ಗ್ರೇಟರ್ ಬೆಂಗಳೂರು ಅಲ್ಲ, ವಾಟರ್ ಬೆಂಗಳೂರು: ಹಿಡಿ ಶಾಪ ಹಾಕುತ್ತಿದ್ದಾರೆ ಜನ! - Mahanayaka

ಗ್ರೇಟರ್ ಬೆಂಗಳೂರು ಅಲ್ಲ, ವಾಟರ್ ಬೆಂಗಳೂರು: ಹಿಡಿ ಶಾಪ ಹಾಕುತ್ತಿದ್ದಾರೆ ಜನ!

bengaluru rain
19/05/2025

ಬೆಂಗಳೂರು: ಧಾರಾಕಾರ ಮಳೆಗೆ ಬೆಂಗಳೂರು ತತ್ತರಿಸಿದೆ. ಇದು ಗ್ರೇಟರ್ ಬೆಂಗಳೂರು ಅಲ್ಲ, ವಾಟರ್ ಬೆಂಗಳೂರು ಅಂತ ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಗುತ್ತಿಗೆ ಕಾಮಗಾರಿ ಕಂಪೆನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.  ವರದಿಗಳ ಪ್ರಕಾರ, ನಗರದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ವರೆಗೆ ಸರಾಸರಿ 66 ಮಿ.ಮೀ ಮಳೆಯಾಗಿದೆ. ಕೆಂಗೇರಿಯಲ್ಲಿ ಅತಿ ಹೆಚ್ಚು 132 ಮಿ.ಮೀ ಮಳೆಯಾದರೆ, ಗೊಟ್ಟಿಗೆರೆಯಲ್ಲಿಅತೀ ಕಡಿಮೆ 32 ಮಿ.ಮೀ. ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹದೇವಪುರ ವಲಯ: ಮಹದೇವಪುರ ವಲಯದಲ್ಲಿ ಸುಮಾರು 10 ಕಡೆ ಜಲಾವೃತವಾಗಿದ್ದು, ಪ್ರಮುಖವಾಗಿ ಸಾಯಿ ಲೇಔಟ್ ಪ್ರದೇಶವು ಸಂಪೂರ್ಣ ಜಲಾವೃತವಾಗಿದೆ. ಜನರ ಸ್ಥಳಾಂತರಕ್ಕೆ 6 ಟ್ರ್ಯಾಕ್ಟರ್, 2 ಜೆಸಿಬಿ, 35 ಸಿಬ್ಬಂದಿ, 3 ಅಗ್ನಿ ಶಾಮಕ ವಾಹನ, ಎಸ್.ಡಿ.ಆರ್.ಎಫ್ ತಂಡದಿಂದ 2 ಬೋಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸ್ಥಳೀಯ ನಿವಾಸಿಗಳಿಗೆ ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.  ಮಾರತ್ತಹಳ್ಳಿಯ ದೀಪ ನರ್ಸಿಂಗ್ ಹೋಮ್, ಚಿನ್ನಪ್ಪನಹಳ್ಳಿ 5ನೇ ಕ್ರಾಸ್, ಪಣತ್ತೂರ್ ರೈಲ್ವೆ ಕೆಳ ಸೇತುವೆ, ಗ್ರೀನ್ ಹುಡ್, ಇಬ್ಬಲೂರು ಜಂಕ್ಷನ್, ಬಾಲಾಜಿ ಲೇಔಟ್ – ಕೊತ್ತನೂರು, ಎ.ನಾರಾಯಣಪುರದ ಕೃಷ್ಣ ನಗರ, ಸುನೀಲ್ ಲೇಔಟ್, ಹರಳೂರು, ಬಿ.ಎಸ್‌.ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮಲೆ ನೀರು ಮತ್ತು ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಪಾಲಿಕೆ ಸಿಬ್ಬಂದಿ ಈಗಾಗಲೇ ಕಾರ್ಯಾಚರಣೆ ನಡೆಸಿ ಬಹುತೇಕ ಕಡೆ ಸಮಸ್ಯೆ ಬಗೆಹರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.

ಪೂರ್ವ ವಲಯ: ರಾಜಕಾಲುವೆಯಲ್ಲಿ ನೀರು ತುಂಬಿ ಹಿಮ್ಮುಖವಾಗಿ ಚಲಿಸಿರುವ ಪರಿಣಾಮ ಹೆಚ್.ಬಿ.ಆರ್ 5, 6, 7, 8ನೇ ಬ್ಲಾಕ್, ಬೈರಸಂದ್ರ ಲೇಔಟ್, ಕೆಂಪೇಗೌಡ ರಸ್ತೆ, ಕಾಮರಾಜ ನಗರ ಪ್ರದೇಶಗಳು ಜಲಾವೃತವಾಗಿರುತ್ತವೆ. ನೀರು ಹೊರ ಹಾಕಲು ನಿರ್ವಹಣಾ ತಂಡಗಳು, 6 ಶಿಲ್ಟ್ & ಟ್ರ್ಯಾಕ್ಟರ್​ಗಳ ತಂಡಗಳು, 2 ಜೆಸಿಬಿಗಳು ಹಾಗೂ 10 ಪಂಪ್​ಗಳ ವ್ಯವಸ್ಥೆ ಮಾಡಿ ನೀರನ್ನು ಹೊರಹಾಕುವ ಕೆಲಸ ಮಾಡಲಾಗಿದೆ.  ಬೊಮ್ಮನಹಳ್ಳಿ ವಲಯ: ಹೆಚ್.ಎಸ್.ಆರ್ ಲೇಔಟ್ 6 ಮತ್ತು 7ನೇ ಸೆಕ್ಟರ್ ಮತ್ತು ಬನ್ನೇರುಘಟಟ್ಟ ಬಿಳೇಕಲ್ಲಹಳ್ಳಿ ಸಿಗ್ನಲ್​ನ ರಸ್ತೆಯಲ್ಲಿ ನೀರು ನಿಂತಿರುವುದು, ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿರುವುದನ್ನು ನಿರ್ವಹಣಾ ತಂಡ ಹಾಗೂ ಪಂಪ್‌ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ದಕ್ಷಿಣ ವಲಯ: ಕೆ–100, ಕೆ–200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲೀಕರಣ ಕಡಿಮೆ ಇರುವ ಪರಿಣಾಮ ನಿರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳ ಡಾಲರ್ಸ್ ಕಾಲೋನಿ, ಕೋರಮಂಗಲದ 6ನೇ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿರುತ್ತದೆ. ಈ ಸಂಬಂಧ ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆ.ಸಿ.ಬಿ ಮೂಲಕ ಬಂಡ್ ತೆರವುಗೊಳಿಸಲಾಗಿದೆ. ಇನ್ನೂ ವೃಷಭಾವತಿ ವ್ಯಾಲಿ, ಗಾಳಿ ಆಂಜನೇಯ ದೇವಸ್ಥಾನದ ಬಳಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.


Provided by

ಯಲಹಂಕ ವಲಯ: ಚೌಡೇಶ್ವರಿ ನಗರದ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು 15 ಮನೆಗಳಿಗೆ, ಡಿಫೆನ್ಸ್ ಲೇಔಟ್ ಹಾಗೂ ದ್ವಾರಕಾ ನಗರದಲ್ಲಿ ಸುಮಾರು 5 ಮನೆಗಳಿಗೆ ನೀರು ನುಗ್ಗಿದ್ದು, ಈ ಸ್ಥಳಗಳಲ್ಲಿ ಪಂಪ್ ​ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗಿದೆ. ರಾಜರಾಜೇಶ್ವರಿ ನಗರ ವಲಯ: ಐಡಿಯಲ್ಸ್ ಹೋಮ್ಸ್ 1ನೇ ಎ ಕ್ರಾಸ್ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ 3 ಹಸು, 1 ಕರು ಹಾಗೂ 1 ಎಮ್ಮೆ ಸೇರಿ 5 ಜಾನುವಾರಗಳು ಮೃತಪಟ್ಟಿರುತ್ತವೆ. ಅಲ್ಲದೇ ಸುಮಾರು 12 ಮನೆಗಳಿಗೆ ನೀರು ನುಗ್ಗಿದ್ದು, ಸೈಡ್ ಡೈನ್​ ಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ವಿಜಯಶ್ರೀ ಬಡಾವಣೆ ಹೆಮ್ಮಿಗೆಪುರ ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಜಲಾವೃತವಾಗಿದ್ದು, ಪಾಲಿಕೆಯ ತಂಡ ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಂಗೇರಿ ಬಳಿಯ ಕೋಟೆ ಲೇಔಟ್​ನಲ್ಲಿ ಸುಮಾರು 100 ಮನೆಗಳಿಗೆ ನಿರು ನುಗ್ಗಿದ್ದು, 4 ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  ದಾಸರಹಳ್ಳಿ ವಲಯ: ಕೆ.ಜಿ ಹಳ್ಳಿ, ಡಿಫೆನ್ಸ್ ಕಾಲೋನಿ, ಮೇಡರಹಳ್ಳಿಯ ಶ್ರೀದೇವಿ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ರುಕ್ಮಿಣಿ ನಗರ, ವಿದ್ಯಾನಗರ, ಬಿ.ಟಿ.ಎಸ್ ಲೇಔಟ್​ಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗಿದೆ. ಅದೇ ರೀತಿ ಪಶ್ಚಿಮ ವಲಯ ವ್ಯಾಪ್ತಿಯ ಕೆ.ಪಿ ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ 20 ಮನೆಗಳಿಗೆ ನೀರು ನುಗ್ಗಿದ್ದು, ಸದರಿ ಪ್ರದೇಶದಲ್ಲಿ 4 ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ ಅಧಿಕಾರಿಗಳು ತಿಳಿಸಿದ್ಧಾರೆ.

ಟ್ರ್ಯಾಕ್ಟರ್ ಮೂಲಕ ಬಿಬಿಎಂಪಿ ಅಧಿಕಾರಿಗಳ ಭೇಟಿ: ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಮಹದೇವಪುರ ವಲಯದ ಸಾಯಿಲೇಔಟ್​ಗೆ ಆಡಳಿತಾರರಾದ ತುಷಾರ್ ಗಿರಿ ನಾಥ್ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಇಂದು ವಿವಿಧ ಸ್ಥಳಗಳಿಗೆ ಟ್ರ್ಯಾಕ್ಟರ್ ಮೂಲಕ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ಸಾಯಿಲೇಔಟ್ ಹಾಗೂ ಪಕ್ಕದಲ್ಲಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗಿದೆ. ಗೆದ್ದಲಹಳ್ಳಿ ಬಳಿ ರೈಲ್ವೆ ವೆಂಟ್ ಅಗಲೀಕರಣ ಮಾಡಬೇಕಿದ್ದು, ಅದಕ್ಕೆ ಈಗಾಗಲೇ ಕಾರ್ಯಾದೇಶ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. ಹೆಬ್ಬಾಳ ವ್ಯಾಲಿ, ನಾಗವಾರ ಸೇರಿದಂತೆ ಇನ್ನಿತರೆ ಪ್ರದೇಶಗಳಿಂದ ಗೆದ್ದಲಹಳ್ಳಿ ಮೂಲಕ ಹಾದುಹೋಗುವ ರಾಜಕಾಲುವೆಯಲ್ಲಿಯೇ ಮಳೆ ನೀರು ಹೋಗುತ್ತಿದ್ದು, ಸಾಯಿ ಲೇಔಟ್ ಪ್ರದೇಶ ಕೆಳಮಟ್ಟದಲ್ಲಿರುವ ಪರಿಣಾಮ ಜಲಾವೃತವಾಗುತ್ತಿದೆ. ಈ ಜಾಗದಲ್ಲಿ ಬಿಟ್ಟು ಬೇರೆ ಜಾಗಗಳಲ್ಲಿ ಜಲಾವೃತವಾಗುತ್ತಿಲ್ಲ ಎಂದು ಹೇಳಿದರು.  ಬಿಡಿಎ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಖಾಸಗಿ ವ್ಯಕ್ತಿ ಕೋರ್ಟ್​​ಗೆ ಹೋಗಿರುವ ಪರಿಣಾಮ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜಲಾವೃತವಾಗಿರುವ ಪ್ರದೇಶದಲ್ಲಿ ನಿವಾಸಿಗಳಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಸತಿ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯ ಆಯುಕ್ತರಿಂದ ಬೆಳ್ಳಂದೂರು ಪರಿಶೀಲನೆ: ಬೆಳ್ಳಂದೂರು ಕೆರೆಯ ಇನ್ಲೆಟ್ ಜಂಕ್ಷನ್ ಬಳಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ-100, ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲೀಕರಣ ಕಡಿಮೆ ಇರುವ ಪರಿಣಾಮ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳದ ಡಾಲರ್ಸ್ ಕಾಲೋನಿ, ಕೋರಮಂಗಲದ 6ನೇ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿರುತ್ತದೆ. ಈ ಸಂಬಂಧ ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಕೂಡಲೆ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ