ಕತ್ತಿಯಿಂದ ಕಡಿದು ತಂದೆಯನ್ನೇ ಕೊಂದ ಮಗ!
ಬ್ರಹ್ಮಾವರ: ಕ್ಷುಲ್ಲಕ ಕಾರಣಕ್ಕಾಗಿ ಮಗ ತನ್ನ ತಂದೆಯನ್ನೆ ಕಡಿದು ಕೊಂದ ಘಟನೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಮೊಗವೀರಪೇಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯ ನಿವಾಸಿ ಸಾಧು ಮರಕಾಲ (68) ಕೊಲೆಯಾಗಿದ್ದು ತಲೆಮರೆಸಿಕೊಂಡಿದ್ದ ಆರೋಪಿ, ಮೃತರ ಪುತ್ರ ಆನಂದ (50) ಎಂಬಾತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ
ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಸಾಧು ಮರಕಾಲ ದಂಪತಿಗಳ ಮಕ್ಕಳು ಇತರೆಡೆ ವಾಸವಿದ್ದು ಆಗಾಗ್ಗೆ ಬಂದು ಹೋಗುತ್ತಿದ್ದರು. ಹಾಗೆಯೇ ಪುತ್ರ ಆನಂದ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಮನೆಗೆ ಬಂದಾಗೆಲ್ಲಾ ಗಲಾಟೆ ನಡೆಯುತ್ತಿತ್ತು. ಶನಿವಾರ ಕೂಡ ಆನಂದ ಮನೆಗೆ ಬಂದಿದ್ದು ತಂದೆ ಮಗನ ನಡುವೆ ಕಲಹ ನಡೆದು ಕತ್ತಿಯಿಂದ ತಂದೆಯ ಕಾಲಿನ ಭಾಗ ಕಡಿದು ಆರೋಪಿ ಆನಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗಾಯಾಳುವನ್ನು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವಿಪರೀತ ರಕ್ತಸ್ರಾವದ್ದರಿಂದ ಸಾಧು ಮೃತಪಟ್ಟಿದ್ದಾರೆ.
ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿಎಂ, ಪಿಎಸ್ ಐ ರಾಜಶೇಖರ್ ವಂದಲಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























