ಬಿಸಿಯೂಟ ತಯಾರಿಸಲು ದಲಿತ ಮಹಿಳೆಯ  ನೇಮಕ: 22 ವಿದ್ಯಾರ್ಥಿಗಳನ್ನು ಶಾಲೆ ಬಿಡಿಸಿದ ಪೋಷಕರು! - Mahanayaka

ಬಿಸಿಯೂಟ ತಯಾರಿಸಲು ದಲಿತ ಮಹಿಳೆಯ  ನೇಮಕ: 22 ವಿದ್ಯಾರ್ಥಿಗಳನ್ನು ಶಾಲೆ ಬಿಡಿಸಿದ ಪೋಷಕರು!

chamarajanagara
25/06/2025

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ದಲಿತ ಮಹಿಳೆಯನ್ನು ನೇಮಕ ಮಾಡಿದರು. ಎಂಬ ಕಾರಣಕ್ಕೆ  22 ಮಕ್ಕಳನ್ನು ಪೋಷಕರು ಶಾಲೆಯಿಂದ ಬಿಡಿಸಿದ ಘಟನೆ ನಡೆದಿದೆ.

ಘಟನೆಯ ಬೆನ್ನಲ್ಲೇ  ಎಸ್.ಪಿ ಡಾ.ಬಿ.ಟಿ.ಕವಿತಾ, ಸಿಇಓ ಮೋನಾ ರೋತ್, ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ, ಪೋಷಕರ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ಸಿಇಓ ಮೋನಾ ರೋತ್ ಅವರು ಪೋಷಕರ ಕುಂದು ಕೊರತೆ ಆಲಿಸಿದರು. ಶಿಕ್ಷಕರು ಸರಿಯಾಗಿ ಪಾಠ ಮಾಡದ ಕಾರಣ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದೇವೆ ಎಂದು ಕೆಲ ಪೋಷಕರು ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ದಾರೆ. ಕೊನೆಗೆ ಅಧಿಕಾರಿಗಳು 22 ಜನ ವಿದ್ಯಾರ್ಥಿಗಳಲ್ಲಿ ಏಳು ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ವಾಪಸ್​ ಕರೆತಂದಿದ್ದಾರೆ. ಈ 22 ಜನ ವಿದ್ಯಾರ್ಥಿಗಳಲ್ಲಿ ಏಳು ಮಂದಿ ಮಾತ್ರ ಶಾಲೆಯ ಬಿಸಿಯೂಟ ತಿನ್ನುತ್ತಿದ್ದರು ಎಂದು ಅಡುಗೆ ಸಿಬ್ಬಂದಿ ಹೇಳಿದ್ದಾರೆ.

ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೊಮ್ಮು ಗ್ರಾಮಕ್ಕೆ ಭೇಟಿ ನೀಡಿ, ಶಾಲೆಯ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು. ಶಾಲೆಯ ಮುಖ್ಯ ಶಿಕ್ಷಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಘಟನೆ ಸಂಬಂಧ ಸಮಗ್ರ ವರದಿ ಕೊಡುವಂತೆ ಸಿಇಒ ಸೂಚನೆ ನೀಡಿದ್ದಾರೆ.

ನಾನು ಅಡುಗೆ ಮಾಡಿದರೆ 22 ಮಕ್ಕಳ ಪೈಕಿ ಕೇವಲ 7 ಮಂದಿ ಮಾತ್ರ ಊಟ ಮಾಡುತ್ತಿದ್ದರು, ಉಳಿದವರು ಮನೆಗೆ ಹೋಗುತ್ತಿದ್ದರೆಂದು ಅಡುಗೆ ಸಿಬ್ಬಂದಿ ಹೇಳಿದ್ದಾರೆ.

ಮಕ್ಕಳು ಯಾಕೆ ಊಟ ಮಾಡುತ್ತಿರಲಿಲ್ಲ ಅಂತ ಕೂಲಂಕುಶ ತನಿಖೆ ಮಾಡುತ್ತೇವೆ. ಅಸ್ಪೃಶ ಆಚರಣೆ ಮಾಡಿದ್ದರೆ ದೂರು ಕೊಟ್ಟರೇ ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರ ಎಸ್ ​ಪಿ ಡಾ. ಬಿಟಿ ಕವಿತಾ ಸ್ಪಷ್ಟನೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ