ಬಿಸಿಯೂಟ ಅಂದ್ರೆ ಸಾಕೆ? ತಿನ್ನೋ ಅನ್ನದಲ್ಲಿ ಹುಳ!: ಮಕ್ಕಳು ಊಟ ಮಾಡೋದು ಹೇಗೆ? - Mahanayaka

ಬಿಸಿಯೂಟ ಅಂದ್ರೆ ಸಾಕೆ? ತಿನ್ನೋ ಅನ್ನದಲ್ಲಿ ಹುಳ!: ಮಕ್ಕಳು ಊಟ ಮಾಡೋದು ಹೇಗೆ?

kadur pm shri school
03/01/2026

ಕಡೂರು (ಚಿಕ್ಕಮಗಳೂರು): ಸರ್ಕಾರದ ಮಹತ್ವಾಕಾಂಕ್ಷೆಯ ‘ಬಿಸಿಯೂಟ’ ಯೋಜನೆ ಇಂದು ಹಳ್ಳ ಹಿಡಿಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ಅರೆ ಬೆಂದ ಅನ್ನ ಮತ್ತು ಮಸಾಲೆ ಇಲ್ಲದ ಸಾಂಬಾರ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಎಲ್ಲಕ್ಕಿಂತ ಭಯಾನಕ ಸಂಗತಿಯೆಂದರೆ, ಮಕ್ಕಳಿಗೆ ನೀಡುವ ಆಹಾರದಲ್ಲಿ ಹುಳುಗಳು ಪತ್ತೆಯಾಗುತ್ತಿವೆ!

ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳದ್ದೇ ದರ್ಬಾರ್

ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳ ವರ್ತನೆ ಮಿತಿ ಮೀರಿದ್ದು, ಕೇಳುವವರೇ ಇಲ್ಲದಂತಾಗಿದೆ. ಸರಿಯಾಗಿ ಬೇಯದ ಅನ್ನ ಹಾಗೂ ರುಚಿಯಿಲ್ಲದ ಸಾಂಬಾರ್ ನೀಡುವ ಮೂಲಕ ಮಕ್ಕಳ ಆರೋಗ್ಯದ ಜೊತೆ ಆಟವಾಡಲಾಗುತ್ತಿದೆ. ಮಕ್ಕಳ ಈ ಗೋಳನ್ನು ಆಲಿಸಬೇಕಾದ ಶಿಕ್ಷಕರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಹುಳು ಕಂಡು ಮಕ್ಕಳು ಹೈರಾಣು

ಊಟ ಮಾಡುವಾಗ ಅನ್ನದಲ್ಲಿ ಹುಳುಗಳು ಕಂಡುಬರುತ್ತಿದ್ದು, ಪುಟ್ಟ ಪುಟ್ಟ ಮಕ್ಕಳು ಊಟ ಮಾಡಲಾಗದೇ ಕಣ್ಣೀರಿಡುತ್ತಿದ್ದಾರೆ. ಊಟದಲ್ಲಿ ಹುಳುಗಳಿವೆ ಎಂದು ಮಕ್ಕಳು ದೂರಿದರೂ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ‘ಡೋಂಟ್ ಕೇರ್’ ಎನ್ನುತ್ತಿದೆ. ಇದರಿಂದ ಬೇಸತ್ತ ಮಕ್ಕಳು ತಟ್ಟೆಯಲ್ಲಿನ ಅನ್ನವನ್ನೇ ಚೆಲ್ಲಿ ಊಟ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಮನೆಯಿಂದಲೇ ಊಟದ ಡಬ್ಬಿ: ಶಾಲೆಯ ಬಿಸಿಯೂಟದ ಗುಣಮಟ್ಟ ಹದಗೆಟ್ಟಿರುವುದರಿಂದ ಹಲವು ಮಕ್ಕಳು ಈಗ ಶಾಲಾ ಊಟವನ್ನು ಬಿಟ್ಟು ಮನೆಯಿಂದಲೇ ಊಟ ತರುತ್ತಿದ್ದಾರೆ.
  • ಸ್ಥಳೀಯರ ಆಕ್ರೋಶ: ಮಕ್ಕಳ ಈ ಅವ್ಯವಸ್ಥೆಯ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
  • ವ್ಯವಸ್ಥೆಯ ಮೌನಕ್ಕೆ ಪೋಷಕರ ಕಿಡಿ:  ಸರ್ಕಾರ ಮಕ್ಕಳ ಪೌಷ್ಟಿಕಾಂಶಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ, ಕಡೂರಿನ ಈ ಶಾಲೆಯಲ್ಲಿ ಮಾತ್ರ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ