ಸೋಲಿನ ಹತಾಶೆ ಸಂಸತ್ ನಲ್ಲಿ ತೋರಿಸಬೇಡಿ: ವಿಪಕ್ಷಗಳ ಕಾಲೆಳೆದ ಪ್ರಧಾನಿ ಮೋದಿ

04/12/2023
ನವದೆಹಲಿ: ವಿಧಾನ ಸಭಾ ಚುನಾವಣೆಯಲ್ಲಿನ ಸೋಲಿನ ಹತಾಶೆಯನ್ನು ಸಂಸತ್ತಿನಲ್ಲಿ ತೋರಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಕಾಲೆಳೆದಿದ್ದಾರೆ.
ಸಂಸತ್ ಭವನದ ಹೊರಗಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ಸೋಲಿನ ಹತಾಶೆಯನ್ನು ತೋರಿಸಿಕೊಳ್ಳುವ ಆಲೋಚನೆಯನ್ನು ಮಾಡುವ ಬದಲು ಸೋಲಿನಿಂದ ಪಾಠ ಕಲಿಯಬೇಕು ಎಂದು ಸಲಹೆ ನೀಡಿದರು.
ಈ ಅಧಿವೇಶನವು ವಿರೋಧ ಪಕ್ಷಗಳ ಪಾಲಿಗೆ ಸುವರ್ಣಾವಕಾಶ, ನಕಾರಾತ್ಮಕತೆಯನ್ನು ದೇಶವು ತಿರಸ್ಕರಿಸಿದೆ. ಅಧಿವೇಶನದ ಆರಂಭದಲ್ಲಿ ನಾವು ವಿಪಕ್ಷ ಸ್ನೇಹಿತರೊಂದಿಗೆ ಯಾವಾಗಲು ಮಾತಕತೆ ನಡೆಸುತ್ತೇವೆ, ಎಲ್ಲರ ಸಹಕಾರ ಕೋರುತ್ತೇವೆ, ಈ ಬಾರಿಯೂ ಆ ಕೆಲಸ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಸೋಲಿನ ಹತಾಶೆಯನ್ನು ತೋರಿಸುವ ಬದಲು ಸೋಲಿನಿಂದ ಪಾಠ ಕಲಿಯಬೇಕು, ಧನಾತ್ಮಕ ಭಾವನೆಯಿಂದ ಮುಂದೆ ಸಾಗಿದರೆ ದೇಶವು ಅವರ ಬಗ್ಗೆ ಹೊಂದಿರುವ ಧೋರಣೆಯನ್ನು ಬದಲಿಸಿಕೊಳ್ಳುತ್ತದೆ. ಅವರು ವಿರೋಧ ಪಕ್ಷದಲ್ಲಿದ್ದರೂ ನಾನು ಅವರಿಗೆ ಒಳ್ಳೆಯ ಸಲಹೆ ನೀಡುತ್ತೇನೆ ಎಂದು ಪ್ರಧಾನಿ ಹೇಳಿದರು.