ಜೈನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಧಿಕ್ಕಾರವಿರಲಿ: ಜೈ ಭೀಮ್ ಘೋಷ ಮೊಳಗಲಿ - Mahanayaka

ಜೈನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಧಿಕ್ಕಾರವಿರಲಿ: ಜೈ ಭೀಮ್ ಘೋಷ ಮೊಳಗಲಿ

jai bheem
12/02/2023

  • ಧಮ್ಮಪ್ರಿಯಾ, ಬೆಂಗಳೂರು 

ಬಾಬಾಸಾಹೇಬರು ಅಂದರೆ ಇಡೀ ಜಗತ್ತಿನ ಅರ್ಥತಜ್ಞ,  ಸಾಮಾಜಿಕ ಸಮಾನತೆಯ ಹರಿಕಾರ, ಮಹಿಳೆಯ ಸ್ವಾತಂತ್ರ್ಯ ಸ್ವಾಭಿಮಾನದ ಸಂಕೇತ, ಕಾರ್ಮಿಕ ವರ್ಗಕ್ಕೆ  ತೋಳ್ಬಲ,  ವಿದ್ಯಾರ್ಥಿಗಳಿಗೆ/ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಠಿಯ ಜನಕ,  ಶೋಷಿತ ಸಮುದಾಯದ  ವಿಮೋಚಕ. ನವಭಾರತದ  ನಿರ್ಮಾತೃ.  ಸರ್ವಜನಾಂಗಗಳಿಗೂ ಸಮಾನತೆಯನ್ನು ಸಂವಿಧಾನದ ಮೂಲಕ ನೀಡಿದ ಸಮಾಜ ಸುಧಾರಕ,  ಬೌದ್ಧ ಬಿಕ್ಕು, ಹೀಗೆ ಹಲವಾರು ರೀತಿಯಲ್ಲಿ ಇವರನ್ನು ಸ್ಮರಿಸಬಹುದು.

ಇಡೀ ಜಗತ್ತೇ ಇವರ ಹುಟ್ಟು ಹಬ್ಬವನ್ನು   ವಿಶ್ವ ಜ್ಞಾನಿಗಳ (world knowledge day) ದಿನ ಎಂದು ಆಚರಿವುದನ್ನು ನೋಡಿದರೆ  ಬಾಬಾಸಾಹೇಬರಿಗೆ  ಎಷ್ಟು ಜ್ಞಾನವಿತ್ತು  ಎಂದು ಅರ್ಥೈಸಿಕೊಂಡು ಅರಗಿಸಿಕೊಳ್ಳುವುದು ತುಂಬಾ ಕಷ್ಟದ  ಸಂಗತಿಯಾಗಿದೆ. ನೊಬೆಲ್ ಪಾರಿತೋಷಕವನ್ನೇ ಗೆಲ್ಲುವಷ್ಟು ಮೇಧಾವಿಯಾಗಿದ್ದ, ಭಾರತರತ್ನ, ಸಂವಿಧಾನ ಶಿಲ್ಪಿಯನ್ನು ಭಾರತೀಯ ಪ್ರಜೆಗಳಾದ ನಾವೆಲ್ಲರೂ  ನಿತ್ಯಸ್ಮರಿಸಬೇಕು.  ಅವರ ಆದರ್ಶ ತತ್ವಗಳನ್ನು  ನಮ್ಮಲ್ಲಿ ನಮ್ಮ ಮಕ್ಕಳಲ್ಲಿ ಮೈಗೂಡಿಸಿಕೊಂಡು ನಾವು ಅವರಿಗೆ ಗೌರವವವನ್ನು ಸಲ್ಲಿಸಬೇಕು.

ಬಾಬಾಸಾಹೇಬರು ಈ ದೇಶವಲ್ಲದೆ ಬೇರೆ ರಾಷ್ಟ್ರದ ಪ್ರಜೆಯಾಗಿದ್ದಿದ್ದರೆ  ಜಗತ್ತೇ ಕೊಂಡಾಡುವಂತೆ ಅವರನ್ನು ಗೌರವಿಸುತ್ತಿತ್ತು. ಆದರೆ ಈ ದೇಶದ ದುರಂತವೋ ಏನೋ  ಇಂತಹ ಒಂದು ಮೇಧಾವಿಯನ್ನು  ಕೇವಲ ಜಾತಿಯ ಆದರದ ಮೇಲೆ  ನಿಕೃಷ್ಟವಾಗಿ ಕಂಡು ಕಡೆಗಣಿಸುವ. ನೆಪಮಾತ್ರಕ್ಕೆ ಜಯಂತಿ ಮಾಡುತ್ತಾ, ನವಭಾರತದ ಯುವ ಪೀಳಿಗೆಯಲ್ಲಿ  ದ್ವೇಶದ ಕಿಚ್ಚನ್ನು ಹಚ್ಚಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ  ಪೀತಮನಸ್ಸುಗಳಿಗೆ  ಈ ದೇಶದಲ್ಲೇನು ಕೊರತೆಯಿಲ್ಲ.


Provided by

ಬಾಬಾಸಾಹೇಬರು ಈ ದೇಶಕ್ಕೆ ಮಾಡಿರುವ ಅನ್ಯಾಯವಾದರೂ ಏನು ? ಈ ದೇಶದ ಸಂಪತ್ತು ಮತ್ತು ಅಧಿಕಾರ ಎನ್ನುವುದು ಕೆಲವೇ ವರ್ಗದವರ ಕೈಯ್ಯಲ್ಲಿದ್ದದ್ದನ್ನು ಸರ್ವರಿಗೂ ಸಮಾನವಾಗಿ ಸಿಗಬೇಕು  ಎಂದು  ಸಮಾನತೆಯ ಸಂವಿಧಾನವನ್ನು  ಬರೆದದ್ದೇ ತಪ್ಪಾ,?  ಕೇವಲ ಒಂದು ವರ್ಗಕ್ಕೆ ಸೀಮಿತವಾಗಿದ್ದ ವಿದ್ಯೆಯನ್ನು ಸರ್ವಜನಾಂಗವು ಕಲಿಯುವಂತೆ, ಉದ್ಯೋಗ ಪಡೆಯುವಂತೆ ಕಾನೂನು ಮಾಡಿದ್ದು ತಪ್ಪಾ? ಎಲ್ಲಾ ವರ್ಗದ ಮಹಿಳೆಯರನ್ನು  ವಿದ್ಯೆಯಿಂದ  ಉದ್ಯೋಗದಿಂದ, ಆಸ್ತಿಯ ಅಧಿಕಾರದಿಂದ ದೂರವಿಡಲಾಗಿತ್ತು,  ಎಲ್ಲರಿಗೂ  ಎಲ್ಲರಂಗದಲ್ಲೂ ಸಮಾನತೆಯನ್ನು ಕಲ್ಪಿಸಿದ್ದು ತಪ್ಪಾ? ಜೀತ ವಿಮುಕ್ತಿ ಕಾಯಿದೆಯನ್ನು ಸಂವಿಧಾನದಲ್ಲಿ ಅಳವಡಿಸಿ  ನಿರ್ಮೂಲನೆ ಮಾಡಲು ಕಾನೂನು ಮಾಡಿದ್ದು ತಪ್ಪಾ? ದೇಶದಲ್ಲಿದ್ದ  ಬಾಲ್ಯ ವಿವಾಹ,  ದೇವದಾಸಿ ಪದ್ಧತಿ  ಗೆಜ್ಜೆಪೂಜೆ ಇಂತಹ ಅನಿಷ್ಠ ಪದ್ದತಿಗಳನ್ನು ದೂರ ಮಾಡಬೇಕೆಂದು  ಹೆಣ್ಣು ಮಗಳು 18 ವರ್ಷ ಪೂರೈಸುವವರೆಗೂ ವಿವಾಹವಾಗಬಾರದು ಎಂದು ಸಂವಿಧಾನಲ್ಲಿ ಅಳವಡಿಸಿದ್ದು ತಪ್ಪಾ? ಅದಕ್ಕಾಗಿ  ಮಹಿಳೆಯರ ಸಮಾನತೆಗಾಗಿ  ಹಿಂದೂ ಕೋಡ್ ಬಿಲ್  ಜಾರಿ ಮಾಡಿಸಿದ್ದು ತಪ್ಪಾ? ಮತದಾನದ ಹಕ್ಕನ್ನು  ಎಲ್ಲಾ ಜನಾಂಗಕ್ಕೂ ತಂದುಕೊಟ್ಟಿದ್ದು ತಪ್ಪಾ? ಸಾಮಾನ್ಯ ಜನರಿಗಾಗುವ ಅನ್ಯಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನ್ಯಾಯಾಲಯ ವ್ಯವಸ್ಥೆ ಕಲ್ಪಿಸಿದ್ದು ತಪ್ಪಾ? ಭಾರತದ  ರೂಪಾಯಿ ಸಮಸ್ಯೆಯನ್ನು  ಬಗೆಹರಿಸಲು, ಭಾರತದ ಅರ್ಥ ವ್ಯವಸ್ಥೆಯನ್ನು ಸುಗಮವಾಗಿ  ನಿರ್ವಹಿಸಲು  RBI  ಸ್ಥಾಪನೆ ಮಾಡಲು ಶ್ರಮಿಸಿದ್ದು  ತಪ್ಪಾ ? ಹೆಣ್ಣುಮಕ್ಕಳಿಗೆ  ಪ್ರತ್ಯೇಕ ಶಾಲಾ ಕಾಲೇಜುಗಳ ವ್ಯವಸ್ಥೆ,  ವಿದ್ಯಾರ್ಥಿ ನಿಲಯಗಳ  ವ್ಯವಸ್ಥೆ ಮಾಡುವಂತೆ ಸಂವಿಧಾನದಲ್ಲಿ ಅಳವಡಿಸಿದ್ದು ತಪ್ಪಾ?,  ಕಾರ್ಮಿಕರು ನಿರಂತರವಾಗಿ ದುಡಿದು ದುಡಿದು ದಣಿವಾಗಿದ್ದವರಿಗೆ ದಿನಕ್ಕೆ ಕೇವಲ 8 ಗಂಟೆಗಳು ಮಾತ್ರ ಕೆಲಸ ಮಾಡಬೇಕು ಎಂದು ಕಾನೂನು ಜಾರಿ ಮಾಡಿದ್ದು ತಪ್ಪಾ? ಸರ್ಕಾರಿ ಕೆಲಸದಿಂದ ನಿವೃತ್ತಿ ಪಡೆದ ನೌಕರರಿಗೆ ಸುಖ ಜೀವನ ನಡೆಸಲು ಪಿಂಚಣಿ ಯೋಜನೆಯನ್ನು ಜಾರಿ ಮಾಡಿದ್ದು ತಪ್ಪಾ? ಉಳುವವನನ್ನು ಭೂಮಿಯ ಒಡೆಯನಾಗಬೇಕು ಎಂದು ಸಂವಿಧಾನದಲ್ಲಿ ಅಳವಡಿಸಿದ್ದು ತಪ್ಪಾ? ಬಾಬಾಸಾಹೇಬರ  ಋಣವನ್ನು ತಿಂದು  ನ್ಯಾಯಾಲದದಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಬೇಕಾಗಿದ್ದ ರಾಯಚೂರು ಜಿಲ್ಲಾ ನ್ಯಾಯಾಧೀಶರೇ  ತಮ್ಮ ಮೂರ್ಖನನದಿಂದ ಬಾಬಾಸಾಹೇಬರ ಭಾವಚಿತ್ರ ತೆಗೆಸಿದರೆ ಮಾತ್ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರಲು ಒಪ್ಪುವುದಾಗಿ  ಬಾಬಾಸಾಹೇಬರಿಗೆ ಅವಮಾನಿಸುತ್ತಾರೆ ಎಂದರೆ ಇನ್ನು ಸಾಮಾನ್ಯ ಜನರಿಗೆ ಬಾಬಾಸಾಹೇಬರನ್ನು ಗೌರವಿಸುವಷ್ಟು ಪರಿಜ್ಞಾನ ಹೇಗೆ ಬರಲು ಸಾಧ್ಯ ? ಇದನ್ನು ಎಲ್ಲಾ ಅಂಬೇಡ್ಕರ್ ವಾದಿಗಳು ಅರ್ಥಮಾಡಿಕೊಳ್ಳಬೇಕಿದೆ.

ಬಂಧುಗಳೇ  ಸ್ವಾಮಿ ವಿವೇಕಾನಂದರು ಹೇಳಿರುವ ಹಾಗೆ  Teacher will be piller of the nation,  killer of the nation,  teacher will be director of the nation,  damager of the nation  ಈ ಮಾತುಗಳು ಬಹಳ ಗಂಭೀರವಾದಂತವುಗಳು .  ಒಬ್ಬ ಡಾಕ್ಟರ್ ತಪ್ಪು ಮಾಡಿದರೆ  ಒಬ್ಬ ರೋಗಿ ಸಾಯಬಹುದು, ಒಬ್ಬ  ಎಂಜಿನಿಯರ್ ತಪ್ಪು ಮಾಡಿದರೆ ಒಂದು ಪ್ರಾಜೆಕ್ಟ್ ಹಾಳಾಗಬಹುದು, ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ಕಲಿಕೆಯ ಸಮುದಾಯ ಅವರನ್ನು ನಂಬಿರುವ ಕುಟುಂಬಗಳು  ಸರ್ವನಾಶವಾಗುತ್ತವೆ. ಅಂತಹ ವಿದ್ಯಾರ್ಥಿಗಳು  ಸಮಾಜಕ್ಕೆ ಕಂಟಕಪ್ರಾಯವಾಗಿಬಿಡುತ್ತಾರೆ.  ಇವರಿಂದ ಇಡೀ ವ್ಯವಸ್ಥೆಯೇ ಒಂದು ರೋಗಗ್ರಸ್ಥ ಸಮಾಜವಾಗಿಬಿಡುತ್ತದೆ.  ಇಂತಹ ವಿದ್ಯಾರ್ಥಿಗಳನ್ನು ಸರಿದಾರಿಗೆ ತಂದಿಲ್ಲವಾದರೆ  ಇವರು ಸಮಾಜದಲ್ಲಿ  ಕೋಮುದಳ್ಳುರಿಯ ರೂವಾರಿಗಳಾಗುತ್ತಾರೆ.

ಸಮಾಜದ ತಜ್ಞರು ಹೇಳುವಂತೆ ಒಬ್ಬ ವಿದ್ಯಾರ್ಥಿ ತಪ್ಪು ದಾರಿಗೆ ಇಳಿದಿದ್ದಾನೆ ಎಂದರೆ ಅದು ಅವನ ತಪ್ಪಲ್ಲಾ ಆತನಿಗೆ ಬೋಧಿಸಿದ ಶಿಕ್ಷಕನದೆ ತಪ್ಪು ಎಂದು ಹೇಳಿರುವ ಮಾತುಗಳು ಉಂಟು. ಹಾಗಾಗಿ ಇತ್ತೀಚಿಗೆ ತಮ್ಮಗಳ ಮೋಜಿನ ಮಸ್ತಿಗಾಗಿ ಕೋಲಾರದ ಜೈನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳು ಬಾಬಾಸಾಹೇಬರನ್ನು ಅವಮಾನ ಮಾಡಿ ಮಾತನಾಡಿರುವುದು ಇಡೀ ಭಾರತೀಯ ಜನ ಸಮುದಾಯದ ಭಾವನೆಗಳಿಗೆ ದಕ್ಕೆ ತರುವುದಲ್ಲದೆ ಬಾಬಾಸಾಹೇಬರ ವ್ಯಕ್ತಿತ್ವಕ್ಕೆ ಅಪಮಾನ ಮಾಡಿದ್ದಾರೆ.  ಇವರು ಎಷ್ಟೇ ಒಳ್ಳೆಯ ಶಿಕ್ಷಣ ಪಡೆದಿದ್ದರು ಇವರಿಗೆ ಸಾಮಾಜಿಕ ಪ್ರಜ್ಞೆ ಎನ್ನುವುದನ್ನು ಇಂತಹ ಶಿಕ್ಷಣ ಸಂಸ್ಥೆಗಳು ಕಲಿಸುವಲ್ಲಿ  ವಿಪುಲವಾಗುತ್ತಿವೆ ಹಾಗು  ವಿಪುಲವಾಗಿವೆ ಎಂದರೆ ತಪ್ಪಾಗಲಾರದು.

ಘನಸರ್ಕಾರ ಮತ್ತು ನಾಡಿನ ಪ್ರಜ್ಞಾವಂತರು ಇಂತಹ  ಸಂಸ್ಥೆಗೆ ನೋಟೀಸ್ ನೀಡುವ ಮೂಲಕ, ಸಂಸ್ಥೆಯ ಆಡಳಿತ ಮಂಡಳಿಯನ್ನು  ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸಿ  ಕ್ಷಮಾಪಣೆಯನ್ನು  ಕೇಳುವವರೆಗೂ ಸಂಸ್ಥೆಯ ಕಾರ್ಯಕಲಾಪಗಳಿಗೆ ಅವಕಾಶ ನೀಡಬಾರದು ಮತ್ತು ಪರವಾನಗಿಯನ್ನು ರದ್ದು ಮಾಡುವುದು ಬಹಳ  ಮುಖ್ಯವಾದದಾಗಿದೆ. ಬಾಬಾಸಾಹೇಬರಿಗೆ ಅವಮಾನಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಸರ್ಕಾರಿ ಉದ್ಯೋಗ ನೀಡದಂತೆ ತೀರ್ಮಾನ ತೆಗೆದುಕೊಳ್ಳಬೇಕು. ಬಾಬಾಸಾಹೇಬರನ್ನು  ವಿರೋಧಿಸುವವರೆಲ್ಲರಿಗೂ ಅರ್ಥವಾಗಬೇಕು. ಅಂದು ಅಂತಹ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ ಬಾಬಾಸಾಹೇಬರು ಅಂದರೆ ಯಾರೂ? ಸಂವಿಧಾನವೆಂದರೆ ಏನು ? ಅದಕ್ಕೆ ಎಷ್ಟು ಶಕ್ತಿ ಇದೆ ಎನ್ನುವ ಅರಿವಾಗುತ್ತದೆ. ಹಾಗೆಯೇ ಇನ್ನು ಮುಂದೆ ಯಾವ ವಿದ್ಯಾರ್ಥಿಯಾಗಲಿ, ವಿದ್ಯಾಸಂಸ್ಥೆಯಾಗಲಿ ಇಂತಹ ಕೃತ್ಯಗಳಿಗೆ ಅವಕಾಶ ನೀಡಲು ಮುಂದಾಗುವುದಿಲ್ಲಾ. ಸರ್ಕಾರಕ್ಕೆ ನಿಜವಾಗಿಯೂ ಬಾಬಾಸಾಹೇಬರ ಬಗೆಗಾಗಲಿ ಅಥವಾ ಸಂವಿಧಾನದ ಬಗೆಗಾಗಲಿ ಗೌರವವಿದ್ದಲ್ಲಿ ಇಂತಹ ತೀರ್ಮಾನ ತೆಗೆದುಕೊಂಡರೆ ನಿಜವಾಗಿಯೂ ಬಾಬಾಸಾಹೇಬರಿಗೆ ಅವರ ಅನುಯಾಯಿಗಳ ಭಾವನೆಗಳಿಗೆ ಗೌರವನೀಡಿದಂತೆ ಎನ್ನಬಹುದು.

ಬಂಧುಗಳೇ ಬಾಬಾಸಾಹೇಬರು ತಾನು ಕಂಡ ಪ್ರಭುದ್ದ ಭಾರತದ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು  ವಿದ್ಯಾರ್ಥಿಗಳ ಹೆಗಲಿಗೆ ಹಾಕಿದ್ದರು. ಇದನ್ನು ಯಾವ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೇಳದಿರುವುದೇ ಈ ದೇಶದ ಶಿಕ್ಷಣ ಸಂಸ್ಥೆಗಳ ದುರಂತ,  ಬಾಬಾಸಾಹೇಬರು ಹೇಳಿದಂತೆ Dear brothers and sisters  today you are the students but tomorrow you are the nation builders.  ಈ ಮಾತಿನ್ನು ಬಾಬಾಸಾಹೇಬರು ವಿದ್ಯಾರ್ಥಿಗಳ ಎಷ್ಟು ನಂಬಿಕೆ ಇಟ್ಟು ಹೇಳಿದ್ದಾರೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಅರ್ಥಮಾಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಸೋತಿವೆ ಎನ್ನಬಹುದು.

ವಿಜ್ಞಾನದ ಪಾಠ ಮಾಡುವ ಶಿಕ್ಷಕ  ದಿನನಿತ್ಯ ಪಂಚಾಂಗ, ಶಾಸ್ತ್ರ,  ನಿತ್ಯಭವಿಷ್ಯ,  ಅದೃಷ್ಟ,  ಹಣೆಬರಹದ ಬಗ್ಗೆ ಮಾತನಾಡಿದರೆ  ವಿಜ್ಞಾನಕ್ಕೆ ಇನ್ನೆಲ್ಲಿಯಾ ಬೆಲೆ ಸಿಕ್ಕಂತಾಗುತ್ತದೆ. ವಿಜ್ಞಾನದ ಶಿಕ್ಷಕ  ವಿಜ್ಞಾನದ ಪಾಠ ಮಾಡಬೇಕು. ಜೊತೆಗೆ ಬಸವಣ್ಣನ  ತತ್ವಗಳನ್ನು ಎಲ್ಲರಿಗೂ ತಿಳಿಹೇಳಬೇಕಾಗಿದೆ.

ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದವ ಪೂಜೆ ಮಾಡಯ್ಯ, ಆತನ ತಾನು ಶುದ್ಧ, ಆತನ ಮನಶುದ್ಧ ,  ಆತನ ಭಾವಶುದ್ಧ ಆತನ ಮನೆಯೊಳಗೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರುಪಾವನ ಕೂಡಲ ಸಂಗಮದೇವ. ಎನ್ನುವುದನ್ನು ಅರಿಯಬೇಕಾಗಿದೆ.

ಕುವೆಂಪು ಹೇಳುವಂತೆ  ವಿದ್ಯಾರ್ಥಿಗಳು  ಹೊಸ ಹೊಸ ಆವಿಸ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು.  ಯಾವುದೇ ಜಾತಿ ಧರ್ಮಕ್ಕೆ ಅಂಟಿಕೊಂಡು ಕೂರಬಾರದು. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗ ತೋರಿಸಿ  ಒಳ್ಳೆಯ ಸತ್ಪ್ರಜೆಯನ್ನಾಗಿ ಮಾಡಿದಾಗ ಮಾತ್ರ ಶಿಕ್ಷಣ ಸಂಸ್ಥೆಗೆ ಹಾಗು ಬೋಧಿಸಿದ ಶಿಕ್ಷಕನಿಗೆ  ಗೌರವ ಸಿಕ್ಕಂತಾಗುತ್ತದೆ.  ಮಗು ಹುಟ್ಟುತ್ತಾ ವಿಶ್ವ ಮಾನವ ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನ್ನನ್ನಾಗಿ ಮಾಡುತ್ತೇವೆ,  ಮತ್ತೆ ವಿಶ್ವ ಮಾನವನಾಗಬೇಕಾದರೆ  ಉತ್ತಮ ಶಿಕ್ಷಣ ನೀಡಬೇಕು ಎಂದಿರುವುದನ್ನು  ಜೈನ್ ನಂತಹ ಶಿಕ್ಷಣ ಸಂಸ್ಥೆಗಳು, ಅಲ್ಲಿನ ಬೋಧಕರು, ಆಡಳಿತ ಮಂಡಳಿ ಮರೆತಿವೆ ಎನ್ನಬಹುದು.

ಇಂತಹ ಶಿಕ್ಷಣ ಸಂಸ್ಥೆಗಳಿಗೆ  ವಿಶ್ವ ವಿದ್ಯಾಲಯಗಳಿಂದ ಉತ್ತಮ ಮಾರ್ಗದರ್ಶನದ ಅಗತ್ಯವಿದೆ.  ಬಾಬಾಸಾಹೇಬರನ್ನು ಅವಮಾನಿಸಿದ, ಅವಮಾನಿಸುವ ಸಂಸ್ಥೆಗಳ ಪರವಾನಗಿಯನ್ನು ಸರ್ಕಾರ ರದ್ದುಗೊಳಿಸಬೇಕು. ಅಲ್ಲಿಯವರೆವಿಗೂ ಬಾಬಾಸಾಹೇಬರ ಅನುಯಾಯಿಗಳ ಹೋರಾಟದ  ಅನಿವಾರ್ಯತೆ  ನಮ್ಮ ನಿಮ್ಮೆಲ್ಲರದಾಗಿದೆ.

ಜಾಗೃತರಾಗಿ, ಚಿಂತಿಸಿ, ಒಂದಾಗಿ 


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ