ಚಾಮರಾಜನಗರದಲ್ಲಿ ಮನೆಗಳ್ಳರ ಹಾವಳಿ: ದಿನಕ್ಕೊಂದು ಕಳವು ಬೆಳಕಿಗೆ

ಚಾಮರಾಜನಗರ: ಬೇರೆ ಜಿಲ್ಲೆಗಳಿಗೆ, ಪಕ್ಕದಲ್ಲೇ ಇರುವ ಮೈಸೂರಿಗೆ ಹೋಲಿಕೆ ಮಾಡಿದರೇ ಚಾಮರಾಜನಗರ ಜಿಲ್ಲೆಯಲ್ಲಿ ಕಳವು, ಇತರೆ ಅಪರಾಧ ಚಟುವಟಿಕೆಗಳು ಕಡಿಮೆ ಇರುವ ಜಿಲ್ಲೆ ಎಂದೇ ಹೆಸರಾಗಿತ್ತು. ಆದರೆ, ಇತ್ತೀಚೆಗೆ ಈ ಮಾತು ಸುಳ್ಳಾಗುತ್ತಿದ್ದು ದಿನಕ್ಕೊಂದು ಮನೆಗಳವು ಪ್ರಕರಣ ನಡೆಯುತ್ತಿದೆ.
ಹೌದು…, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೇ ಕಳೆದ 4 ದಿನಗಳಲ್ಲಿ ಮೂರು ಮನೆಗೆ ಕನ್ನ ಹಾಕಿದ್ದಾರೆ. ಕನ್ನ ಹಾಕಲು ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ಜನರೇ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆಯೂ ನಡೆದಿದ್ದು ಕಳ್ಳರ ಕೃತ್ಯಕ್ಕೆ ಯಾಕೋ ಬ್ರೇಕ್ ಬೀಳುತ್ತಿಲ್ಲ.
ಕಳವು 1 : ಚಾಮರಾಜನಗರದ ಕರಿನಂಜನಪುರ ಹೊಸ ಬಡಾವಣೆಯಲ್ಲಿರುವ ವಿನೋದ್ ಎಂಬವರು ಪರ ಊರಿಗೆ ಹೋದ ವೇಳೆ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು 42 ಸಾವಿರ ರೂ. ಹಣ, ಟಿವಿ, ಯುಪಿಎಸ್,ಡೆಲ್ ಮಾನಿಟರ್, ಏರ್ ಕೂಲರ್ ಎಲ್ಲವನ್ನೂ ಹೊತ್ತೊಯ್ದಿದ್ದು ಇದರ ಅಂದಾಜು ಮೌಲ್ಯ 1.2 ಲಕ್ಷ ರೂ. ಆಗಿದೆ.
ಕಳವು- 2: ರಾಘವೇಂದ್ರ ಚಿತ್ರಮಂದಿರದ ಎದುರಿನ ಶೋಭಾ ಎಂಬವರ ಮನೆಗೆ ಕಳ್ಳರು ಬುಧವಾರ ರಾತ್ರಿ ಕನ್ನ ಹಾಕಿದ್ದು ಮಗಳ ಮದುವೆಗೆಂದು ಮಾಡಿಸಿಟ್ಟಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕ್ಷಣಾರ್ಧದಲ್ಲಿ ಮುಂದಿನ ಬಾಗಿಲು ಮೀಟಿ ಹಿಂದಿನ ಬಾಗಿಲಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಏಕಾಂಗಿಯಾಗಿ ವಾಸಿಸುತ್ತಿದ್ದ ಶೋಭಾ ಊರಿಗೆ ತೆರಳಿದ್ದನ್ನು ಗಮನಿಸಿ ಮಗಳ ಮದುವೆಗೆಂದು ಮಾಡಿಸಿದ್ದ 3 ನೆಕ್ಲೇಸ್, 2 ಜೊತೆ ಬಳೆ, 2 ಸರ, 30 ಜೊತೆ ಓಲೆ, 10 ಉಂಗುರು, ಮುಕ್ಕಾಲು ಕೆಜಿಯಷ್ಟು ಬೆಳ್ಳಿ ಸಾಮಾನುಗಳು ಸೇರಿ ₹15 ಲಕ್ಷಕ್ಕೂ ಅಧಿಕ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಕಳವು 3: ಮನೆಯ ಬಾಗಿಲು ಮುರಿದು ಚಿನ್ನಾಭರಣ, ಹಣ ದೋಚಿರುವ ಘಟನೆ ಚಾಮರಾಜನಗರದ ವಿವೇಕನಗರ ಬಡಾವಣೆಯ ಮನೆಯಲ್ಲಿ ನಡೆದಿರುವುದು ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ. ಚಾಮರಾಜನಗರದ ವಕೀಲ ಷಡಕ್ಷರಿ ಎಂಬವರ ಮನೆಯಲ್ಲಿ ಈ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಬಾಗಿಲನ್ನು ಮೀಟಿ ಕಳ್ಳತನ ಎಸಗಿದ್ದು ಚಿನ್ನಾಭರಣ, ಬೆಳ್ಳಿ ಸಾಮಾನು ಹಾಗೂ ಹಣ ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಘಟನೆ 4:
ಮನೆಗೆ ಕನ್ನ ಹಾಕಲು ಹೊಂಚು ಹಾಕುತ್ತಿದ್ದ ವ್ಯಕ್ತಿಯೊಬ್ಬ ಜನರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರದ ಕೋರ್ಟ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿತ್ತು.ಕೋರ್ಟ್ ರಸ್ತೆಯ ಮನೆಯೊಂದಕ್ಕೆ ಕನ್ನ ಹಾಕಲು ಹೊಂಚು ಹಾಕಿ ಯತ್ನಿಸುತ್ತಿದ್ದ ವೇಳೆ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಗಣಿ ದುರಂತದ ಆರೋಪಿಗಳ ಬಂಧನವೂ ಇಲ್ಲಾ :
ಕಳೆದ 10 ತಿಂಗಳಿನ ಅಂತರದಲ್ಲಿ ಎರಡು ಗಣಿದುರಂತ ಸಂಭವಿಸಿ 6 ಮಂದಿ ಪ್ರಾಣ ಕಳೆದುಕೊಂಡಿದ್ದರು. ಗಣಿ ಮಾಲೀಕರು, ಗುತ್ತಿಗೆದಾರ ಬಂಧನವಾಗದಿರುವುದು ಮತ್ತೊಂದು ವಿಪರ್ಯಾಸವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಳಿಯ ಗುಮ್ಮಕ್ಕಲು ಗುಡ್ಡದ ಬಳಿ ನಡೆಸುತ್ತಿದ್ದ ಬಳಿ ಕಲ್ಲು ಕ್ವಾರಿಯ ಗುಡ್ಡ ಕುಸಿದು ಮೂವರು ಪ್ರಾಣ ಕಳೆದುಕೊಂಡ ಘಟನೆ ನಡೆದು 10 ತಿಂಗಳುಗಳಾದರೂ ಪ್ರಮುಖ ಆರೋಪಿ ಹಕ್ಕೀಂ ಇನ್ನೂ ಬಂಧನವಾಗಿಲ್ಲ. ಬಿಸಲವಾಡಿ ಬಿಳಿಕಲ್ಲು ಕ್ವಾರಿ ಕುಸಿದು 3 ಮಂದಿ ಮೃತಪಟ್ಟ ಘಟನೆಯ ಆರೋಪಿಗಳನ್ನೂ ಪೊಲೀಸರು ಬಂಧಿಸದಿರುವುದು ಸಾರ್ವಜನಿಕ ವಲಯದಲ್ಲಿ ಪೊಲೀಸರು ಟೀಕೆಗೆ ಗುರಿಯಾಗಿದ್ದಾರೆ.
ಪ್ರವಾಸಿಗ ನೀರುಪಾಲು:
ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗನೋರ್ವ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಕಾವೇರಿ ನದಿಯಲ್ಲಿ ನೀರುಪಾಲಾಗಿದ್ದಾನೆ. ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಅಂಬರೀಶ್(32) ಮೃತ ದುರ್ದೈವಿ. ತನ್ನ ಐವರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಈತ ನೀರಿಗಿಳಿದ ವೇಳೆ ಹರಿವಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಶವ ಹುಡುಕಾಟದಲ್ಲಿ ತೊಡಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ:
https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw