5:20 AM Saturday 24 - January 2026

ಆಸ್ತಿಗಾಗಿ ಪತ್ನಿಯ ಜೊತೆ ಸೇರಿಕೊಂಡು ತಂದೆಯನ್ನು ಮರಕ್ಕೆ ಕಟ್ಟಿ ಭೀಕರ ಹತ್ಯೆ ಮಾಡಿದ ಪುತ್ರ

28/11/2020

ಲಕ್ನೋ: ತನ್ನ ಪತ್ನಿಯ ಜೊತೆಗೆ ಸೇರಿ ಪುತ್ರನೇ ತನ್ನ ತಂದೆಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬರಾಬಂಕಿಯ ಘತೇಪುರ ಗ್ರಾಮವಾಸಿ ಶ್ರೀರಾಮ್​ ಗೌತಮ್​ (55) ಅವರ ಬಳಿ ಸ್ವಲ್ಪ ಆಸ್ತಿಯಿತ್ತು. ಈ ಆಸ್ತಿಯನ್ನು ತನ್ನ ಹೆಸರಿಗೆ ಬರೆಯಬೇಕು ಎಂದು ಆರೋಪಿ  ಪುತ್ರ ಮನೋಜ್ ಹಾಗೂ ಸೊಸೆ ಪೀಡಿಸುತ್ತಿದ್ದರು. ಆದರೆ ಶ್ರೀರಾಮ್ ಗೌತಮ್ ಇದಕ್ಕೆ ಒಪ್ಪಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಪುತ್ರ ಹಾಗೂ ಸೊಸೆ ಜಗಳವಾಡುತ್ತಿದ್ದರು.

ಶುಕ್ರವಾರವೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರಿದಾಗ ಪುತ್ರ ಹಾಗೂ ಸೊಸೆ,  ಶ್ರೀರಾಮ್​ ಗೌತಮ್ ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಮರಕ್ಕೆ ಕಟ್ಟಿಹಾಕಿ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ.

ಈ ಘಟನೆಯನ್ನು ಗ್ರಾಮಸ್ಥರು ಕಣ್ಣಾರೆ ಕಂಡಿದ್ದರು. ಇವರ ಕೃತ್ಯವನ್ನು ತಡೆಯಲು ಮುಂದಾದಾಗ ಗ್ರಾಮಸ್ಥರ ಮೇಲೆಯೂ ದಾಳಿಗೆ ಇವರು ಮುಂದಾಗಿದ್ದರು ಎಂದು ಹೇಳಲಾಗಿದೆ.  ಕೃತ್ಯದ ಬಳಿಕ ಮನೋಜ್ ತನ್ನ ಪತ್ನಿಯ ಜೊತೆಗೆ ಊರಿನಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆಗಲೇ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version