ವಿಧಾನಸಭೆಯ ಅಧಿವೇಶನಕ್ಕೆ ಸಿದ್ಧತೆ: ಸಿಬ್ಬಂದಿಗೆ ನಿರ್ದೇಶನ ನೀಡಿದ ಸ್ಪೀಕರ್

ಬೆಂಗಳೂರು: ವಿಧಾನಸಭೆಯ ಅಧಿವೇಶನಕ್ಕೆ ಸಿದ್ಧತೆ ಆರಂಭಿಸುವಂತೆ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದು ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ವಿಧಾನಸಭೆಯ ಅಧಿಕಾರಿಗಳನ್ನುದ್ದೇಶಿಸಿ ಅವರು, ಅಧಿವೇಶನವನ್ನು ಯಾವಾಗ ಮತ್ತು ಎಲ್ಲಿ ನಡೆಸಬೇಕು ಎಂದು ನಿರ್ಧರಿಸುವುದು ಸರ್ಕಾರದ ಪರಮಾಧಿಕಾರವಾಗಿದೆ. ಆದರೆ, ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಮತ್ತು ಅಧಿವೇಶನ ಸುಗಮವಾಗಿ ನಡೆಯಲು ಸಜ್ಜಾಗಿದ್ದೇವೆ ಎಂಬುದನ್ನು ಸ್ವಯಂ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಕೋವಿಡ್ ನ ಪ್ರತ್ಯೇಕೀಕರಣ ಮತ್ತು ಲಾಕ್ ಡೌನ್ ಮನೋಸ್ಥಿತಿಯಿಂದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರಬರಬೇಕಾದ ಅಗತ್ಯ ಪ್ರತಿಪಾದಿಸಿದ ಅವರು, ವ್ಯಾಪಕವಾಗಿ ಕರ್ತವ್ಯ ನಿರ್ವಹಣೆ ಮಾಡುವುದರೊಂದಿಗೆ ಈವರೆಗೆ ಆಗಿರುವ ನಷ್ಟವನ್ನು ಸರಿದೂಗಿಸುವಂತೆ ಸಲಹೆ ಮಾಡಿದರು.
ನಾವು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಕೆಲಸವನ್ನು ತ್ವರಿತ ವಿಧಾನದ ಮೂಲಕ ಪೂರ್ಣಗೊಳಿಸಬೇಕಾಗಿದೆ ಎಂದ ಅವರು, ನಾವಿನ್ಯತೆಯ ಬಗ್ಗೆ ಚಿಂತಿಸುವ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ಕರ್ನಾಟಕ ವಿಧಾನಸಭೆ ಮತ್ತು ಸಚಿವಾಲಯವನ್ನು ಮಾದರಿಯಾಗಿ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.