ತಾಯಿ ಇಲ್ಲದೇ ಬದುಕಲಾರೆ ಎಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ!
09/02/2021
ಬಂಟ್ವಾಳ: ಅನಾರೋಗ್ಯಕ್ಕೊಳಗಾದ ತಾಯಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಮಗ, ತಾಯಿಗಿಂತಲೂ ಮೊದಲು ನಾನೇ ಹೋಗುತ್ತೇನೆ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಅನಂತಾಡಿ ಪಂತಡ್ಕ ನಿವಾಸಿ ನೀರಜ್(30) ಆತ್ಮಹತ್ಯೆಗೆ ಶರಣಾದ ಯುವಕ. ನೀರಜ್ ಅವರ ತಾಯಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಅವರು ಬದುಕುವುದಿಲ್ಲ ಎಂದು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾತ್ರಿ ಪಾಣೆಮಂಗಳೂರು ಸೇತುವೆಯಿಂದ ನದಿಗೆ ಹಾರಿದ ಯುವಕ ನಾಪತ್ತೆಯಾಗಿದ್ದು, ಮಂಗಳವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಯುವಕನನ್ನು ರಕ್ಷಿಸಲು ಸ್ಥಳೀಯ ಈಜುಗಾರರಾದ ಮೊಹಮ್ಮದ್ ನಂದಾವರ ಹಾಗೂ ತಂಡದವರು ಮತ್ತುಅಗ್ನಿಶಾಮಕ ದಳ ಸಿಬ್ಬಂದಿ ನಿರಂತರವಾಗಿ ಶ್ರಮಿಸಿದರು. ಆದರೆ ಯುವಕ ಪತ್ತೆಯಾಗಲೇ ಇಲ್ಲ.


























