ಮಣಿಪುರದ ಭೀಕರತೆ ಬಿಚ್ಚಿಟ್ಟ ಜಾರ್ಖಂಡ್ ಕುಟುಂಬ: ಕುಕಿ ಸಮುದಾಯದ ಸೊಸೆಯನ್ನ ಬೆಡ್ ಶೀಟ್ ನಿಂದ ಮುಚ್ಚಿ ರಕ್ಷಣೆ..! - Mahanayaka

ಮಣಿಪುರದ ಭೀಕರತೆ ಬಿಚ್ಚಿಟ್ಟ ಜಾರ್ಖಂಡ್ ಕುಟುಂಬ: ಕುಕಿ ಸಮುದಾಯದ ಸೊಸೆಯನ್ನ ಬೆಡ್ ಶೀಟ್ ನಿಂದ ಮುಚ್ಚಿ ರಕ್ಷಣೆ..!

03/08/2023


Provided by

ಮಣಿಪುರಕ್ಕೆ 50 ವರ್ಷಗಳ ಹಿಂದೆ ವಲಸೆ ಹೋಗಿದ್ದ ಕುಟುಂಬವೊಂದು ಅದೃಷ್ಟವಶಾತ್ ಜಾರ್ಖಂಡ್ ನ ಸಿಮ್ಡೆಗಾದ ತಮ್ಮ ಸ್ವಗ್ರಾಮಕ್ಕೆ ಮರಳಿದೆ. ಇದೇ ವೇಳೆ ಅವರು ಮಣಿಪುರದಲ್ಲಿನ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ 10 ನೇ ವಯಸ್ಸಿನಲ್ಲಿ ಬುಡಕಟ್ಟು ವ್ಯಕ್ತಿ ಸೆಲೆಸ್ಟಿನ್ ಬಾರಾ ಎಂಬುವವರು ಮಣಿಪುರಕ್ಕೆ ಸ್ಥಳಾಂತರಗೊಂಡಿದ್ದರು. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಸೆಲೆಸ್ಟಿನ್ ಬಾರಾ ಅವರು ಜಾರ್ಖಂಡ್‌ ನ ಸಿಮ್ಡೆಗಾದ ತಮ್ಮ ಸ್ವಗ್ರಾಮಕ್ಕೆ ವಾಪಸ್ಸಾಗಿದ್ದಾರೆ.

ಸ್ವಗ್ರಾಮಕ್ಕೆ ವಾಪಸ್ ಆದ ಬಳಿಕ ತಾವು ಎದುರಿಸಿದ ಸಮಸ್ಯೆ, ಕುಕಿ ಸಮುದಾಯಕ್ಕೆ ಸೇರಿದ ತಮ್ಮ ಸೊಸೆ ಹಾಗೂ ಮಣಿಪುರದಲ್ಲಿನ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.

ಇಂಫಾಲದಿಂದ ಸುಮಾರು 20 ಕಿ.ಮೀ.ದೂರದಲ್ಲಿರುವ ಇಸ್ಲೈಜಂಗ್ ಗ್ರಾಮದಲ್ಲಿ ಸೊಸೆ ಹಾಗೂ ಮಕ್ಕಳನ್ನು ಅಡಗಿಸಲಾಗಿತ್ತು. 1 ತಿಂಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇರಿಸಲಾಗಿತ್ತು. ಇದಕ್ಕೆ ಕಾರಣ ನನ್ನ ಸೊಸೆ ಕುಕಿ ಸಮುದಾಯಕ್ಕೆ ಸೇರಿರುವುದಾಗಿತ್ತು.

ನಾವಿದ್ದ ಸ್ಥಳದಲ್ಲಿ ಎಲ್ಲವೂ ಶಾಂತಿಯುತವಾಗಿತ್ತು. ಆದರೆ ಪಕ್ಕದ ಹಳ್ಳಿಯಲ್ಲಿ ಕುಕಿ ಸಮುದಾಯದವರ ಮೇಲೆ ಮೈತೇಯಿ ಸಮುದಾಯದವರು ದಾಳಿ ನಡೆಸಿದ್ದರು. ಇದು ಪರಿಸ್ಥಿತಿ ಹದಗೆಡುವಂತೆ ಮಾಡಿತ್ತು. ಹಿಂಸಾಚಾರ ಎಲ್ಲೆಡೆ ಹರಡಿತ್ತು.

ಈ ಹಿಂಸಾಚಾರ ಹಲವು ವಾರಗಳ ಕಾಲ ಮುಂದುವರೆದಿತ್ತು. ಪಕ್ಕದ ಹಳ್ಳಿಯಲ್ಲಿ ಬೆಂಕಿಯ ಜ್ವಾಲೆಗಳು ಮುಗಿಲು ಮುಟ್ಟುವಂತಿತ್ತು. ಮೈತೀ ಸಮುದಾಯದವರು ಗ್ರಾಮದ ಮೇಲೆ ದಾಳಿ ಮಾಡಿದ್ದರು. ಕುಕಿ ಸಮುದಾಯಕ್ಕೆ ಸೇರಿದವರ ಮನೆಗಳನ್ನು ಸುಟ್ಟುಹಾಕಿದ್ದರು. ಅವರನ್ನು ಕ್ರೂರವಾಗಿ ಹತ್ಯೆ ಮಾಡುತ್ತಿದ್ದರು. ಆ ಸಮುದಾಯದ ಅನೇಕ ಮಹಿಳೆಯನ್ನು ಎಳೆದೊಯ್ದಿದ್ದರು. ಇದನ್ನು ನೆನೆದರೆ ಈಗಲೂ ನನ್ನ ಮೈ ನಡುಗುತ್ತದೆ. ನನ್ನ ಕುಟುಂಬದಲ್ಲಿಯೂ ಕುಕಿ ಸಮುದಾಯಕ್ಕೆ ಸೇರಿದವರಿದ್ದರಿಂದ ಆತಂಕ ಹೆಚ್ಚಾಗಿತ್ತು.

ಹೀಗಾಗಿ ಸೊಸೆ ಹಾಗೂ ಮಕ್ಕಳನ್ನು ಸುರಕ್ಷಿತ ಪ್ರದೇಶದಲ್ಲಿ ಅಡಗಿ ಕುಳಿತುಕೊಳ್ಳುವಂತೆ ಮಾಡಿತು. ನಂತರ ಮಣಿಪುರದಿಂದ ಸೇನೆಗೆ ಪಡಿತರ ಸಾಗಿಸುವ ಟ್ರಕ್‌ ನಲ್ಲಿ ಕುಟುಂಬವನ್ನು ಮಣಿಪುರ ಗಡಿ ಮುಟ್ಟುವಂತೆ ನೋಡಿದೆವು. ಗಡಿ ಬಳಿ ಶಸ್ತ್ರಸಜ್ಜಿತ ಜನರು ನಮ್ಮ ಗುರುತುಗಳನ್ನು ಕೇಳಿದರು. ಟ್ರಕ್‌ನಿಂದ ಕೆಳಗಿಳಿದು ನಾವೆಲ್ಲರೂ ನಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸಿದೆವು. ಆದರೆ, ಕುಕಿ ಸಮುದಾಯಕ್ಕೆ ಸೇರಿದ ನನ್ನ ಸೊಸೆಯನ್ನು ಬೆಡ್ ಶೀಟ್ ಗಳಿಂದ ಮುಚ್ಚಿ ರಕ್ಷಣೆ ಮಾಡಿದೆವು. ಜುಲೈ 20 ರಂದು ಸಿಮ್ಡೇಗಾದ ತುಮದೇಗಿ ಗ್ರಾಮಕ್ಕೆ ನಾಲ್ಕು ದಿನಗಳ ಬಳಿಕ ತಲುಪಿದೆವು. ಗ್ರಾಮ ತಲುಪಿದಾಗಲೇ ನಾವು ಉಸಿರು ಮತ್ತೆ ಬಂದತಾಯಿತು ಅಂದರು.

ಇದೇ ವೇಳೆ ತಮ್ಮ ಸೊಸೆಗೆ ರಕ್ಷಣೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬದಲ್ಲಿ ಒಟ್ಟು 19 ಮಂದಿ ಇದ್ದಾರೆ. ಈ ಪೈಕಿ 8 ಮಕ್ಕಳು, 7 ಮಂದಿ ಪುರುಷರು ಹಾಗೂ ಉಳಿದವರು ಮಹಿಳೆಯರಿದ್ದಾರೆ. ಎಲ್ಲಾ ಮಕ್ಕಳನ್ನೂ ಸಮೀಪದ ಶಾಲೆಗೆ ಸೇರಿಸಲಾಗಿದೆ. ಮಕ್ಕಳಿಗೆ 2 ಕೆಜಿ ಅಕ್ಕಿ, ಬೆಡ್ ಶೀಟ್ ಗಳನ್ನು ನೀಡಲಾಗುತ್ತಿದೆ ಸಿಮ್‌ ಡೇಗಾ ಬಿಡಿಒ ಅಜಯ್‌ ರಜಾಕ್‌ ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ