ನಿಷೇಧಾಜ್ಞೆಯ ನಡುವೆ ಸಿ.ಪಿ.ಯೋಗೇಶ್ವರ್ ಮತಬೇಟೆ | ಬಿಜೆಪಿ ನಾಯಕರಿಗಿಲ್ಲ ಕೊರೊನಾ ಮಾರ್ಗಸೂಚಿ - Mahanayaka
7:32 PM Thursday 12 - February 2026

ನಿಷೇಧಾಜ್ಞೆಯ ನಡುವೆ ಸಿ.ಪಿ.ಯೋಗೇಶ್ವರ್ ಮತಬೇಟೆ | ಬಿಜೆಪಿ ನಾಯಕರಿಗಿಲ್ಲ ಕೊರೊನಾ ಮಾರ್ಗಸೂಚಿ

bjp corona
24/04/2021

ಚನ್ನಪಟ್ಟಣ: ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕೊರೊನಾ ಮಾರ್ಗದರ್ಶಿ ಬಿಜೆಪಿ ನಾಯಕರಿಗೆ ಅನ್ವಯವಾಗುವುದಿಲ್ಲವೇ? ಬಿಜೆಪಿ ನಾಯಕರಿಗೇನಾದರೂ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಜಾರಿ ಮಾಡಿದೆಯೇ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿದೆ.

ಮೊನ್ನೆಯಷ್ಟೇ ಸಚಿವ ಶ್ರೀರಾಮುಲು ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಸ್ಕ್ ಧರಿಸದೇ, ದೈಹಿಕ ಅಂತರ ಕಾಪಾಡದೇ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಅವರು, ಜನರು ನನ್ನನ್ನು ಹೆದರಿಸಿ ಮಾಸ್ಕ್ ತೆಗೆಸಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ನಯವಾಗಿ ಜಾರಿಕೊಂಡಿದ್ದರು. ಇದೀಗ ರಾಜ್ಯ ಬಿಜೆಪಿಯ ಮತ್ತೋರ್ವ ಸಚಿವ ಸಿ.ಪಿ.ಯೋಗೇಶ್ವರ್ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ.

ಕೊರೊನಾ ನಿರ್ಬಂಧದ ನಡುವೆಯೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಶುಕ್ರವಾರ ಪಟ್ಟಣದಲ್ಲಿ ಗುಂಪುಗೂಡಿಕೊಂಡು ನಗರಸಭಾ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕುವೆಂಪುನಗರ 5ನೇ ಅಡ್ಡರಸ್ತೆಯ ತಮ್ಮ ನಿವಾಸದಲ್ಲಿ ಮುಖಂಡರ ಸಭೆ ನಡೆಸಿ ಬಿಜೆಪಿ ಬೆಂಬಲಿಸಲು ಮನವಿ ಮಾಡಿದ್ದರು. ಅಂತರ ಕಾಪಾಡುವಲ್ಲಿ ಯಾವುದೇ ನಿಯಮ ಪಾಲಿಸಿರಲಿಲ್ಲ. ಇದು ಟೀಕೆಗೆ ಗುರಿಯಾಗಿತ್ತು. ಶುಕ್ರವಾರವೂ ಸಹ ಯೋಗೇಶ್ವರ್ ಪಟ್ಟಣದಲ್ಲಿ ಪಕ್ಷದ ಮುಖಂಡರು, ಜನರ ಗುಂಪುಗೂಡಿಕೊಂಡು ಪ್ರಚಾರ ಮಾಡಿದ್ದು, ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಮಹಿಳೆಯರು ಮಕ್ಕಳ ಮಧ್ಯೆಯಲ್ಲಿ ನಿಂತು ಪ್ರಚಾರ ನಡೆಸಿದ್ದಾರೆ

ಸಿಎಂ ಯಡಿಯೂರಪ್ಪನವರು ಸಾರ್ವಜನಿಕರಿಗೆ ಒಂದು ವಿಷಯ ಸ್ಪಷ್ಟಪಡಿಸಬೇಕು. ಕೊರೊನಾ ನಿಯಮಗಳು ನಿಮ್ಮ ಸಂಪುಟ ಸಚಿವರಿಗೆ ಅನ್ವಯವಾಗುವುದಿಲ್ಲವೇ? ನಿಯಮಗಳನ್ನು ಬಡ ವ್ಯಾಪಾರಿಗಳು, ಕೂಲಿ ಕೆಲಸದಾಳುಗಳು, ಬಡವರು ಮಾತ್ರವೇ ಪಾಲಿಸಬೇಕೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ