ರಾಜ್ಯಪಾಲರು ಸರ್ಕಾರದ ಪ್ರತಿದಿನದ ತೀರ್ಮಾನಗಳ ಬಗ್ಗೆ ಮಾಹಿತಿ ಕೇಳಿದ ಉದಾಹರಣೆಗಳೇ ಇಲ್ಲ: ಗೃಹ ಸಚಿವ ಪರಮೇಶ್ವರ ಹೇಳಿಕೆ - Mahanayaka

ರಾಜ್ಯಪಾಲರು ಸರ್ಕಾರದ ಪ್ರತಿದಿನದ ತೀರ್ಮಾನಗಳ ಬಗ್ಗೆ ಮಾಹಿತಿ ಕೇಳಿದ ಉದಾಹರಣೆಗಳೇ ಇಲ್ಲ: ಗೃಹ ಸಚಿವ ಪರಮೇಶ್ವರ ಹೇಳಿಕೆ

g parameshwar
23/09/2024

ಬೆಂಗಳೂರು:  ರಾಜ್ಯಪಾಲರದ್ದು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಸ್ಥಾನ. ಪ್ರಥಮಬಾರಿಗೆ ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ದಿನನಿತ್ಯ ಆಡಳಿತ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಇದೆ. ಆದರೆ, ಪ್ರಥಮಬಾರಿಗೆ ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ‌ ಎಂದರು.

35 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಲ್ಲಿಯವರೆಗೆ ಅನೇಕ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ನಾವೆಲ್ಲ ನೋಡಿದ್ದೇವೆ. ಇಂತಹ ಸಂದರ್ಭ ಯಾವತ್ತು ಬಂದಿಲ್ಲ. ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಕೆಲಸಗಳು ಮತ್ತು ತೀರ್ಮಾನಗಳ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದ್ದ ಉದಾಹರಣೆಗಳೇ ಇಲ್ಲ ಎಂದು ಹೇಳಿದರು.


Provided by

ಯಾವಾಗಲಾದರೂ ಒಮ್ಮೆ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರ ಇದ್ದರೆ ಗೃಹ ಸಚಿವರು ಹೋಗಿ ರಾಜ್ಯಪಾಲರಿಗೆ ವಿವರಿಸುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವುದಕ್ಕೆ ರಾಜ್ಯಪಾಲರಿಗೆ ಹಕ್ಕು ಇದೆ. ಆದರೆ, ದಿನನಿತ್ಯ ಪತ್ರ ಬರೆದು, ಪತ್ರದ ಮುಖಾಂತರ ಮಾಹಿತಿ ಕೊಡಿ ಅಂತ ಕೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.

ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಒಳ್ಳೆಯ ಸಂಬಂಧವಿರಬೇಕು. ಆಂದಾಗ ರಾಜ್ಯದ ಮತ್ತು ಜನಗಳ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಏನು ತೀರ್ಮಾನ ತಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಎಲ್ಲದಕ್ಕು ಉತ್ತರಿಸುವ ಅನಿವಾರ್ಯತೆ ಇಲ್ಲ:

ರಾಜ್ಯಪಾಲರಿಗೆ ಎಲ್ಲದಕ್ಕೂ ಉತ್ತರ ಕೊಡುವ ಅನಿವಾರ್ಯತೆ ಇಲ್ಲ. ಯಾವುದಕ್ಕೆ ಉತ್ತರ‌ಕೊಡಬೇಕು ಖಂಡಿತವಾಗಿಯೂ ಕೊಡುತ್ತೇವೆ. ಯಾವುದಕ್ಕೆ ಉತ್ತರಿಸುವ ಅನಿವಾರ್ಯತೆ ಇರುವುದಿಲ್ಲ, ಉತ್ತರ ಕೊಡುವುದಿಲ್ಲ. ಎಲ್ಲದಕ್ಕು ಉತ್ತರಿಸಬೇಕು ಅಂತೇನು ಇಲ್ಲ ಎಂದು ಹೇಳಿದರು.

ರಾಜ್ಯಪಾಲರು ಯಾವ ಉದ್ದೇಶಕ್ಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರು ಏಕಾಏಕಿಯಾಗಿ ಚುನಾಯಿತ ಜನಪ್ರತಿನಿಧಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ತಪ್ಪು ಅಂತ ಹೇಳಿ ಪ್ರತಿಭಟನೆ ನಡೆಸಿದ್ದೇವೆ. ಸುಮ್ಮನೇ ಪ್ರತಿಭಟನೆ‌ ನಡೆಸಿಲ್ಲ. ತನಿಖೆ‌ಯಾಗಿಲ್ಲ, ಯಾವುದೇ ವರದಿಯು ಇಲ್ಲ. ಯಾರೋ ದೂರು ನೀಡಿದರು ಎಂದ ಮಾತ್ರಕ್ಕೆ  ಪರಿಶೀಲನೆ ನಡೆಸದೆಯೇ ಶೋಕಾಸ್ ನೋಟಿಸ್ ನೀಡಿರುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿಯವರಿಗೆ ಒಂದು ಮಾನದಂಡ, ಕುಮಾರಸ್ವಾಮಿಯವರಿಗೆ ಇನ್ನೊಂದು ಮಾನದಂಡ ಮಾಡಲಾಗುವುದಿಲ್ಲ. ಒಂದೇ ಮಾನದಂಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇವರಿಗೆ ನೋಟಿಸ್ ನೀಡಿದ್ದೀರಿ ಎಂದಾದರೆ ಅವರಿಗೂ ನೋಟಿಸ್ ನೀಡಬೇಕು. ಈ ಬಗ್ಗೆಯೂ ರಾಜ್ಯಪಾಲರನ್ನು ಪ್ರಶ್ನಿಸಿದ್ದೇವೆ ಎಂದರು.

ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ನೀಡಿರುವ ರೀತಿಯನ್ನು ಪ್ರಶ್ನಿಸಿ ಸಚಿವ ಸಂಪುಟದಲ್ಲಿ ಚರ್ಚಿಸಿದ್ದೇವೆ. ಅದರಲ್ಲೇನು ಗೌಪ್ಯತೆ ಇಲ್ಲ. ಸಂವಿಧಾನಾತ್ಮಕವಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅವಕಾಶ ಇದೆ. ಹೀಗಾಗಿ, ಶೋಕಾಸ್ ನೋಟಿಸ್ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ತಿಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು‌.

ಶಾಸಕ ಮುನಿರತ್ನ ಪ್ರಕರಣ:

ಮುನಿರತ್ನ ವಿರುದ್ಧ ದಿನಕ್ಕೊಂದು ಪ್ರಕರಣಗಳು ಹೊರಬರುತ್ತಿವೆ. ಮೇಲ್ನೋಟಕ್ಕೆ ಒಂದು ಪ್ರಕರಣ ಎಂದು ಭಾವಿಸಲಾಗಿತ್ತು. ಈಗ ಬೇರೆಬೇರೆ ಪ್ರಕರಣಗಳು ಸೇರ್ಪಟೆಯಾಗುತ್ತಿವೆ. ಕೂಲಂಕುಷವಾಗಿ ತನಿಖೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಅಗತ್ಯತೆ ಮೇರೆಗೆ ಎಸ್ ಐಟಿ ರಚನೆ ಮಾಡಲಾಗಿದೆ. ಎಸ್ ಐಟಿಯವರು ಮುನಿರತ್ನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ