ಸೀಟು ಬಿಟ್ಟುಕೊಡದ ಪ್ರಯಾಣಿಕನಿಗೆ ಬಿಜೆಪಿ ಶಾಸಕನ ಬೆಂಬಲಿಗರಿಂದ ಹಿಗ್ಗಾಮುಗ್ಗಾ ಥಳಿತ! - Mahanayaka

ಸೀಟು ಬಿಟ್ಟುಕೊಡದ ಪ್ರಯಾಣಿಕನಿಗೆ ಬಿಜೆಪಿ ಶಾಸಕನ ಬೆಂಬಲಿಗರಿಂದ ಹಿಗ್ಗಾಮುಗ್ಗಾ ಥಳಿತ!

vande bharat
23/06/2025

ನವದೆಹಲಿ: ಸೀಟು ಬಿಟ್ಟು ಕೊಡದ ಪ್ರಯಾಣಿಕನೊಬ್ಬನ ಮೇಲೆ ಬಿಜೆಪಿ ಶಾಸಕ(BJP MLA)ನ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ದೆಹಲಿ–ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಝಾನ್ಸಿಯ ಬಿಜೆಪಿ ಶಾಸಕ ರಾಜೀವ್ ಸಿಂಗ್ (Rajeev Singh)ತಮ್ಮ ಪತ್ನಿ ಮತ್ತು ಮಗನೊಂದಿಗೆ ಗುರುವಾರ ತಮ್ಮ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ರಾಜೀವ್ ಸಿಂಗ್ ಅವರಿಗೆ ಹಿಂಭಾಗದಲ್ಲಿ ಆಸನ ಸಿಕ್ಕಿದೆ. ಅವರ ಕುಟುಂಬ ಸದಸ್ಯರು ಮುಂಭಾಗದಲ್ಲಿದ್ದರು. ಈ ವೇಳೆ ಮುಂಭಾಗದಲ್ಲಿದ್ದ ವ್ಯಕ್ತಿಗೆ ಸೀಟು ಬದಲಿಸುವಂತೆ ಶಾಸಕರ ಬೆಂಬಲಿಗರು ತಾಕೀತು ಮಾಡಿದ್ದಾರೆ. ಸೀಟು ಬದಲಿಸಲು ನಿರಾಕರಿಸಿದ ವೇಳೆ, ಝಾನ್ಸಿ ನಿಲ್ದಾಣದಲ್ಲಿ ರೈಲು ಹತ್ತಿದ ಸುಮಾರು 6 ಮಂದಿ ಶಾಸಕರ ಬೆಂಬಲಿಗರು, ಸೀಟು ಬದಲಿಸಲು ನಿರಾಕರಿಸಿದ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಚಪ್ಪಲಿಯಲ್ಲಿ ಕೂಡ ಥಳಿಸಿದ್ದಾರೆ. ಹಲ್ಲೆಯ ನಂತರ ವ್ಯಕ್ತಿ ರಕ್ತ ಸಿಕ್ತವಾಗಿ, ಬಟ್ಟೆಗಳು ರಕ್ತದಲ್ಲಿ ತೊಯ್ದಿರುವುದು ಕಂಡು ಬಂದಿದೆ.

ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಝಾನ್ಸಿ) ವಿಪುಲ್ ಕುಮಾರ್ ಶ್ರೀವಾಸ್ತವ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಸೀಟು ಬದಲಾಯಿಸುವ ವಿಚಾರದಲ್ಲಿ ವಾಗ್ವಾದ ನಡೆದಿದೆ ಎಂದು ದೃಢಪಡಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಬಳಿಕ ಕಟ್ಟು ಕಥೆ:

ಸೀಟು ಬದಲಿಸುವ ವಿಚಾರದಲ್ಲಿ ಹಲ್ಲೆ ನಡೆದಿದ್ದರೂ, ಶಾಸಕರು  ಹಲ್ಲೆಗೊಳಗಾದ ವ್ಯಕ್ತಿ ತನ್ನ ಕುಟುಂಬದ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸಂತ್ರಸ್ತನ ವಿರುದ್ಧವೇ ಝಾನ್ಸಿಯ ಸರ್ಕಾರಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ