ಮಗನ ಮೃತದೇಹ ನೋಡಲಾರೆ!: ಪಿಕಪ್ ಸಹಿತ ನದಿಗೆ ಬಿದ್ದ ಮಗ, ತಾಯಿ ಆತ್ಮಹತ್ಯೆ

ಕಳಸ: ಮಗ ಸಾವನ್ನಪ್ಪಿದ್ದಕ್ಕೆ ಮನನೊಂದು ಮಗನ ಮೃತದೇಹ ಸಿಗುವ ಮುನ್ನವೇ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನ 48 ವರ್ಷದ ರವಿಕಲಾ ಎಂದು ಗುರುತಿಸಲಾಗಿದೆ. ಮೃತ ರವಿಕಲಾ ಪುತ್ರ 23 ವರ್ಷದ ಶಮಂತ್ ಪಿಕಪ್ ಜೀಪಿನಲ್ಲಿ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದನು. ಮಲೆನಾಡಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಜೀಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಪಕ್ಕದಲ್ಲೇ ಹರಿಯುತ್ತಿದ್ದ ಭದ್ರಾ ನದಿಗೆ ಉರುಳಿ ಬಿದ್ದು ಶಮಂತ್ ಸಾವನ್ನಪ್ಪಿದ್ದನು.
ಶಮಂತ್ ಹಲವು ದಿನಗಳಿಂದ ಪಿಕಪ್ ಜೀಪ್ ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದನು. ನಿನ್ನೆ ಸಂಜೆ ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಗ್ರಾಮಕ್ಕೆ ಹೋಗುವಾಗ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದನು.
ಕಾಫಿ ತೋಟದಿಂದ ಕಾರ್ಮಿಕರನ್ನ ಕರೆತರುವಾಗ ಅಪಘಾತ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಮಲೆನಾಡಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಭದ್ರಾ ನದಿಯಿಂದ ಜೀಪ್ ಮೇಲೆತ್ತುವ ಕಾರ್ಯಾಚರಣೆಗೂ ತೊಂದರೆಯಾಗಿತ್ತು.
ಆದರೆ, ನಿನ್ನೆ ಸಂಜೆ ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಆದರೆ, ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: