ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಒಂದೂವರೆ ಲಕ್ಷ ಮಂದಿ ಮಹಿಳೆಯರು ಆಗಮಿಸಲಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಚಾಮರಾಜನಗರ: ಮೈಸೂರಿನಲ್ಲಿ ನಡೆಯಲಿರುವ ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಒಂದರಿಂದ ಒಂದೂವರೆ ಲಕ್ಷ ಮಂದಿ ಮಹಿಳೆಯರು ಆಗಮಿಸಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ನಿರಂತರವಾಗಿ ಇರಲಿದೆ, ಹಬ್ಬದ ವಾತಾವರಣವನ್ನ ನಮ್ಮ ಮಹಿಳೆಯರು ಸೃಷ್ಟಿಸಿದ್ದಾರೆ, ಐದು ಗ್ಯಾರಂಟಿಗಳಲ್ಲಿ ಬಹಳಷ್ಟು ಸದ್ದು ಮಾಡ್ತಾ ಇರೊದು ಗೃಹಲಕ್ಷ್ಮಿ ಯೋಜನೆಯಾಗಿದ್ದು ರಾಜ್ಯದ 13 ಸಾವಿರ ಕಡೆ ಈ ಕಾರ್ಯಕ್ರಮ ಮಾಡ್ತಾ ಇದ್ದೇವೆ ಎಂದು ಹೇಳಿದರು.
ಆ. 30 ರಂದು ಮೈಸೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡ್ತಾ ಇದ್ದೇವೆ, ಮೈಸೂರಿನ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಜನ ಸೇರುವ ಸಾಧ್ಯತೆ ಇದೆ,
ರಾಜ್ಯದ ಎಲ್ಲ ಮಹಿಳೆಯರು ಅತ್ಯುತ್ಸಾಹದಿಂದ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ, ರಾಜ್ಯಾದ್ಯಂತ 1.11 ಕೋಟಿ ಜನ ಗೃಹಲಕ್ಷ್ಮಿ ಗೆ ಅರ್ಜಿ ನೋಂದಣಿ ಆಗಿದೆ,ಅರ್ಜಿ ಸಲ್ಲಿಸಲು ಟೈಮ್ ಲಿಮಿಟ್ ಇಲ್ಲ , ಮುಂದಿನ ಬಾರಿಯೂ ನಮ್ಮ ಸರ್ಕಾರ ಬಂದರೆ ಯೋಜನೆ ಮುಂದುವರಿಯಲಿದೆ ಎಂದು ಹೇಳಿದರು.
ಇದೇ ವೇಳೆ, ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾರು ಯಾರಿಗೆ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದ ಮೇಲೆ ನಂಬಿಕೆ ಇದೆಯೋ ವಿಶ್ವಾಸ ಇದೆಯೋ ಅಂತವರು ಬರ್ತಾರೆ, ಜನಪರ ಕಾರ್ಯಕ್ರಮ ಕೊಡ್ತಾ ಇರೋ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ, ಯಾವುದೇ ಕಂಡಿಷನ್ ಇಲ್ಲದೆ ಸೇರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.




























