ಹಿಮಾಚಲ ಮೇಘಸ್ಫೋಟ: ಕಾಣೆಯಾದ 45 ಜನರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಚುರುಕು

ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದ ನಂತರ ಕಾಣೆಯಾದ 45 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪತ್ತೆಹಚ್ಚಲು ರಕ್ಷಣಾ ಪ್ರಯತ್ನಗಳು ಶುಕ್ರವಾರವೂ ಮುಂದುವರೆದಿವೆ. ಈ ಮಧ್ಯೆ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಸಿಲುಕಿದ್ದ 29 ಜನರನ್ನು ರಾತ್ರೋರಾತ್ರಿ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಲುವಿನ ನಿರ್ಮಾಂಡ್, ಸೈಂಜ್ ಮತ್ತು ಮಲಾನಾ ಪ್ರದೇಶಗಳಲ್ಲಿ ಮತ್ತು ಶಿಮ್ಲಾ ಜಿಲ್ಲೆಯ ಮಂಡಿ ಮತ್ತು ರಾಂಪುರದ ಪಧರ್ ಪ್ರದೇಶಗಳಲ್ಲಿ ಬುಧವಾರ ಮೇಘಸ್ಫೋಟದಿಂದಾಗಿ ಐದು ಸಾವುಗಳು ಸಂಭವಿಸಿದ್ದು 45 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
ಕುಲ್ಲು ಜಿಲ್ಲೆಯ ಮಣಿಕರಣ್ ಪ್ರದೇಶದ ಮಲಾನಾ 2 ವಿದ್ಯುತ್ ಯೋಜನೆಯಲ್ಲಿ ಕನಿಷ್ಠ 33 ಜನರು ಸಿಕ್ಕಿಬಿದ್ದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅವರಲ್ಲಿ 29 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕುಲ್ಲು ಜಿಲ್ಲಾಧಿಕಾರಿ ತೊರುಲ್ ಎಸ್ ರವೀಶ್ ಮಾಹಿತಿ ನೀಡಿದ್ದಾರೆ.
ಇನ್ನು ಭಾರೀ ಮಳೆಯಿಂದಾಗಿ ಗೋಡೆ ಮತ್ತು ಸುರಂಗಕ್ಕೆ ಪ್ರವೇಶಕ್ಕೆ ಹಾನಿಯಾಗಿದ್ದು, ಬ್ಯಾರೇಜ್ ಗೆ ನೀರು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಈ ಸವಾಲುಗಳ ಹೊರತಾಗಿಯೂ, ಎನ್ಡಿಆರ್ಎಫ್ ಮತ್ತು ಹೋಮ್ ಗಾರ್ಡ್ ತಂಡಗಳು 29 ಜನರನ್ನು ಯಶಸ್ವಿಯಾಗಿ ರಕ್ಷಿಸಿವೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ಎನ್ ಡಿಆರ್ ಎಫ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಪೊಲೀಸರು ಮತ್ತು ಹೋಮ್ ಗಾರ್ಡ್ಗಳು ಸೇರಿದ್ದಾರೆ, ಇನ್ನೂ ಕಾಣೆಯಾದವರನ್ನು ಪತ್ತೆಹಚ್ಚಲು ಡ್ರೋನ್ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth