ಚಿಕ್ಕಮಗಳೂರು: ಬೆಡ್ ಮೇಲೆ ಗೊಂಬೆ ಇಟ್ಟು ಅಪ್ಪನನ್ನೇ ಯಾಮಾರಿಸಿ ಜೆ.ಇ. ಪುತ್ರಿ ನಾಪತ್ತೆ!
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಸಿನಿಮೀಯ ಶೈಲಿಯಲ್ಲಿ ಯುವತಿಯೊಬ್ಬಳು ತನ್ನ ತಂದೆಯನ್ನೇ ಯಾಮಾರಿಸಿ ನಾಪತ್ತೆಯಾಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ಮೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ (ಜೆ.ಇ.) ಪುತ್ರಿ ಜಲನ್ಯ ನಾಪತ್ತೆಯಾದ ಯುವತಿ. ಈಕೆ ಈ ವರ್ಷವಷ್ಟೇ ಶೃಂಗೇರಿಯ ಬಿ.ಜಿ.ಎಸ್. ಹಾಸ್ಟೆಲ್ ನಲ್ಲಿದ್ದುಕೊಂಡು ದ್ವಿತೀಯ ಪಿಯುಸಿ ಮುಗಿಸಿ ಮನೆಯಲ್ಲಿದ್ದಳು. ಕಳೆದ ಎರಡು ತಿಂಗಳಿಂದ ನಿತ್ಯ ಕೊಪ್ಪ ಪಟ್ಟಣಕ್ಕೆ ಕಂಪ್ಯೂಟರ್ ಕ್ಲಾಸ್ ಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ.
ಇತ್ತೀಚೆಗಷ್ಟೇ ತಂದೆಯ ಜೊತೆ ಶೃಂಗೇರಿ ದೇಗುಲಕ್ಕೆ ಹೋಗಿ ಬಂದಿದ್ದ ಜಲನ್ಯ, ಮರುದಿನವೇ ಯಾರಿಗೂ ತಿಳಿಯದಂತೆ ನಾಪತ್ತೆಯಾಗಿದ್ದಾಳೆ. ತಂದೆಗೆ ತಿಳಿಯದಂತೆ ಮೊಬೈಲ್ ಫೋನ್ ಬಳಸುತ್ತಿದ್ದ ಯುವತಿ, ಮನೆಯಿಂದ ಹೋಗುವಾಗ ಅಪ್ಪನಿಗೆ ಸಂಶಯ ಬಾರದಿರಲಿ ಎಂದು ಬೆಡ್ ಮೇಲೆ ಮನುಷ್ಯರಂತೆ ಗೊಂಬೆ ಇಟ್ಟು, ಅದಕ್ಕೆ ರಗ್ ಹೊದಿಸಿ ಹೋಗಿದ್ದಾಳೆ. ಮಗಳು ಮಲಗಿದ್ದಾಳೆಂದೇ ಭಾವಿಸಿದ್ದ ತಂದೆಗೆ ಬಳಿಕ ಅಲ್ಲಿ ಮಗಳಿಲ್ಲದೇ ಗೊಂಬೆ ಇಟ್ಟಿರುವುದು ತಿಳಿದು ಶಾಕ್ ಆಗಿದೆ.
ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗಳನ್ನು ಹುಡುಕಿಕೊಡುವಂತೆ ತಂದೆ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























