ಸತೀಶ್ ಕಕ್ಕೆಪದವು ಅವರಿಗೆ ಪ್ರಶಸ್ತಿಗಳ ಗರಿ: ಸಾಹಿತ್ಯ ಮತ್ತು ಕಲಾ ಕ್ಷೇತ್ರದ ಸಾಧನೆಗೆ ಗೌರವ
ಬಂಟ್ವಾಳ: ಬಹುಮುಖ ಪ್ರತಿಭೆಯ ಕಲಾವಿದ, ಸಾಹಿತಿ ಮತ್ತು ಸಂಘಟಕರಾದ ಸತೀಶ್ ಕಕ್ಕೆಪದವು ಅವರಿಗೆ ಸಾಹಿತ್ಯ ಮತ್ತು ಕಲಾ ಸೇವೆಯನ್ನು ಪರಿಗಣಿಸಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
‘ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ – 2025’ ಪ್ರದಾನ
ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ‘ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ – 2025’ ಅನ್ನು ಸತೀಶ್ ಕಕ್ಕೆಪದವು ಅವರಿಗೆ ನೀಡಿ ಗೌರವಿಸಲಾಯಿತು. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು, ‘ಜೋಸ್ತಿ ಮಲ್ತೊಡ್ತಿ ಜಾಸ್ತಿ’, ‘ಕರ್ಗದ ಕೊಡಿ’ಯಂತಹ ತುಳು ನಾಟಕಗಳು ಮತ್ತು ‘ಬದುಕೋಣ ಬನ್ನಿ’, ‘ಪರಿವರ್ತನಾ’, ‘ಬರಗಾಲ’ ಕನ್ನಡ ನಾಟಕಗಳ ಮೂಲಕ ಗಮನ ಸೆಳೆದಿದ್ದಾರೆ. ಜೊತೆಗೆ ಯಕ್ಷಗಾನ ಕಲಾವಿದರಾಗಿ, ರಂಗ ಶಿಕ್ಷಕರಾಗಿ ಹಾಗೂ ವರದಿಗಾರರಾಗಿ ಇವರು ಸಲ್ಲಿಸಿದ್ದಾರೆ, ಇವರು ಸಣ್ಣ ಕಥೆ ರಚನೆಯ ಮೂಲಕ ಜಿಲ್ಲಾ ಮಟ್ಟದ ಪ್ರಶಸ್ತಿ, ಸ್ವರಚಿತ ಕವನಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರ ಅಪಾರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ರಾಷ್ಟ್ರ ಮಟ್ಟದ ‘ಕವಿ ವಿಭೂಷಣ ಪ್ರಶಸ್ತಿ’ಗೆ ಭಾಜನ
ನಗರಮುನ್ನೋಳ್ಳಿಯ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ವತಿಯಿಂದ ಸ್ವಾಮಿ ವಿವೇಕಾನಂದರ 163ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸತೀಶ್ ಕಕ್ಕೆಪದವು ಅವರಿಗೆ ರಾಷ್ಟ್ರ ಮಟ್ಟದ ‘ಕವಿ ವಿಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಕನ್ನಡ ನಾಡು–ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಅವರು ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ನಿವಾಸಿಯಾಗಿರುವ ಇವರು, ವಿವಿಧ ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇವರ ಈ ಸಾಧನೆಗೆ ನಾಡಿನಾದ್ಯಂತ ಗಣ್ಯರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























