ವಾಗ್ಯುದ್ಧ: ತೆಲಂಗಾಣ ಕುರಿತು ಮೋದಿ ಹೇಳಿಕೆ: ನಮೋ ವಿರುದ್ಧ ಗರಂ ಆದ ರಾಹುಲ್ ಗಾಂಧಿ - Mahanayaka

ವಾಗ್ಯುದ್ಧ: ತೆಲಂಗಾಣ ಕುರಿತು ಮೋದಿ ಹೇಳಿಕೆ: ನಮೋ ವಿರುದ್ಧ ಗರಂ ಆದ ರಾಹುಲ್ ಗಾಂಧಿ

19/09/2023


Provided by

ತೆಲಂಗಾಣದ ಹುತಾತ್ಮರ ತ್ಯಾಗದ ಬಗ್ಗೆ ಸಂಸತ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಗೌರವದಿಂದ ನಡೆದುಕೊಂಡಿದ್ದಾರೆ. ಜೊತೆಗೆ ಅವರ ಹೇಳಿಕೆಗಳು ರಾಜ್ಯದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ತೆಲುಗು ಭಾಷೆಯಲ್ಲೇ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ತೆಲಂಗಾಣದ ಹುತಾತ್ಮರು ಮತ್ತು ಅವರ ತ್ಯಾಗದ ಬಗ್ಗೆ ಪ್ರಧಾನಿ ಮೋದಿಯವರ ಅಗೌರವದ ಭಾಷಣವು ತೆಲಂಗಾಣದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದು ಹೇಳಿದರು.

ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ವಿಭಜಿಸಿರುವುದು ಎರಡೂ ರಾಜ್ಯಗಳಲ್ಲಿ ಕಹಿಘಟನೆ ಮತ್ತು ರಕ್ತಪಾತಕ್ಕೆ ಕಾರಣವಾಯಿತು ಎಂದು ಮೋದಿ ಹೇಳಿದ್ದರು. ಪ್ರಧಾನಮಂತ್ರಿಯವರ ಈ ಹೇಳಿಕೆಗಳನ್ನು ಖಂಡಿಸಿದ ತೆಲಂಗಾಣ ಸಚಿವ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಇದನ್ನು “ಅವಹೇಳನಕಾರಿ” ಎಂದು ಬಣ್ಣಿಸಿದ್ದಾರೆ. ಐತಿಹಾಸಿಕ ಸಂಗತಿಗಳಿಗೆ ಪ್ರಧಾನಿಯವರ ಸಂಪೂರ್ಣ “ಅಲಕ್ಷ್ಯ”ವನ್ನು ಇದು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.

ಸೋಮವಾರ ಸಂಸತ್ತಿನ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪ್ರಯಾಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು’ ಕುರಿತು ಚರ್ಚೆಯನ್ನು ಪ್ರಾರಂಭಿಸಿದರು. ರಾಜ್ಯಗಳ ವಿಭಜನೆ ಬಗ್ಗೆ ಮಾತನಾಡುವ ಮೊದಲು ಅವರು ಜವಾಹರಲಾಲ್ ನೆಹರೂ ಸೇರಿದಂತೆ ದಿಗ್ಗಜರ ಕೊಡುಗೆಗಳು ಮತ್ತು ಭಾಷಣಗಳನ್ನು ಅವರು ಸ್ಮರಿಸಿದರು.

ವಾಜಪೇಯಿ ಅವರ ಕಾಲದಲ್ಲಿ ಈ ಸದನದಲ್ಲಿ ಮೂರು ರಾಜ್ಯಗಳು ಅತ್ಯಂತ ಸಂತೋಷದಿಂದ ವಿಭಜಿಸಲ್ಪಟ್ಟವು. ಛತ್ತೀಸ್‌ಗಢ ರಚನೆಯಾದಾಗ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳೆರಡೂ ಸಂಭ್ರಮಿಸಿದವು. ಉತ್ತರಾಂಚಲ ರಚನೆಯಾದಾಗ ಉತ್ತರಾಂಚಲ ಮತ್ತು ಉತ್ತರ ಪ್ರದೇಶಗಳೆರಡೂ ಸಂಭ್ರಮಿಸಿದವು. ಜಾರ್ಖಂಡ್ ರಚನೆಯಾದಾಗ ಇದನ್ನು ಜಾರ್ಖಂಡ್ ಮತ್ತು ಬಿಹಾರ ಎರಡೂ ಸಂಭ್ರಮಿಸಿದವು. ಎಲ್ಲ ಜನರು ಅದನ್ನು ಸಂಭ್ರಮಿಸಿದರು.

ಕೆಲವು ಕಹಿ ನೆನಪುಗಳೂ ಇವೆ. ತೆಲಂಗಾಣ ರಚನೆಯ ನಂತರ ತೆಲಂಗಾಣ ಅಥವಾ ಆಂಧ್ರಪ್ರದೇಶ ಈ ವಿಭಜನೆಯನ್ನು ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಇದು ಉದ್ವಿಗ್ನತೆಯ ನಡುವೆ ಮಾಡಲ್ಪಟ್ಟಿದೆ. ಅದೇ ಶಕ್ತಿ ಮತ್ತು ಉತ್ಸಾಹದಿಂದ ರೂಪುಗೊಂಡಿದ್ದರೆ, ನಾವು ಈಗ ಉತ್ತಮ ತೆಲಂಗಾಣವನ್ನು ಸಂಭ್ರಮಿಸಬಹುದಾಗಿತ್ತು. ಅಲ್ಲಿ ದ್ವೇಷದ ಬೀಜಗಳನ್ನು ಬಿತ್ತಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಗೆ ರಾಹುಲ್ ಗಾಂಧಿಯವರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ