ಸೋಫಿಯಾ ಖುರೇಷಿ ಬಗ್ಗೆ ಅವಹೇಳನ: ನಿಮ್ಮ ಬಗ್ಗೆ ಇಡೀ ದೇಶವೇ ನಾಚಿಕೆಪಡುತ್ತಿದೆ: ಬಿಜೆಪಿ ಸಚಿವನಿಗೆ ಸುಪ್ರೀಂ ಕೋರ್ಟ್ ಛೀಮಾರಿ

ನವದೆಹಲಿ: ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶ ಬಿಜೆಪಿ ಸಚಿವ ಕುನ್ವಾರ್ ವಿಜಯ್ ಶಾ (Vijay Shah) ಅವರನ್ನು ಸುಪ್ರೀಂ ಕೋರ್ಟ್(Supreme Court) ಇಂದು ತೀವ್ರ ತರಾಟೆಗೆ ತೆಗೆದುಕೊಂಡಿತು.
ಕರ್ನಲ್ ಸೋಫಿಯಾ ಖುರೇಷಿ(Colonel Sophia Qureshi) ಬಳಿ ಕ್ಷಮೆಯಾಚಿಸುವುದಾಗಿ ಸಚಿವರ ಹೇಳಿಕೆಗೆ ಗರಂ ಆದ ನ್ಯಾ.ಕಾಂತ್, ಎಲ್ಲಿ ಕ್ಷಮಾಪಣೆ ಕೇಳಲಾಯಿತು? ಯಾವ ಕ್ಷಮಾಪಣೆ? ಯಾವ ರೀತಿಯ ಕ್ಷಮಾಪಣೆ ಕೇಳಲಾಯಿತು ಎಂದು ತರಾಟೆಗೆತ್ತಿಕೊಂಡರಲ್ಲದೇ, ಇಂತಹ ಕ್ಷಮೆಯಾಚನೆ ಸ್ವೀಕರಿಸಲು ನಾವು ಇಚ್ಛಿಸುವುದಿಲ್ಲ ಎಂದರು.
ನಿಮ್ಮ ಕ್ಷಮೆಯಾಚನೆ ಯಾವರೀತಿಯದ್ದು? ಮೊಸಳೆ ಕಣ್ಣೀರೋ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಕ್ಷಮಾಪಣೆ ಬೇಡ, ಕಾನೂನಿನ ಪ್ರಕಾರ ಇದನ್ನು ಹೇಗೆ ನಿರ್ವಹಿಸಬೇಕೋ ಗೊತ್ತಿದೆ ಎಂದು ನ್ಯಾಯಾಲಯ ಹೇಳಿತು.
ನೀವು ಸಾರ್ವಜನಿಕ ವ್ಯಕ್ತಿಯಾಗಿದ್ದೀರಿ, ರಾಜಕಾರಣಿಯಾಗಿದ್ದೀರಿ, ನಿಮ್ಮ ಮಾತಿನಲ್ಲಿ ತೂಕ ಇರಬೇಕು. ನಿಮ್ಮ ಬಗ್ಗೆ ಇಡೀ ದೇಶವೇ ನಾಚಿಕೆ ಪಡುತ್ತಿದೆ ಎಂದು ನ್ಯಾಯಪೀಠ ತೀವ್ರವಾಗಿ ತರಾಟೆಗೆತ್ತಿಕೊಂಡಿತು.
‘ಆಪರೇಷನ್ ಸಿಂಧೂರ'(Operation Sindhoora) ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದ ಭಾರತೀಯ ಸೇನಾಧಿಕಾರಿ ಖುರೇಷಿ ಬಗ್ಗೆ ಸಚಿವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮಧ್ಯ ಪ್ರದೇಶ ಹೈಕೋರ್ಟ್ ಸೂಚಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿದ ಸಚಿವ ಶಾ, ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದರು. ನ್ಯಾ.ಸೂರ್ಯ ಕಾಂತ್ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿದ್ದು, ಈ ವೇಳೆ ಪೀಠವು ಶಾ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: