ಹಬ್ಬ, ಮದುವೆಯಲ್ಲಿ ಸಂವಿಧಾನ ಪೀಠಿಕೆ ಓದುವಂತಾಗಲಿ: ಸಚಿವ ಸತೀಶ್ ಜಾರಕಿಹೊಳಿ

ಸಂವಿಧಾನದ ಮಹತ್ವ ಪ್ರತಿ ಮನೆಮನೆಗೆ ಮುಟ್ಟಬೇಕು. ಹಬ್ಬ, ಮದುವೆಯಲ್ಲಿ ಸಂವಿಧಾನ ಪೀಠಿಕೆ ಓದುವ ಪರಿಪಾಠ ಆಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಭೀಮ ಸಂಕಲ್ಪ ಸಮಾವೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸತತ ಪ್ರಯತ್ನ, ಸಂಘರ್ಷದ ಮೂಲಕ ರಚಿಸಿಕೊಟ್ಟಿರುವ ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರಿಂದ ಆಗಬೇಕು.
ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಬೇಕು. ಸಂವಿಧಾನದ ಮಹತ್ವ, ರಕ್ಷಣೆ, ಅನುಕೂಲವನ್ನು ಮಕ್ಕಳಿಗೆ, ಕುಟುಂಬಕ್ಕೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದರು.
ನಿಮ್ಮೆಲ್ಲರ ಸಹಕಾರದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಂವಿಧಾನ ಉಳಿಸುವ, ನಿಮಗೆಲ್ಲರಿಗೂ ರಕ್ಷಣೆ ಕೊಡುವ ಸರ್ಕಾರ ಬಂದಿದೆ. ಮುಂದಿನ ದಿನಗಳಲ್ಲೂ ಸಂವಿಧಾನ ರಕ್ಷಣೆ ಮಾಡುವ ಪಕ್ಷ ಅಧಿಕಾರಕ್ಕೆ ಬರಬೇಕು ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.
ಪ್ರತಿ ಮನೆಮನೆಯಲ್ಲೂ ಅಂಬೇಡ್ಕರ್ ರವರ ಭಾವಚಿತ್ರ ಇಟ್ಟು ಸಂವಿಧಾನ ಪೀಠಿಕೆಯನ್ನು ಸಣ್ಣ ಮಕ್ಕಳಿಗೆ ಓದಿಸಿದರೆ ಬಹಳಷ್ಟು ಬದಲಾವಣೆ ಸಾಧ್ಯವಾಗುತ್ತದೆ, ಹಬ್ಬ, ಮದುವೆ ಸಮಾರಂಭಗಳಲ್ಲಿ ಸಂವಿಧಾನ ಪೀಠಿಕೆ ಓದುವ ಪರಿಪಾಠ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕರುಗಳಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ ಇನ್ನಿತರರು ಇದ್ದರು.