ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ: ತಲೆಕೂದಲು ಬೋಳಿಸಿ, ಜಾತಿ ನಿಂದನೆ

ಫರಿದಾಬಾದ್(Faridabad): ದಲಿತ ಯುವಕನೊಬ್ಬನ ಮೇಲೆ ಜಾತಿ ನಿಂದನೆ ಮಾಡಿ, ಒತ್ತೆಯಾಳಾಗಿರಿಸಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಫರಿದಾಬಾದ್ ನ ಬಲ್ಲಭ್ ಗಢದ ಸುಬಾಶ್ ಕಾಲೋನಿಯಲ್ಲಿ ನಡೆದಿದೆ.
18 ವರ್ಷದ ಸಾಹಿಲ್ ಹಲ್ಲೆಗೊಳಗಾದ ಯುವಕನಾಗಿದ್ದು, ಹಲ್ಲೆಯಿಂದ ಗಂಭೀರ ಸ್ಥಿತಿಯಲ್ಲಿ ಮನೆಗೆ ಸಾಹಿಲ್ ತಲುಪಿದ ನಂತರ ಆತನ ಸಹೋದರ ಸಂಬಂಧಿ ಸೂರಜ್(32) ಪೊಲೀಸರಿಗೆ ಘಟನೆ ಸಂಬಂಧ ದೂರು ನೀಡಿದ್ದಾರೆ. ಈ ದೂರಿನನ್ವಯ 19 ವರ್ಷದ ಯುವಕ ಸೇರಿದಂತೆ ಇಬ್ಬರು ಅಪ್ರಾಪ್ತ ವಯಸ್ಕರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ದುಷ್ಕರ್ಮಿಗಳು ಒತ್ತೆಯಾಳಾಗಿರಿಸಿದ ಘಟನೆಯ ನಂತರ ಕುಟುಂಬಸ್ಥರು ಸಾಹಿಲ್ ನನ್ನು ಹುಟುಕಾಟ ನಡೆಸಿದ್ದರು. ಸೋಮವಾರ ರಾತ್ರಿ ಸಾಹಿಲ್ ಕುಂಟುತ್ತಾ, ರಕ್ತ ಸ್ರಾವವಾಗುತ್ತಾ, ತಲೆ ಬೋಳಿಸಿದ ಸ್ಥಿತಿಯಲ್ಲಿ ಮನೆಗೆ ಬಂದಿದ್ದಾನೆ. ಆತ ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಆತನ ಸ್ಥಿತಿ ಎಷ್ಟು ಘೋರವಾಗಿತ್ತೆಂದರೆ, ಆತನನ್ನು ನೋಡಿದ 13 ವರ್ಷದ ಸಹೋದರಿ, ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಮೂರ್ಛೆ ಹೋಗಿದ್ದಳು.
ಬಳಿಕ ಸಾಹಿಲ್ ನನ್ನು ಹಾಸಿಗೆ ಮೇಲೆ ಕೂರಿಸಲಾಯಿತು. ಘಟನೆಯ ಮಾಹಿತಿ ತಿಳಿದು ಮನೆಯ ಸುತ್ತಮುತ್ತ ಜನಸಮೂಹ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ನಾಲ್ವರು ಆರೋಪಿಗಳು ಸಾಹಿಲ್ ನ ಜಾತಿ ನಿಂದನೆ ಮಾಡಿ, ಕೋಣೆಯೊಂದರಲ್ಲಿ ಒತ್ತೆಯಾಳಾಗಿರಿಸಿ, ಕೂದಲು, ಹುಬ್ಬು, ಮೀಸೆ ಮತ್ತು ಗಡ್ಡವನ್ನು ಕತ್ತರಿಸಿ ವಿರೂಪಗೊಳಿಸಿದ್ದಲ್ಲದೇ, ಆತನನ್ನು ತಲೆಕೆಳಗಾಗಿ ನೇತು ಹಾಕಿ, ಕೋಲು ಮತ್ತು ಕಬ್ಬಿಣದ ರಾಡ್ ನಿಂದ ಥಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ಆರೋಪಿಗಳ ವಿರುದ್ಧ ಎಸ್/ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: