ಉದ್ಯಮಿಗೆ ವಂಚಿಸಲು ಚೈತ್ರಾ ಕುಂದಾಪುರ ಸೃಷ್ಟಿಸಿದ ಪಾತ್ರಗಳೆಷ್ಟು ಗೊತ್ತಾ?: ಸಿನಿಮಾ ಕಥೆಗಳನ್ನೇ ಮೀರಿಸುತ್ತೆ ಈ ಕಥೆ - Mahanayaka

ಉದ್ಯಮಿಗೆ ವಂಚಿಸಲು ಚೈತ್ರಾ ಕುಂದಾಪುರ ಸೃಷ್ಟಿಸಿದ ಪಾತ್ರಗಳೆಷ್ಟು ಗೊತ್ತಾ?: ಸಿನಿಮಾ ಕಥೆಗಳನ್ನೇ ಮೀರಿಸುತ್ತೆ ಈ ಕಥೆ

chaithra kundapura
13/09/2023


Provided by

ಉದ್ಯಮಿ ಗೋವಿಂದ ಬಾಬು ಪೂಜಾರಿ  7 ವರ್ಷಗಳಿಂದ ‘ವರಲಕ್ಷ್ಮಿ, ಚಾರಿಟಬಲ್ ಟ್ರಸ್ಟ್‌’ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡಿದ್ದರು.  ಬಿಜೆಪಿ ಕಾರ್ಯಕರ್ತ ಪ್ರಸಾದ್ ಬೈಂದೂರು ಅವರು ಹಿಂದೂ ಕಾರ್ಯಕರ್ತೆ ಎಂದು ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ರವರನ್ನು ಪರಿಚಯಿಸಿದ್ದಾರೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಬೇಕು, ಸ್ಪರ್ಧಿಸಿದರೆ ಗೆಲ್ಲಿಸಿಕೊಡುವುದಾಗಿ  ಗೋವಿಂದ ಬಾಬು ಪೂಜಾರಿ   ಅವರನ್ನು  ಮನವೊಲಿಸಿ “ನಾನು ಹಿಂದೂ ಸಂಘಟನೆಯಲ್ಲಿರುವುದರಿಂದ BJP — RSS ವರಿಷ್ಠರಿಗೂ ಹತ್ತಿರವಿದ್ದೇನೆ. ಪ್ರಧಾನಿ ಕಚೇರಿಯಲೂ ಪ್ರಭಾವಿಯಾಗಿದ್ದು, ಸುಪ್ರೀಂ ಕೋರ್ಟ್ ಜಡ್ಜ್ ಗಳಿಗೂ ಆಪ್ತಳಾಗಿದ್ದು, ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇನೆ” ಎಂದು ಚೈತ್ರಾ ಕುಂದಾಪುರ ರವರು ನಂಬಿಸಿದ್ದರು.

ಬಳಿಕ ಚೈತ್ರಾ ಕುಂದಾಪುರ, ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಇರುವ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ರವರ ಮೂಲಕ ಟಿಕೆಟ್ ಕೊಡಿಸುವುದಾಗಿ ಹೇಳಿ, 04.07.2022ರಂದು ಚಿಕ್ಕಮಗಳೂರಿಗೆ ಗೋವಿಂದ ಬಾಬು ಪೂಜಾರಿ ಅವರನ್ನು  ಕರೆಸಿಕೊಂಡು, ಸರ್ಕಾರಿ ಅತಿಥಿ ಗೃಹದಲ್ಲಿ ಗಗನ್ ಕಡೂರು ರವರನ್ನು ಭೇಟಿ ಮಾಡಿಸಿದ್ದಾರೆ. ಈ ವೇಳೆ ತಾನು ಪ್ರಧಾನಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳಿಗೆ ಅತ್ಯಂತ ನಿಕಟವರ್ತಿಯಾಗಿದ್ದು, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗಗನ್ ಕಡೂರು ಹೇಳಿದರಲ್ಲದೆ, ಟಿಕೆಟ್ ಗಿಟ್ಟಿಸಿಕೊಳ್ಳಲು RSS ರಾಷ್ಟ್ರೀಯ ಪ್ರಮುಖರ ಶಿಫಾರಸು ಇರಬೇಕು. ಅದಕ್ಕೆ ಸುಮಾರು 45 ವರ್ಷಗಳಿಂದ ಉತ್ತರ ಭಾರತದಲ್ಲಿ,, RSS ಹಿರಿಯ ಪ್ರಚಾರಕರಾಗಿರುವ ಚಿಕ್ಕಮಗಳೂರು ಮೂಲದ ವಿಶ್ವನಾಥ್ ಜಿ. ಮೂಲಕ ಶಿಫಾರಸು ಮಾಡಿಸುವುದಾಗಿ ಭರವಸೆ ನೀಡಿದರು.

ವಿಶ್ವನಾಥ್ ಜಿ ರವರು ಪ್ರಸಕ್ತ ಚಿಕ್ಕಮಗಳೂರಿನಲ್ಲಿ ಇದ್ದಾರೆ ಎಂದು ಹೇಳಿದ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ರವರು 04.07.2022 ರಂದು ವಿಶ್ವನಾಥ್ ಜೀ ರವರನ್ನು ಭೇಟಿ ಮಾಡಿಸಿ ಪರಿಚಯಿಸಿದರು, ಪಿರ್ಯಾದುದಾರರ ಬಗ್ಗೆ ಮಾಹಿತಿ ಪಡೆದ ವಿಶ್ವನಾಥ್ ಜಿ ರವರು, “ನಾನು ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯನಾಗಿದ್ದು, RSS ಮತ್ತು ಬಿಜೆಪಿ ನಡುವಿನ ಸಮನ್ವಯಕಾರನಾಗಿದ್ದೇನೆ. ಟಿಕೆಟ್ ವಿಚಾರದಲ್ಲಿ, ನನ್ನ ನಿರ್ಧಾರವೇ ಅಂತಿಮವಾಗಿರುತ್ತದೆ, ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು” ಎಂದು ಹೇಳಿದ್ದಾರೆ. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ, ರೂ.50,00,000 (ಐವತ್ತು ಲಕ್ಷ) ಗಗನ್ ಕಡೂರ್ ರವರಲ್ಲಿ ನೀಡಬೇಕು. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ ರೂ.3,00,00,000 (ಮೂರು ಕೋಟಿ ರೂಪಾಯಿ ನೀಡಬೇಕೆಂದು ತಿಳಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವ ಸಂಬಂಧ ಈ ಹಣವನ್ನು ಪಡೆಯಲಾಗುತ್ತಿದ್ದು, ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜಿ. ಭರವಸೆ ನೀಡಿದ್ದರು.

ಚೈತ್ರಾ, ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ, ಯಾವುದೇ ಅನುಮಾನ ಬೇಡ, ಹಣದ ವಿಷಯದಲ್ಲಿ, ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಹೇಳಿದ್ದರು. ಚೈತ್ರಾ, ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ಬಗ್ಗೆ ನಂಬಿಕೆ ಮೇಲೆ ಹಾಗೂ ವಿಶ್ವನಾಥ್ ಜೀ ಯವರ ನಿರ್ದೇಶನದ ಮೇರೆಗೆ ಪಿರ್ಯಾದುದಾರರಿಗೆ ರೂ.50,00,000/- (ಐವತ್ತು ಲಕ್ಷ ರೂಪಾಯಿ) ಹಣವನ್ನು 07.07.2022ರಂದು ಪ್ರಸಾದ್ ಬೈಂದೂರ್ ಮುಖಾಂತರ ಗಗನ್ ಕಡೂರ್ ರವರಿಗೆ ನೀಡಿದ್ದಾರೆ.

ಶಿವಮೊಗ್ಗದ RSS ಕಚೇರಿ ಎದುರು ಗಗನ್ ಕಡೂರು ಅವರಿಗೆ ಈ ಮೊತ್ತ ಹಸ್ತಾಂತರವಾಗಿದ್ದು, ಕರೆ ಮಾಡಿ ರೂ.50,00,000/- (ಐವತ್ತು ಲಕ್ಷ ರೂಪಾಯಿ) ಕರಿಸಿರುವುದಾಗಿ ದೃಢಪಡಿಸಿದ್ದರು. ಇದಾದ ಬಳಿಕ ವಿಶ್ವನಾಥ್ ಜೀ, ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ಕಾನ್ಫರೆನ್ಸ್ ಕರೆ ಮಾಡಿ, ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ. 2023ರ ಚುನಾವಣೆಯಲ್ಲಿ, ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಇದಾದ 2 ದಿನಗಳಲ್ಲಿ, 2022ರ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಗೋವಿಂದ ಬಾಬು ಪೂಜಾರಿ  ಮೊಬೈಲ್ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ, ಕರ್ನಾಟಕದ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದದರು. ಹೀಗಾಗಿ ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಗೋವಿಂದ ಬಾಬು ಪೂಜಾರಿ  ಭೇಟಿಯಾಗಿದ್ದು, ಗೋವಿಂದ ಬಾಬು ಪೂಜಾರಿ  ಬಗ್ಗೆ ಮಾಹಿತಿ ಪಡೆದ ಸ್ವಾಮೀಜಿ, ವಿಶ್ವನಾಥ್ ಜಿರವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿರುವುದು, ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದ್ದು ಟಿಕೆಟ್ ಕೊಡಿಸುತ್ತೇನೆ’ ಎಂದು ಹೇಳಿ, ಮುಂದಿನ ಪ್ರಕ್ರಿಯೆಗೆ ರೂ.1,50,00,000/- ನೀಡುವಂತೆ ಸೂಚಿಸಿದರು. ಸಮಯಾವಕಾಶ ಕೇಳಿ ದಿನಾಂಕ 16.01.2023ರಂದು ಗೋವಿಂದ ಬಾಬು ಪೂಜಾರಿ  ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಟಿಕೆಟ್ ಪಡೆಯುವ ಭರವಸೆಯೊಂದಿಗೆ ರೂ.1,50,00,000/- ಮೊತ್ತವನ್ನು ನೀಡಿದ್ದಾರೆ.

ಒಂದು ವೇಳೆ ಟಿಕೆಟ್ ಸಿಗದಿದ್ದಲ್ಲಿ, ರೂ.1,50,00,000/- ಮೊತ್ತವನ್ನು ವಾಪಸ್ ಕೊಡುವುದಾಗಿ ಸ್ವಾಮೀಜಿ ಭರವಸೆ ನೀಡಿ, ಖುದ್ದಾಗಿ ಸ್ವೀಕರಿಸಿದ್ದರು. ನಂತರ ವಿಶ್ವನಾಥ್ ಜೀ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ಗೋವಿಂದ ಬಾಬು ಪೂಜಾರಿ  ಕಾನ್ಫರೆನ್ಸ್ ಕರೆಯಲ್ಲಿ, ಮಾತನಾಡಿ, 23.10.2022ರಂದು ಬಿಜೆಪಿಯ ಕೇಂದೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದು, ಅವರನ್ನು 23.10.2022 ರಂದು ಗಗನ್ ಕಡೂರು ರವರು ಪಿರ್ಯಾದಯದಾರನ್ನುಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದ ‘ನಾಯ್’ ಎಂಬವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದರು. ಆ ವೇಳೆ ನಾಯ್ ರವರು, ಬೈಂದೂರು ಕ್ಷೇತ್ರಕ್ಕೆ: ಗೋವಿಂದ ಬಾಬು ಪೂಜಾರಿ  ಹೆಸರನ್ನು ಕೇಂದ್ರಿಯ ಚುನಾವಣಾ ಸಮಿತಿ ಅಂತಿಮಗೊಳಿಸಿದೆ ಎಂದು ಖಾತ್ರಿಪಡಿಸಿದರು. ಅಲ್ಲದೆ, ಬಾಕಿ ಮೊತ್ತ 3,00,00,000 (ಮೂರು ಕೋಟಿ) ರೂಪಾಯಿಗಳನ್ನು ಗಗನ್ ಕಡೂರ್ ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದರು.

ನಂತರ ನಾಯ್, ಮತ್ತು ವಿಶ್ವನಾಥ್ ಜೀ ಅವರ ಸೂಚನೆಯಂತೆ ಗೋವಿಂದ ಬಾಬು ಪೂಜಾರಿ  ರೂ.3,00,00,000/- (ಮೂರು ಕೋಟಿ ರೂಪಾಯಿ) ಮೊತ್ತವನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ 29.10.2022 ರಂದು ತಲುಪಿಸಿದ್ದಾರೆ. ನಂತರ ಗಗನ್ ಕಡೂರ್ ರವರು ಗೋವಿಂದ ಬಾಬು ಪೂಜಾರಿಗೆ ಕರೆ ಮಾಡಿ ವಿಶ್ವನಾಥ್ ಜೀ ರವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ತಿಳಿಸಿದ್ದು, ಮರುದಿನ, 08.03.2023 ರಂದು 11:30ರ ಸುಮಾರಿಗೆ ಕರೆ ಮಾಡಿ ವಿಶ್ವನಾಥ್ ಜೀ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಗಗನ್ ಕಡೂರ್‌ ಮಾತಿನಿಂದ ಅನುಮಾನಗೊಂಡು, ವಿಶ್ವನಾಥ್ ಜಿ ರವರ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ತನ್ನ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬುವವರನ್ನು ಗೋವಿಂದ ಬಾಬು ಪೂಜಾರಿ  ವಿಚಾರಿಸಿದಾಗ ವಿಶ್ವನಾಥ್ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಇದರಿಂದ ಅನುಮಾನ ಬಲಗೊಂಡು ಕೂಡಲೇ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ನಿಜ ಏನೆಂದು ಹೇಳಬೇಕೆಂದು 24.04.2023ರಂದು ಬೊಮ್ಮನಹಳ್ಳಿಯಲ್ಲಿರುವ ಗೋವಿಂದ ಬಾಬು ಪೂಜಾರಿ  ಕಚೇರಿಗೆ ಕರೆಸಿಕೊಂಡು ಚರ್ಚಿಸಿದಾಗ ಈ ಇಬ್ಬರೂ ತಾವು ಪಡೆದ ಸಂಪೂರ್ಣ ಮೊತ್ತರೂ.3,50,00,000 ವಿಶ್ವನಾಥ ಜಿ ಬಳಿ ಇದ್ದು, ಅವರಿಗೆ ವಿಧಿವಶರಾಗಿದ್ದಾರೆ ಎಂದು ಹೇಳಿಕೊಂಡರು. ಆ ವೇಳೆ, ‘ಎಲ್ಲ ನಾಟಕ ಗೋವಿಂದ ಬಾಬು ಪೂಜಾರಿ  ಅವರಿಗೆ ಗೊತ್ತಾಗಿದೆ, ಹಣವನ್ನು ವಾಪಸ್ ಪಡೆಯಲು ಪೊಲೀಸರ ಮೊರೆಹೋಗಬೇಕೆ’ ಎಂದು ಗೋವಿಂದ ಬಾಬು ಪೂಜಾರಿ  ಹೇಳಿದಾಗ, ವಿಷದ ಬಾಟಲಿ ತೋರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡಿ, ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿ ಮರಳಿದ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ರವರು ಅನಂತರ ಗೋವಿಂದ ಬಾಬು ಪೂಜಾರಿ  ಫೋನ್ ಕರೆ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು.

ದಿನಾಂಕ 25.04.2023 ರಂದು ಗೋವಿಂದ ಬಾಬು ಪೂಜಾರಿ ಅಭಿನವ ಹಾಲಶ್ರೀ ಸ್ವಾಮೀಜಿ ರವರ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸದ ಬಳಿ ಹೋಗಿ ಕೇಳಿದಾಗ ಆ ವೇಳೆ ಸ್ವಾಮೀಜಿಯವರು, ತಮಗೆ ವಿಶ್ವನಾಥ್ ಜೀ ಯಾರೆಂದು ಸರಿಯಾಗಿ ಗೊತ್ತಿಲ್ಲ ‘ನಾನು ಪಡೆದಿರುವ 1.5 ಕೋಟಿ ರೂಪಾಯಿ ಹಣವನ್ನು ಒಂದು ತಿಂಗಳೊಳಗೆ ವಾಪಸ್ ನೀಡುತ್ತೇನೆ, ಈ ವಿಚಾರದಲ್ಲಿ ತಮ್ಮನ್ನು ಬಿಟ್ಟು ಬಿಡಿ’ ಎಂದು ಹೇಳಿದ್ದಾರೆ.

ಇದೇ ವೇಳೆ, 3.5 ಕೋಟಿ ರೂ ವಿಶ್ವನಾಥ್ ಜಿ ಬಳಿ ಇದೆ ಎಂದು ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್ ಹೇಳಿದ್ದರಿಂದ ಗೋವಿಂದ ಬಾಬು ಪೂಜಾರಿ  ವಿಶ್ವನಾಥ್ ಜಿ ಬಗ್ಗೆ ಹುಡುಕಾಡಲು ಪ್ರಾರಂಭಿಸಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರಾಗಿರುವ ಚಿಕ್ಕಮಗಳೂರಿನ ಮಂಜು ಎಂಬವರ ಬಳಿ ಈ ವಿಷಯವನ್ನು ಹೇಳಿಕೊಂಡಾಗ, ಮಂಜು ರವರು ತಾವು ಕೆಲ ದಿನಗಳ ಹಿಂದೆ ಸಲೂನ್’ಗೆ ಭೇಟಿ ನೀಡಿದಾಗ ನಡೆದ ಸನ್ನಿವೇಶವನ್ನು ನೆನಪಿಸಿಕೊಂಡು ಆ ಸನ್ನಿವೇಶಕ್ಕೂ, ಈ ವಿಚಾರಕ್ಕೂ ಸಾಮ್ಯತೆ ಇರುವುದಾಗಿ ಹೇಳಿದರು. ಕಡೂರಿನ ಸಲೂನ್‌’ಗೆ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು RSS ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು. ಸದರಿ ಸಲೂನ್‌’ಗೆ ತೆರಳಿ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ RSS ಪ್ರಚಾರಕ ವಿಶ್ವನಾಥ್ ಜಿ ಹೆಸರಲ್ಲಿ ನಟಿಸಿರುವ ಸಂಗತಿ ಗೋವಿಂದ ಬಾಬು ಪೂಜಾರಿ  ತಿಳಿದು ಬಂದಿದೆ.

RSS ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ಗಗನ್ ಕಡೂರ್ ಮನೆಯಲ್ಲಿ ತರಬೇತಿ ನೀಡಿ ರೂ.1,20,000/- ಕೊಟ್ಟಿದ್ದಾರೆ ಎಂದು ಆತ ತಿಳಿಸಿದ್ದು, ಈ ನಾಟಕವಾಡುವಾಗ ಆರೆಸ್ಸೆಸ್ ವಾಹನವಾಗಿ ಬಳಸಲು ತನಗೂ ರೂ. 2,50,000/- ನೀಡಿದ್ದಾರೆ ಎಂದು ಧನರಾಜ್ ಹೇಳಿಕೊಂಡಿದ್ದಾರೆ. ಇದೇ ವೇಳೆ, ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ‘ನಾಯ್’ ಎಂಬ ವ್ಯಕ್ತಿಯ ಬಗ್ಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್.ಪುರಂನಲಿ, ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಯಿತು. ನಾಯ್ ರನ್ನು ಭೇಟಿಯಾಗಿ ಕೇಳಿದಾಗ, ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93,000/-ರೂಪಾಯಿ ಪಾವತಿಸಿದ್ದು, ಈ ಹಿನ್ನೆಲೆಯಲ್ಲಿ ತಾನು ಈ ರೀತಿ ನಟಿಸಿರುವುದಾಗಿ ನಾಯ್ ಹೇಳಿಕೊಂಡಿದ್ದಾರೆ.

ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರಾ ಕುಂದಾಪುರ ರವರು ಬೆದರಿಸಿದ್ದಾರೆ ಎಂದು ಹೇಳಿಕೊಂಡಿರುವ ಇವರು, “ನೀವು ಒಂದು ವೇಳೆ ಹಣ ವಾಪಸ್ ಕೇಳಲು ಮುಂದಾದರ ಜಡ್ಜ್ ಗಳಿಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರಿಸುತ್ತಾರಂತೆ, ಅಥವಾ ಭೂಗತ ಪಾತಕಿಗಳ ಸಂಪರ್ಕ ಇದ್ದು ನಿಮ್ಮನ್ನು ಮುಗಿಸಲು ತಯಾರಿ ನಡೆಸಿದ್ದಾರೆ” ಎಂದು ಗೋವಿಂದ ಬಾಬು ಪೂಜಾರಿ  ಮುಂದೆ ಹೇಳಿಕೊಂಡಿದ್ದಾರೆ.

ಈ ಎಲ್ಲಾ ಸನ್ನಿವೇಶದಲ್ಲಿ, ಚೈತ್ರಾ ಕುಂದಾಪುರ, ಗಗನ್ ಕಡೂರ್‌ ಮತ್ತು ಶ್ರೀಕಾಂತ್ ಅವರು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ನಾಯ್ ಮತ್ತು RSSನ ಹಿರಿಯ ಪ್ರಚಾರಕರಾಗಿ ವಿಶ್ವನಾಥ್ ಜೀ ಎಂಬ ಹೆಸರಿನಲಿ, (ರಮೇಶ್ ಚಿಕ್ಕಮಗಳೂರು) ಮತ್ತು ಕೇಂದ್ರ ನಾಯಕರಾಗಿ ಅನುಕರಿಸಲು ಧನರಾಜ್ ಅವರ ಪಾತ್ರವನ್ನು ಸೃಷ್ಟಿಸಿ ವಂಚಿಸಿ ಮತ್ತು ಚೈತ್ರಾ, ಕುಂದಾಪುರ ಮತ್ತು ಗಗನ್ ಕಡೂರ್ ರವರು ತಮಗೆ ಪ್ರಧಾನಿ ಕಚೇರಿ ಪ್ರಮುಖ, ಬಿಜೆಪಿ ನಾಯಕರ, ಸುಪ್ರೀಂ ಕೋರ್ಟ್ ಜಡ್ಜ್ ಗಳ ಅಭಯ ಇದೆ ಎಂದು ಬಿಂಬಿಸಿ ಪಿರ್ಯಾದುದಾರರಿಗೆ ಸುಮಾರು 3,50,00,000 ರೂಪಾಯಿಗಳನ್ನು ಹಾಗೂ ಹಾಲ ಸ್ವಾಮೀಜಿ ಅವರು ಪ್ರಧಾನಿ ಕಚೇರಿಯ ಪ್ರಭಾವ ಇದೆ ಎಂದು ಬಿಂಬಿಸಿ 1,50,00,000 ರೂಪಾಯಿಗಳನ್ನು ನಂಬಿಸಿ ವಂಚಿಸಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆಯೇ ಗೋವಿಂದ ಬಾಬು ಪೂಜಾರಿ  ಪೊಲೀಸರಿಗೆ ದೂರು ನೀಡಿದ್ದರು.

ಇತ್ತೀಚಿನ ಸುದ್ದಿ