ಇಂದು ಜನವರಿ 12 | ರಾಷ್ಟ್ರೀಯ ಯುವ ದಿನ - Mahanayaka

ಇಂದು ಜನವರಿ 12 | ರಾಷ್ಟ್ರೀಯ ಯುವ ದಿನ

prajwal maurya
12/01/2026

  • ಪ್ರಜ್ವಲ್ ಮೌರ್ಯ

ರಾಷ್ಟ್ರೀಯ ಯುವ ದಿನ,
ಸ್ವಾಮಿ ವಿವೇಕಾನಂದರ ಜನುಮ ದಿನ,
ಭಾರತೀಯರೆಲ್ಲರ ಆತ್ಮಾವಲೋಕನ ದಿನ,
ಸ್ವಾಭಿಮಾನ ಜಾಗೃತ ದಿನ….

ಯುವ ಸಂದೇಶ.
ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ/ ದೃಷ್ಟಿಕೋನದಲ್ಲಿ.
ನನ್ನ ನೆಲದ ಪ್ರೀತಿಯ ಸಹೋದರ/ಸಹೋದರಿಯರೆ. ಯುವಕ/ ಯುವತಿಯರೇ.
ನನ್ನ ನೆಲ ಭಾರತ ಇಂದು ಸರ್ವಸ್ವತಂತ್ರ , ಸಾರ್ವಭೌಮ ಒಕ್ಕೂಟ.
1947 ದೇಶ ವಿಭಜನೆಯ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪ್ರದೇಶವೇ ನನ್ನ ಭಾರತ….
ಅಂದು ನಾನು ಚಿಕಾಗೋದಲ್ಲಿ ನ ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಹೇಳಿದ್ದೆ, ವಿಶ್ವದ ಆಧ್ಯಾತ್ಮದ (ಸ್ವ ಚಿಂತನೆ) ತವರೂರು ಭಾರತ. ಸರ್ವ ಧರ್ಮ ಸಮನ್ವಯ ಮತ್ತು ಸಹೋದರತೆಯ ಸೌಹಾರ್ದ ನಾಡು ನಮ್ಮ ದೇಶ.  ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದ ನೆಲ ನಮ್ಮದು. ಇಡೀ ವಿಶ್ವಕ್ಕೆ ಧಾರ್ಮಿಕ ಸಹಾನುಭೂತಿಯನ್ನು ಕಲಿಸಿದ ದೇಶ. ಎಲ್ಲಾ ಧರ್ಮಗಳೂ ಮಾನವತೆಯ ಸಾರ ಎಂದು ನಿರೂಪಿಸಿರುವ ದೇಶ ಭಾರತ. ಧಾರ್ಮಿಕ ಸ್ವಾತಂತ್ರ್ಯದ ಹೆಮ್ಮೆಯ ನಾಗರೀಕತೆಯ ನಾಡು(ಸಿಂಧೂ ನಾಗರಿಕತೆ) ಎಂದು ಘಂಟಾಘೋಷವಾಗಿ ಹೇಳಿದ್ದೆ.

ಬಂಧುಗಳೇ ,
ಅಂದು ವಿದೇಶದಲ್ಲಿ ನನ್ನ ಧರ್ಮ ಮತ್ತು ದೇಶದ ಅಭಿಮಾನದಿಂದ ಅದರ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಇಲ್ಲಿನ ಕೊರತೆಗಳನ್ನು ಹೇಳದೆ ಕೇವಲ ನಾಗರೀಕತೆಯ ಶ್ರೇಷ್ಠತೆಯ ಬಗ್ಗೆ ಮಾತ್ರ ಮಾತನಾಡಿದೆ.  ಆದರೆ,…… ಇಂದು ಈ ಕ್ಷಣದಲ್ಲಿ ಅದೇ ಮಾತುಗಳನ್ನು ಪುನರುಚ್ಚರಿಸಲು ಅವರ ಮನಸ್ಸೇ ಒಪ್ಪುವುದಿಲ್ಲ.  ಅವರ ಆದರ್ಶ ಧ್ವನಿ ಗೌಣವಾಗುವ ರೀತಿ ಇಂದಿನ ಪರಿಸ್ಥಿತಿ. ನನ್ನ ಭಾರತೀಯರೆ,…..  131 ವರ್ಷಗಳ ನಂತರವೂ ಅಸ್ಪೃಶ್ಯತೆ ಎಲ್ಲರ ಅಂತರಂಗಗಳಲ್ಲಿ ಇನ್ನೂ ಜೀವಂತವಿದೆ.
ಕೇವಲ ಭೋಜನಹಾಗೂ ಸೌಲಭ್ಯಗಳ ಪಡೆಯುವಿಕೆಗಾಗಿ ಜೊತೆಯಲ್ಲಿ ಕುಳಿತುಕೊಳ್ಳುವುದು ಹಾಗೂ ಬೆರೆಯುವುದು ನಡೆಯುತ್ತಿದೆ ಆದರೆ ಅಂತರಂಗ ಇನ್ನು ಕತ್ತಲಲ್ಲೇ ಇದೆ.  ದೇವರ ಪರಿಕಲ್ಪನೆಯನ್ನೇ ಸಂಕ್ಷಿಪ್ತಗೊಳಿಸಿ ತಮಗಿಷ್ಟ ಬಂದಂತೆ ವ್ಯಾಖ್ಯಾನಗೊಳಿಸಲಾಗಿದೆ.  ದೇವರ ಹೆಸರಿನಲ್ಲಿ ಹಾಗೂ ಅಲ್ಲಿನ ಮಂದಿರಗಳಲ್ಲಿ ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ದೇವರನ್ನೇ ಕುಜ್ಜರನ್ನಾಗಿಸಲಾಗಿದೆ. ದೇವರು ದೇವಸ್ಥಾನದಲ್ಲಿ ಮಾತ್ರ ಇರುತ್ತಾನೆಂಬ ಸುಳ್ಳು ನಂಬಿಕೆಯನ್ನು ಬಳಸಿಕೊಂಡು ಜನರನ್ನ ವಂಚಿಸಲಾಗುತ್ತಿದೆ ಭಯಭೀತಿಗೊಳಿಸಿ ತಮ್ಮ ಪ್ರಭುತ್ವವನ್ನ ಉಳಿಸಿಕೊಳ್ಳುವೆಡೆ ಹೆಜ್ಜೆ ಇಡುತ್ತಿದ್ದಾರೆ ಹಾಗಾಗಿ ಯುವಜನರು ಜಾಗೃತರಾಗಿ ಚಿಂತಿಸಬೇಕಿದೆ.  ಹಲವು ಬಡವರು ನಿರ್ಗತಿಕರು ಹಾಗೂ ತಳವರ್ಗದ ಜನರ ಮೇಲೆ ಜಾತಿಯ ಕಾರಣಕ್ಕೆ ಹಲ್ಲೆಗಳಾಗುತ್ತಿವೆ. ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಕೆಲಸಗಳಿಗೂ ಜಾತಿಯ ಪ್ರಮಾಣ ಪತ್ರ ಅನಿವಾರ್ಯವಾಗಿದೆ. ಮನೆಯನ್ನ ಬಾಡಿಗೆಗೆ ಕೊಡಲು ಇದೊಂದು ಮಾನದಂಡವೇ ಆಗಿಬಿಟ್ಟಿದೆ.
ಜಾತಿಯ ಜನಗಣತಿ ಕೇವಲ ಹತ್ತು ವರ್ಷಕ್ಕೆ ಮಾತ್ರ ಎಂದು ಹೇಳಿದ್ದು ಹುಸಿಯಾಗಿ ಇಂದಿಗೂ ಜಾತಿಗಣತಿ ನಡೆಯುತ್ತಿದೆ.  ಜಾತಿಗಣತಿಯ ಬಗ್ಗೆ ವೈಜ್ಞಾನಿಕವಾಗಿ ಯೋಚಿಸದೆ ಅಧಿಕಾರದ ಪಾಲುಗಳನ್ನು ಉಳಿಸಿಕೊಳ್ಳಲು ನಿಷ್ಪಕ್ಷ ಪಾತವಾಗಿ ತೀರ್ಮಾನಗಳನ್ನು ಕೈಗೊಳ್ಳದೆ ಸ್ವಜನ ಪಕ್ಷಪಾತದ ದೃಷ್ಟಿಯಿಂದ ಜಾತಿ ಗಣತಿಯನ್ನು ತಿರುಚಲಾಗುತ್ತಿದೆ ಇದು ಜಾತೀಯತೆಯನ್ನು ಮುಂದುವರಿಸುವ ಮುನ್ಸೂಚನೆ.  ಜಾತಿಯ ಅಸಮಾನತೆಯಿಂದ ಮೀಸಲಾತಿಯೂ ಅಸ್ತಿತ್ವದಲ್ಲಿದೆ.  ಮೀಸಲಾತಿಯು(ಪ್ರಾತಿನಿಧ್ಯ) ಅಮಾನವೀಯ ಹಾಗೂ ವಿಶೇಷ ಸೌಲಭ್ಯ ಎಂದು ಬಿಂಬಿಸಲಾಗುತ್ತಿದೆ.(ಅದೊಂದು ಪ್ರಾತಿನಿಧ್ಯ ಅಂದರೆ ಅವಕಾಶ ವಂಚಿತರಿಗೆ ಅವಕಾಶ ದೊರಕಿಸಿಕೊಡಲು ಇರುವ ಒಂದು ಸಾಧನ.)

ಭಾರತದ ಮಕ್ಕಳೇ,……  ಹೆಣ್ಣನ್ನು ಗೌರವಿಸಲ್ಪಡುವ(ಸಿಂಧೂ ನಾಗರೀಕತೆಯಲ್ಲಿ ) ದೇಶ ನನ್ನದೆಂಬ ಹೆಮ್ಮೆ ನನಗಿತ್ತು. ಆದರೆ, ವರದಕ್ಷಿಣೆ ರೂಪದಲ್ಲಿ ಹೆಣ್ಣಿನ ಮಾರಾಟ, ಹೆಣ್ಣು ಭ್ರೂಣ ಹತ್ಯೆ , ವೇಶ್ಯಾವಾಟಿಕೆ, ಸಾರ್ವಜನಿಕ ಸಾಮೂಹಿಕ ಅತ್ಯಾಚಾರ ಪ್ರತಿನಿತ್ಯದ ಘಟನೆಗಳೇ ಆಗಿರುವುದರಿಂದ ಅದನ್ನು ನಾನು ಹೇಗೆ ವರ್ಣಿಸಲಿ.  ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅಪೂರ್ವ ಮತದಾನದ ಅವಕಾಶ ಹಾಗೂ ಜವಾಬ್ದಾರಿ ಮತ್ತು ಪಾವಿತ್ರ್ಯವನ್ನು ಹಣ, ಹೆಂಡ ಸೀರೆ, ಪಂಚೆ ಜಾತಿ ಧರ್ಮಗಳಿಗೆ ಮಾರಿಕೊಳ್ಳುತ್ತಿರುವಾಗ ದೇಶದ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿ.

ಹಸಿವಿಗಿಂತ ಹಸು ಶ್ರೇಷ್ಠ,
ರಾಮನ ಆದರ್ಶಕ್ಕಿಂತ ರಾಮ ಮಂದಿರ ಶ್ರೇಷ್ಠ,
ಜೀವಕ್ಕಿಂತ ಮಸೀದಿ ಶ್ರೇಷ್ಠ,
ಪ್ರಾಣಕ್ಕಿಂತ ಚರ್ಚು ಶ್ರೇಷ್ಠ,
ಇಸ್ಲಾಂ ಉಳಿಸಲು ಬಾಂಬುಗಳು,
ಹಿಂದೂ ಧರ್ಮ(ವೈದಿಕ ಧರ್ಮ ಹಾಗೂ ಆಚರಣೆಗಳು) ಉಳಿಸಲು ಆಧುನಿಕ ಬಂದೂಕುಗಳು,(ಧರ್ಮವೆಂಬ ಅಫೀಮನ್ನು ಯುವಜನತೆಗೆ )
ಕ್ರಿಶ್ಚಿಯನ್ ಧರ್ಮ ಉಳಿಸಲು ಮತಾಂತರಗಳು,,
ಇದೇ ಏನು ನನ್ನ ನೆಲದ ಸ್ವಭಾವ.
ಬರ್ತ್ ಸರ್ಟಿಫಿಕೇಟಗೂ, ಡೆತ್ ಸರ್ಟಿಫಿಕೇಟಗೂ ಲಂಚ ಪಡೆಯುವ ದೇಶವನ್ನು ವಿವರಿಸುವುದಾದರೂ ಹೇಗೆ ?
ಉಕ್ಕಿನ ಶರೀರದ ಯುವಕರೇ,…..
ಈ ದೇಶದ ಭವಿಷ್ಯ ನೀವೇ ಎಂದು ಕನಸು ಕಂಡಿದ್ದೆ.
ಆದರೆ ,….
ಓ ನನ್ನ ಭಾರತದ ಯುವಕರೇ ,
ಕೇಸರಿ ಕೆಂಪು ನೀಲಿ ಹಸಿರು ಬಾವುಟಗಳ ಮುಖವಾಡಗಳಲ್ಲಿ ಹುದುಗಿರುವಿರಿ. ನಿಮ್ಮ ಕೆಲಸದ ನೆಲದ ಇತಿಹಾಸದ ಅರಿವಿಲ್ಲದೆ
ಕ್ರಿಯಾಶೀಲ ಚಿಂತನೆ ಮಾಡದೆ ದಾಸ್ಯಕ್ಕೆ, ಮೌಡ್ಯಕ್ಕೆ ಗುಲಾಮಗಿರಿಗೆ ಒಳಗಾಗಿ ನಿಮ್ಮ ಕೆಲಸಗಳಿಂದ ಹಿಂದೆ ಸರಿದಿರುವಿರಿ.

 

ಅದು ಈ ನೆಲದ ಗುಣವಲ್ಲ. ರಕ್ತಕ್ಕೆ ರಕ್ತ ಕೊಲೆಗೆ ಕೊಲೆ‌ ಈ ಮಣ್ಣಿನ ಸ್ವಭಾವವಲ್ಲ………  ಹಿಂದುವೋ, ಮುಸ್ಲಿಮೋ, ಕ್ರಿಶ್ಚಿಯನ್ನೋ, ಸಿಖ್ಖೋ, ಬೌದ್ಧನೋ, ಜೈನನೋ, ಪಾರ್ಸಿಯೋ ಏನಾದರೂ ಆಗಿರು ಅದು ನಿನ್ನ ವೈಯಕ್ತಿಕ ಗುರುತು ಮಾತ್ರ ನಿನ್ನ ಮನೆಯ ಹೊಸ್ತಿಲ ಒಳಗಿನ ಗುರುತು ಮಾತ್ರ. ಹೊರಗಡೆ ನೀವೆಲ್ಲರೂ ಈ ನೆಲದ ನೀವೆಲ್ಲರೂ ಭಾರತೀಯರು ನಮ್ಮ ದೇಶದ ಮುಂದಿನ ಜವಾಬ್ದಾರಿಯುತ ಪ್ರಜೆಗಳು
ನಿಮ್ಮ ನಿಷ್ಠೆ ಈ ನೆಲಕ್ಕೆ ಮಾತ್ರ.  ಏಳಿ, ಎದ್ದೇಳಿ, ಎಚ್ಚರಗೊಳ್ಳಿ,…….  ದಿಕ್ಕರಿಸಿ ಜಾತಿ ಸಂಕೋಲೆಯನ್ನು, ಮತ ಬ್ರಾಂತಿಯನ್ನ ಧಿಕ್ಕರಿಸಿ, ವಿಶಾಲ ಮನೋಭಾವವನ್ನು ಬೆಳೆಸಿಕೊಂಡು ಜಾಗ್ರತರಾಗಿ ಯೋಚನಾ ಶಕ್ತಿಯನ್ನು ವೃದ್ಧಿಸಿಕೊಳ್ಳಿರೂಡಿಸಿಕೊಳ್ಳಿ.  ಅಂದು ನಾನು ಚಿಕಾಗೋದಲ್ಲಿ ಬಾವಿ ಕಪ್ಪೆ ಮತ್ತು ಸಮುದ್ರದ ಕಪ್ಪೆಯ ಉದಾಹರಣೆ ನೀಡಿದ್ದೆ. ಇಂದು ಅದೇ ಉದಾಹರಣೆಯನ್ನು ಭಾರತೀಯ ಯುವಜನಾಂಗವನ್ನು ಕುರಿತು ಹೇಳಬೇಕಿದೆ.  ವಿಶಾಲ ಚಿಂತನೆಯ ಮಾದರಿಯಾಗದೆ ಬಾವಿ ಕಪ್ಪೆಯಾಗಿರುವಿರಿ. ನನ್ನ ದೃಷ್ಟಿಕೋನವನ್ನೇ ತಿರುಚಿ ಸಂಕ್ಷಿಪ್ತಗೊಳಿಸಿರುವಿರಿ.  ವಿವೇಚನೆ ಕಳೆದುಕೊಂಡಿರುವಿರಿ. ಜಾತಿ ಧರ್ಮ ಪಂಥಗಳ ಆಧಾರದಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಅಸಹನೆಯಿಂದ ದೇಶವನ್ನು ನಿಮ್ಮನ್ನೂ ವಂಚಿಸಿಕೊಳ್ಳುತ್ತಿರುವಿರಿ. ಆಧುನಿಕ ಭಾರತೀಯ ಯುವಕರ ದೇಹ ಉಕ್ಕಿನಂತಿರಲಿ. ಮನಸ್ಸಿನಲ್ಲಿ ಪ್ರೀತಿ ಕರುಣೆ ತುಂಬಿರಲಿ.  ಮತಾಂಧರಾಗಬೇಡಿ.
ಸಾರ್ವಜನಿಕ ಸೇವೆಯ — ದೇಶಭಕ್ತಿಯ ಹೆಸರಿನಲ್ಲಿ ಮೌಡ್ಯ ಕ್ಕೆ ದಾಸರಾಗಿ ದೇಶದ ಹಾಗೂ ಮಾನವ ಸಮಾಜದ ವಿಭಜನೆಗೆ ಕಾರಣರಾಗದೆ ತಾಳ್ಮೆವಹಿಸಿ, ವೈಜ್ಞಾನಿಕ ವೈಚಾರಿಕ ಹಾಗೂ ಆಧ್ಯಾತ್ಮಿಕ (ಸ್ವ ಆತ್ಮದ ಚಿಂತನೆ ದೇವರು ಧರ್ಮ ನಂಬಿಕೆಗಳು ನಮ್ಮ ಒಳಿತಿಗಾಗಿ, ಸಮಾಜದ ಕ್ರಮಬದ್ಧತೆಗಾಗಿ, ಬದುಕಿನ ಸಾರ್ಥಕತೆಗಾಗಿ ಉಪಯೋಗವಾಗಬೇಕೆ ಹೊರತು ಮಾನವ ಜನಾಂಗದ ವಿನಾಶಕ್ಕಲ್ಲ. ನಂಬಿಕೆಗಳನ್ನ ಪರಿಶೀಲಿಸಿ ನಂಬಿ ಹಾಗೂ ತಿಳುವಳಿಕೆಯನ್ನ ರೂಡಿಸಿಕೊಳ್ಳಿ ನಂಬಿಕೆ ಗಿಂತ ತಿಳುವಳಿಕೆ ಇರುವುದು ಒಳಿತು.
ಇದನ್ನು ಮರೆತು  ವಿಶ್ವಗುರುವಾಗುವ ಭಾರತದ ಅವಕಾಶಗಳನ್ನು ನಾಶಮಾಡುತ್ತಿರುವಿರಿ.  ಇನ್ನಾದರೂ ಎಚ್ವೆತ್ತುಕೊಳ್ಳಿ.  ನನ್ನ ಕನಸಿನ ಸಮಾನತೆಯ, ವೈಚಾರಿಕತೆಯ, ಸಹೋದರತೆಯ, ಸರ್ವ ಧರ್ಮ ಸಮನ್ವಯದ ಭಾರತವನ್ನು ಮರು ಸೃಷ್ಟಿಸಲು ನಿಮ್ಮ ಎಲ್ಲಾ ಪ್ರಯತ್ನ ಸಾಗಲಿ ಎಂದು ಆಶಿಸುತ್ತಾ…….  ಜೈ ಭಾರತ್………..


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ