ರಾಜಸ್ಥಾನದಲ್ಲಿ ಮತಬೇಟೆಗೆ ಕೇಸರಿ ಪಾಳಯ ಪ್ಲ್ಯಾನ್: ಬಿಜೆಪಿ ನೂತನ ಅಧ್ಯಕ್ಷರಾಗಿ ಕೈಲಾಶ್ ಚೌಧರಿ ಆಯ್ಕೆ ಸಾಧ್ಯತೆ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರನ್ನು ಡಿಸಿಎಂ ಆಗಿ ಆರಿಸಲಾಗಿದೆ. ಇದೀಗ ಬಂದ ಸುದ್ದಿಯಂತೆ ಬಿಜೆಪಿ ಮುಂದಿನ ಒಂದೆರಡು ದಿನಗಳಲ್ಲಿ ತನ್ನ ರಾಜ್ಯಾಧ್ಯಕ್ಷರನ್ನು ಬದಲಾಯಿಸಬಹುದು. ಮೂಲಗಳ ಪ್ರಕಾರ, ಕೇಂದ್ರ ಸಚಿವ ಮತ್ತು ಬಾರ್ಮರ್ ಸಂಸದ ಕೈಲಾಶ್ ಚೌಧರಿ ಅವರನ್ನು ರಾಜಸ್ಥಾನದ ಬಿಜೆಪಿ ಘಟಕದ ಹೊಸ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಈ ಮೂಲಕ ಜಾಟ್ ಮತದಾರರನ್ನು ಆಕರ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ.
“ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ಬಿಜೆಪಿ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜಾಟ್ ಮತಗಳು ಕಾಂಗ್ರೆಸ್ ನತ್ತ ವಾಲುತ್ತಿವೆ. ಜಾಟ್ ಸಮುದಾಯವು ರಾಜಸ್ಥಾನದ 60 ವಿಧಾನಸಭಾ ಸ್ಥಾನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಅಲ್ಲಿ ಅವರು ಯಾವುದೇ ಪಕ್ಷಕ್ಕೆ ಸಮೀಕರಣವನ್ನು ಮಾಡಬಹುದು ಅಥವಾ ಮುರಿಯಬಹುದು” ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ.
ಕೈಲಾಶ್ ಚೌಧರಿ ಅವರನ್ನು ಈ ಹುದ್ದೆಗೆ ಏರಿಸುವುದು ಎಲ್ಲಾ ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸುವ ಬಿಜೆಪಿಯ ಪ್ರಯತ್ನವಾಗಿದೆ. ಪಕ್ಷವು ಬ್ರಾಹ್ಮಣ ಮುಖ್ಯಮಂತ್ರಿಯನ್ನು ನೇಮಿಸಲು ನಿರ್ಧರಿಸಿತ್ತು. ರಜಪೂತ ಸಮುದಾಯ ಮತ್ತು ದಲಿತ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಿತ್ತು.
ಈ ಮಧ್ಯೆ, ಪ್ರಸ್ತುತ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮತ್ತು ಚಿತ್ತೋರ್ ಗಢದ ಸಂಸತ್ ಸದಸ್ಯ ಸಿಪಿ ಜೋಶಿ ಅವರನ್ನು ಕ್ಯಾಬಿನೆಟ್ನಲ್ಲಿ ಅಥವಾ ಕೇಂದ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ನೀಡಲಾಗುವುದು ಎಂದು ಹಿರಿಯ ಬಿಜೆಪಿ ನಾಯಕ ಹೇಳಿದ್ದಾರೆ.