ಮಾನವೀಯತೆ ಮರೆತ ಸಂಬಂಧಿಕರು: ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತನನ್ನು ಬಿಟ್ಟು ಪರಾರಿ! - Mahanayaka
10:59 PM Saturday 3 - January 2026

ಮಾನವೀಯತೆ ಮರೆತ ಸಂಬಂಧಿಕರು: ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತನನ್ನು ಬಿಟ್ಟು ಪರಾರಿ!

bagalakote
03/01/2026

ಬಾಗಲಕೋಟೆ: ರಕ್ತ ಸಂಬಂಧಿಗಳೇ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯೊಂದು ಜಿಲ್ಲೆಯ ರಬಕವಿ–ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಆತನ ಸಂಬಂಧಿಕರು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಘಟನೆಯ ವಿವರ: ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯನ್ನು ವಿಠ್ಠಲ ರಾವಳ್ ಎಂದು ಗುರುತಿಸಲಾಗಿದೆ. ಈತ ಬನಹಟ್ಟಿ ನಿವಾಸಿಯಾಗಿದ್ದು, ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದಾನೆನ್ನಲಾಗಿದೆ. ಸುಮಾರು ಹತ್ತು ದಿನಗಳ ಹಿಂದೆ ಈತನನ್ನು ಆಸ್ಪತ್ರೆಗೆ ಕರೆತಂದಿದ್ದ ಸಂಬಂಧಿಕರು, ಚಿಕಿತ್ಸೆ ಕೊಡಿಸುವ ಬದಲು ಆತನನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾರೆ. ಕಳೆದ 10 ದಿನಗಳಿಂದ ಯಾವುದೇ ಆರೈಕೆ ಇಲ್ಲದೆ ವಿಠ್ಠಲ ಆಸ್ಪತ್ರೆಯಲ್ಲೇ ನರಳಾಡುತ್ತಿದ್ದಾನೆ.

ಸಾರ್ವಜನಿಕರ ಆಕ್ರೋಶ: ವ್ಯಕ್ತಿಯ ಸ್ಥಿತಿ ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತು ದಿನಗಳಿಂದ ಸ್ನಾನ ಅಥವಾ ಸ್ವಚ್ಛತೆ ಇಲ್ಲದೆ ವಿಠ್ಠಲನ ಸ್ಥಿತಿ ಶೋಚನೀಯವಾಗಿದ್ದು, ಆಸ್ಪತ್ರೆಯ ಇತರ ರೋಗಿಗಳಿಗೂ ಇದರಿಂದ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದಾಗ ಸಂಬಂಧಿಕರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆಗೆ ಬೀಗ ಹಾಕಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ನೆರವಿಗೆ ಬಂದ ಶಾಸಕರು: ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಶಾಸಕ ಸಿದ್ದು ಸವದಿ ಅವರು ಯುವಕನ ನೆರವಿಗೆ ಧಾವಿಸಿದ್ದಾರೆ. ವಿಠ್ಠಲನಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಅಲ್ಲದೆ, ಕಳೆದ ಎಂಟು ದಿನಗಳಿಂದ ಡಾ. ನದಾಫ್ ಎಂಬುವವರು ಯುವಕನಿಗೆ ಚಿಕಿತ್ಸೆ ನೀಡುತ್ತಿದ್ದು, ಶಾಸಕರು ಯುವಕನ ಊಟೋಪಚಾರ ಹಾಗೂ ವೈದ್ಯಕೀಯ ವೆಚ್ಚದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.  ಕಷ್ಟದ ಸಮಯದಲ್ಲಿ ಜೊತೆಗಿರಬೇಕಾದವರೇ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ