ಇಡಿ ಸಮನ್ಸ್ ಗೆ ಡೊಂಟ್ ಕೇರ್: ‘ನಾನು ಜೈಲಿಗೆ ಹೋಗುತ್ತೇನೋ ಇಲ್ವೋ ಗೊತ್ತಿಲ್ಲ” ಎಂದ ಅರವಿಂದ್ ಕೇಜ್ರಿವಾಲ್..!

02/11/2023
ಇಡಿ ನೀಡಿರುವ ಸಮನ್ಸ್ ಅನ್ನು ಧಿಕ್ಕರಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಧ್ಯಪ್ರದೇಶದ ಸಿಂಗ್ರೌಲಿ ನಗರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಿ ಸವಾಲೆಸೆದರು.
ವಿಧಾನಸಭಾ ಚುನಾವಣಾ ಅಭ್ಯರ್ಥಿ ಮತ್ತು ಎಎಪಿಯ ರಾಜ್ಯಾಧ್ಯಕ್ಷೆ ರಾಣಿ ಅಗರವಾಲ್ ಅವರ ಪರವಾಗಿ ರೋಡ್ಶೋನಲ್ಲಿ ಪಾಲ್ಗೊಂಡ ಅವರು, ಚುನಾವಣಾ ಫಲಿತಾಂಶ ಬಂದ ದಿನ ನಾನು ಜೈಲಿನಲ್ಲಿರುತ್ತೇನೋ ಅಥವಾ ಹೊರಗೆ ಇರುತ್ತೇನೋ ಗೊತ್ತಿಲ್ಲ. ಆದರೆ ಇಲ್ಲಿನ ಜನರು ಐತಿಹಾಸಿಕ ವಿಜಯವನ್ನು ನೀಡಿ ನಾನು ಇಲ್ಲಿಗೆ ಬಂದದ್ದನ್ನು ನೆನಪಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡಾ ಉಪಸ್ಥಿತರಿದ್ದರು. ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇಡಿ ಮುಂದೆ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್, ಇದು ರಾಜಕೀಯ ಪ್ರೇರಿತ ಮತ್ತು ಕಾನೂನು ಬಾಹಿರವಾಗಿದೆ. ಹೀಗಾಗಿ ನೀಡಿರುವ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಿ ಅವರು ಏಜೆನ್ಸಿಗೆ ಪತ್ರ ಬರೆದಿದ್ದಾರೆ.