹೋಗಿದ್ದೆಲ್ಲಿಗೆ?: ತೀವ್ರ ಮಾನಸಿಕ ಒತ್ತಡದಲ್ಲಿದ್ರಾ?
ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ‘ಕಾನ್ಫಿಡೆಂಟ್ ಗ್ರೂಪ್’ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನವಷ್ಟೇ ರಾಯ್ ಅವರು ನಗರದ ಖ್ಯಾತ ಮನೋವೈದ್ಯರಿಂದ ಕೌನ್ಸಿಲಿಂಗ್ ಪಡೆದಿದ್ದರು ಎಂಬ ವಿಷಯ ತನಿಖೆಯಿಂದ ತಿಳಿದುಬಂದಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೇ ರಾಯ್? ಸಾವಿರಾರು ಕೋಟಿ ಒಡೆಯನಾಗಿದ್ದರೂ, ಸಿ.ಜೆ. ರಾಯ್ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಬೆಂಗಳೂರಿನ ಜಯನಗರದಲ್ಲಿರುವ ಖ್ಯಾತ ಮನೋವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದರು. ಆತ್ಮಹತ್ಯೆಗೆ ಶರಣಾಗುವ ಕೇವಲ ಒಂದು ದಿನ ಮೊದಲು ಅವರು ವೈದ್ಯರ ಬಳಿ ತಮ್ಮ ವೈಯಕ್ತಿಕ ಸಂಕಷ್ಟಗಳು ಮತ್ತು ಜೀವನದ ಒತ್ತಡಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದರು ಎಂದು ವರದಿಯಾಗಿದೆ.
ಸೌಂಡ್ಪ್ರೂಫ್ ರೂಮ್ ನಿಂದಾಗಿ ತಡವಾಗಿ ಬೆಳಕಿಗೆ ಬಂದ ಘಟನೆ: ಆತ್ಮಹತ್ಯೆ ನಡೆದ ದಿನ ಐಟಿ ದಾಳಿಯ ನಡುವೆಯೇ ರಾಯ್ ತಮ್ಮ ಚೇಂಬರ್ನಲ್ಲಿ ಎದೆಗೆ ಗುಂಡು ಹಾರಿಸಿಕೊಂಡಿದ್ದರು. ಆದರೆ, ಅವರ ಚೇಂಬರ್ ಸಂಪೂರ್ಣವಾಗಿ ‘ಸೌಂಡ್ಪ್ರೂಫ್’ ಆಗಿದ್ದರಿಂದ, ಗುಂಡು ಹಾರಿದ ಶಬ್ದ ಹೊರಗಿದ್ದ ಸಿಬ್ಬಂದಿಗೆ ಕೇಳಿಸಿರಲಿಲ್ಲ. ಸುಮಾರು 20 ನಿಮಿಷಗಳ ಕಾಲ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾವಿನ ಬಗ್ಗೆ ಚರ್ಚೆ: ಸಿ.ಜೆ. ರಾಯ್ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಜೀವನ ಮತ್ತು ಸಾವಿನ ಕುರಿತಾದ ವಿಚಾರಗಳನ್ನು ಪದೇ ಪದೇ ಹಂಚಿಕೊಳ್ಳುತ್ತಿದ್ದರು. ಅಲ್ಲದೆ, ಸಾವಿನ ವಿಷಯವನ್ನೇ ಆಧರಿಸಿ ಸಿನಿಮಾವೊಂದನ್ನು ನಿರ್ಮಿಸಲು ಅವರು ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೊರಗಿನ ಜಗತ್ತಿಗೆ ಯಶಸ್ವಿ ಉದ್ಯಮಿಯಾಗಿ ಕಾಣುತ್ತಿದ್ದ ರಾಯ್, ಒಳಗೊಳಗೆ ತೀವ್ರ ಮಾನಸಿಕ ಸಂಘರ್ಷ ಅನುಭವಿಸುತ್ತಿದ್ದರು ಎಂಬುದು ಈ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಪ್ರಸ್ತುತ ಪೊಲೀಸರು ಈ ಎಲ್ಲಾ ಆಯಾಮಗಳಿಂದ ತನಿಖೆಯನ್ನು ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























