ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರಿಂದ ಧರಣಿ

ಚಾಮರಾಜನಗರ: ಸೂರ್ಯಕಾಂತಿ ಧೋರಣೆಯಲ್ಲಿ ಕುಸಿತ ಕಂಡು ರೈತರು ಕೈ ಸುಟ್ಟುಕೊಳ್ಳುತ್ತಿರುವುದರಿಂದ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ಗುಂಡ್ಲುಪೇಟೆಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ.
ರೈತ ಸಂಘ ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟದ ವತಿಯಿಂದ ಗುಂಡ್ಲುಪೇಟೆ ಎಪಿಎಂಸಿ ಆವರಣದಲ್ಲಿ ರೈತರು ಧರಣಿ ನಡೆಸುತ್ತಿದ್ದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್ ನಲ್ಲಿ ಸೂರ್ಯಕಾಂತಿ ಬೆಳೆದಿದ್ದು, ಬೆಲೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ. ಮಳೆ ಕೊರತೆಯಿಂದ ಇಳುವರಿ ಕಡಿಮೆಯಾದ ಹಿನ್ನೆಲೆ ಹಾಕಿದ ಬಂಡವಾಳವೂ ಕೈಸೇರಿಲ್ಲ. ಸೂರ್ಯಕಾಂತಿಗೆ ಎಂಎಸ್ಪಿ ಅಡಿ 6760 ರೂ. ನಿಗಧಿ ಮಾಡಿತ್ತು. ಆದರೆ ದಲ್ಲಾಳಿಗಳಿಗೆ ರೈತರು 4500 ರೂ.ಗೆ ಮಾರಾಟ ಮಾಡುವ ಮೂಲಕ ಸಾಲದ ಸುಳಿಗೆ ಸಿಲುಕುವಂತಾಯಿತು. ಈ ಮಧ್ಯೆ ಸೂರ್ಯಕಾಂತಿ ಬೆಲೆ ಕುಸಿದಿದ್ದರೂ ಸಹ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಬೆಂಬಲ ಅಡಿಯಲ್ಲಿ ಬೆಳೆ ಖರೀದಿಸದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಜೂನ್ನಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ನೆರವಾಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖರೀದಿ ಕೇಂದ್ರ ಆರಂಭವಾಗದೆ ಹೆಚ್ಚಿನ ನಷ್ಟವಾಗಿದೆ. ಈಗಾಗಲೇ ಶೇ.85ರಷ್ಟು ಫಸಲು ಮಾರಾಟ ಮಾಡಲಾಗಿದ್ದು, ಕೆಲವು ಪ್ರದೇಶದಲ್ಲಿ ಅಲ್ಪ ಪ್ರಮಾಣದ ಬೆಳೆ ಮಾತ್ರ ಬಾಕಿ ಉಳಿದಿದೆ. ಹೀಗಿದ್ದರು ಕೂಡ ಖರೀದಿ ಕೇಂದ್ರ ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.